ಸಂಸದ ರಾಘವೇಂದ್ರ ಗೆಲ್ಲಿಸಿ, ಮೋದಿ ಕೈ ಬಲಪಡಿಸಬೇಕು: ಯಡಿಯೂರಪ್ಪ ಮನವಿ

KannadaprabhaNewsNetwork |  
Published : Feb 29, 2024, 02:04 AM IST
ಬಿಜೆಪಿ ಆಯೋಜಿಸಿದ್ದ ಪಕ್ಷದ ಎಸ್ಸಿ,ಎಸ್ಟಿ ಕಾರ್ಯಕರ್ತರ ಬೃಹತ್  ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರನ್ನು ಸನ್ಮಾನಿಸಲಾಯಿತು. | Kannada Prabha

ಸಾರಾಂಶ

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿರುವ, ಜನಪರ ಕಾಳಜಿ ಹೊಂದಿರುವ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸುವಂತೆ ಮಾಜಿ ಮುಖ್ಯಮಂತ್ರಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಶಿಕಾರಿಪುರದಲ್ಲಿ ಮನವಿ ಮಾಡಿದ್ದಾರೆ.

ಕನ್ನಡಪ್ರಭ ವಾರ್ತೆ, ಶಿಕಾರಿಪುರ

ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗಾಗಿ ಶ್ರಮಿಸಿರುವ, ಜನಪರ ಕಾಳಜಿ ಹೊಂದಿರುವ ಸಂಸದ ಬಿ.ವೈ.ರಾಘವೇಂದ್ರ ಅವರಿಗೆ ಈ ಬಾರಿ ಅತಿ ಹೆಚ್ಚಿನ ಮತಗಳ ಅಂತರದಲ್ಲಿ ಜಯಗಳಿಸುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಕೈಬಲಪಡಿಸುವಂತೆ ಮಾಜಿ ಮುಖ್ಯಮಂತ್ರಿ ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ ಮನವಿ ಮಾಡಿದರು.

ಬುಧವಾರ ಪಟ್ಟಣದ ಮಾರಿಕಾಂಬ ದೇವಸ್ಥಾನದ ರಂಗಮಂದಿರದಲ್ಲಿ ಬಿಜೆಪಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಬೃಹತ್ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.

ಇಡೀ ಜಗತ್ತು ಮೋದಿ ಕಾರ್ಯದ ಕುರಿತು ಮೆಚ್ಚುಗೆ ವ್ಯಕ್ತಪಡಿಸುತ್ತಿದೆ. ದೇಶದ ಭವಿಷ್ಯಕ್ಕಾಗಿ ಮತ್ತೊಮ್ಮೆ ಮೋದಿ ಪ್ರಧಾನಿ ಅಗಬೇಕಿದೆ. ದೇಶದಲ್ಲಿಯೇ ಅತಿ ಹೆಚ್ಚು ಅನುದಾನ ಜಿಲ್ಲೆಗೆ ತರುವ ಮೂಲಕ ಸಂಸದ ಸ್ಥಾನಕ್ಕೆ ರಾಘವೇಂದ್ರ ನ್ಯಾಯ ಒದಗಿಸಿದ್ದಾರೆ. ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಜಿಲ್ಲಾ ಕೇಂದ್ರಕ್ಕೆ ₹2 ಕೋಟಿ, ತಾಲೂಕು ಕೇಂದ್ರಕ್ಕೆ ₹50 ಲಕ್ಷ ಅನುದಾನ ನೀಡಿದ್ದೇನೆ. ಬಾಬು ಜಗಜೀವನರಾಂ ಭವನ ಸಹ ನಿರ್ಮಿಸಲಾಗಿದೆ. ತಾಂಡ ಅಭಿವೃದ್ಧಿ ನಿಗಮ ಸ್ಥಾಪನೆ, ವಾಲ್ಮೀಕಿ ಜಯಂತಿ ಆಚರಣೆ, ಸೂರಗೊಂಡನಕೊಪ್ಪ ಅಭಿವೃದ್ಧಿ, ಕೈಗಾರಿಕೆ ಸ್ಥಾಪನೆಗೆ ಅನುದಾನ, ಸಹಕಾರ ಸಂಘದ ಸದಸ್ಯರಿಗೆ ಸದಸ್ಯತ್ವಕ್ಕೆ ಅನುದಾನ ಸೇರಿ ಹಲವು ಯೋಜನೆ ನೀಡುವ ಮೂಲಕ ಎಸ್ಸಿ, ಎಸ್ಟಿ ಜನಾಂಗದ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ ಮಾಡಿದ್ದೇನೆ ಎಂದರು.

ಸಂಸದ ಬಿ.ವೈ.ರಾಘವೇಂದ್ರ ಮಾತನಾಡಿ, ಕಾಂಗ್ರೆಸ್ ಸಂಸತ್‌ನಲ್ಲಿ ವಿರೋಧ ಪಕ್ಷವಾಗಿಯೂ ಕೂರದ ಸ್ಥಿತಿಯಲ್ಲಿದೆ. ಇಡೀ ದೇಶದಲ್ಲಿ 84 ಎಸ್‌ಸಿ ಮೀಸಲು ಕ್ಷೇತ್ರದಲ್ಲಿ 62 ಬಿಜೆಪಿ ಸಂಸದರಿದ್ದರೆ, 47 ಎಸ್‌ಟಿ ಮೀಸಲು ಕ್ಷೇತ್ರದಲ್ಲಿ 31 ಬಿಜೆಪಿ ಸಂಸದರಿದ್ದು, 29 ಹಿಂದುಳಿದ ವರ್ಗದ ಮಂತ್ರಿಗಳಿದ್ದಾರೆ. ಇದು ಬಿಜೆಪಿ ಬದ್ದತೆ. ಕಾಂಗ್ರೆಸ್ ಪಕ್ಷ ಅಂಬೇಡ್ಕರ್ ಭಾವಚಿತ್ರ ತೋರಿಸಿ, ಹಿಂದುಳಿದ ಸಮುದಾಯದ ಜನರನ್ನು ಮತ ಬ್ಯಾಂಕನ್ನಾಗಿಸಿಕೊಂಡಿದೆ. ಯಾವುದೇ ಸೌಲಭ್ಯ ನೀಡಲಿಲ್ಲ. ಅಂತಹ ಪಕ್ಷಕ್ಕೆ ಎಂದಿಗೂ ಬೆಂಬಲಿಸಬಾರದು ಎಂದರು.

ಬಿಜೆಪಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಮಾತನಾಡಿ, ಅಂಬೇಡ್ಕರ್ ಮೃತಪಟ್ಟಾಗ ಸ್ಮಾರಕ ನಿರ್ಮಿಸಲು ದೆಹಲಿಯಲ್ಲಿ ಜಾಗ ನೀಡಿದ ಕಾಂಗ್ರೆಸ್ ಸರ್ಕಾರ ಸಂಸತ್ ಚುನಾವಣೆಗೆ ಸ್ಪರ್ಧಿಸಿದಾಗ ಸೋಲಿಸಿದೆ. ಮೋದಿ ಇದೀಗ ಅಂಬೇಡ್ಕರ್ ಸ್ಮಾರಕ ಅಭಿವೃದ್ಧಿಪಡಿಸಿ, ಲಂಡನ್ನಲ್ಲಿದ್ದ ಕಟ್ಟಡ ಪಡೆದು ಅದನ್ನು ಹಾಸ್ಟೆಲ್ ಮಾಡಿ, ದೇಶದ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಿದೆ. ಹಿಂದುಳಿದ ವರ್ಗದ ರಾಮನಾಥ ಕೋವಿಂದ್, ದ್ರೌಪದಿ ಮರ್ಮು ಸೇರಿದಂತೆ ಹಲವರಿಗೆ ದೇಶದ ಉನ್ನತ ಹುದ್ದೆ ನೀಡಿದ ಕೀರ್ತಿ ನರೇಂದ್ರ ಮೋದಿ ಅವರಿಗೆ ಸಲ್ಲುತ್ತದೆ. ಕಾಂಗ್ರೆಸ್ ಹಿಂದುಳಿದ ವರ್ಗದ ಹಿತ ಮಾತಿನಲ್ಲಿ ತೋರಿದರೆ ಬಿಜೆಪಿ ತನ್ನ ಕಾರ್ಯದ ಮೂಲಕ ತೋರಿಸುತ್ತಿದೆ ಎಂದು ಹೇಳಿದರು.

ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕಿ ಶಾರದಾ ಪೂರ್ಯಾನಾಯ್ಕ, ಮಾಜಿ ಸಚಿವ ರಾಜುಗೌಡ, ಮುಖಂಡ ಸುನಿಲ್ ವಲ್ಲಾಪುರೆ, ಪಿ.ರಾಜೀವ್ ಕುಡಚಿ, ಅಶೋಕ್‌ ನಾಯ್ಕ, ಟಿ.ಡಿ.ಮೇಘರಾಜ್, ಎಚ್.ಟಿ. ಬಳಿಗಾರ್, ಹರೀಶ್, ರಾಮನಾಯ್ಕ, ವಸಂತಗೌಡ ಮತ್ತಿತರರು ಉಪಸ್ಥಿತರಿದ್ದರು.

- - -

ಬಾಕ್ಸ್‌ ಎಸ್‌ಸಿ, ಎಸ್‌ಟಿ ಅನುದಾನ ದುರ್ಬಳಕೆ: ಕಾರಜೋಳ ಟೀಕೆ ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ಸಿದ್ದರಾಮಯ್ಯ ಸರ್ಕಾರ ಎಸ್ಸಿ,ಎಸ್ಟಿ ಅನುದಾನ ₹14242 ಕೋಟಿ ಯನ್ನು ಗ್ಯಾರಂಟಿ ಯೋಜನೆಗೆ ಬಳಸಿಕೊಂಡು ಪರಿಶಿಷ್ಟ ಜಾತಿ, ಪಂಗಡಕ್ಕೆ ದ್ರೋಹ ಬಗೆದಿದ್ದಾರೆ ಎಂದು ಆರೋಪಿಸಿದರು.ಜಾತಿ ಧರ್ಮ ಮೀರಿದ ನಾಯಕ ಬಿಎಸ್‌ವೈ ಅವರು ಸಿಎಂ ಆಗಿದ್ದಾಗ ಎನ್‌ಡಿಆರ್‌ಎಫ್‌ ಮೂಲಕ ಅತಿವೃಷ್ಟಿಯಿಂದ ಮನೆ ಹಾನಿಗೊಳಗಾದವರಿಗೆ ₹5 ಲಕ್ಷ ನೀಡುವ ಜತೆಗೆ ದೇವದಾಸಿ ಹೆಣ್ಣುಮಕ್ಕಳಿಗೆ ₹500 ಪಿಂಚಣಿ, ಮೊರಾರ್ಜಿ ವಸತಿ ಶಾಲೆ, ಹಾಸ್ಟೆಲ್‌ಗೆ ತಲಾ ₹50 ಲಕ್ಷದಂತೆ ದೊಡ್ಡ ಮೊತ್ತದ ಅನುದಾನ ನೀಡುವ ಐತಿಹಾಸಿಕ ತೀರ್ಮಾನ ಕೈಗೊಂಡರು. ಅವರು ನಾಡಿನ ಕಲ್ಯಾಣಕ್ಕೆ ರಾಜಕೀಯ ಮಾಡಿದರೇ ವಿನಃ ಸ್ವಾರ್ಥಕ್ಕಲ್ಲ. ಅವರ ಹಾದಿಯಲ್ಲಿಯೇ ಮಕ್ಕಳು ನಡೆಯುತ್ತಿದ್ದಾರೆ. ಅವರಿಗೂ ನಿಮ್ಮ ಬೆಂಬಲ ಅಗತ್ಯ ಎಂದು ಹೇಳಿದರು.

- - -

-28ಕೆ.ಎಸ್.ಕೆ.ಪಿ1:

ಶಿಕಾರಿಪುರದಲ್ಲಿ ಬುಧವಾರ ಬಿಜೆಪಿ ಆಯೋಜಿಸಿದ್ದ ಪಕ್ಷದ ಎಸ್ಸಿ,ಎಸ್ಟಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಸನ್ಮಾನಿಸಲಾಯಿತು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸರ್ಕಾರಗಳಿಂದ ಮಕ್ಕಳ ಶಿಕ್ಷಣ ಕಸಿಯುವ ಹುನ್ನಾರ
ಭಾರತದ ಭವಿಷ್ಯ ವರ್ಗ ಕೋಣೆಯಲ್ಲಿದೆ