ಕೊಪ್ಪಳ: ಬೇಸಿಗೆಯಿಂದ ದಿನೇ ದಿನೇ ಸಮಸ್ಯೆಯಾಗುತ್ತಿದೆ. ಇಂಥ ಸ್ಥಿತಿಯಲ್ಲಿ ಸಮರ್ಪಕ ಕುಡಿಯುವ ನೀರು ಪೂರೈಕೆ ಮಾಡಬೇಕು. ಹಾಗೊಂದು ವೇಳೆ ಸಮಸ್ಯೆಯಾದರೆ ಅಧಿಕಾರಿಗಳನ್ನೇ ಹೊಣೆಯನ್ನಾಗಿ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಎಇಇ, ಜೆಇ ಬೇಜವಾಬ್ದಾರಿ ಸಹಿಸಲ್ಲ, ಪಿಡಿಒ ಕಚೇರಿ ಬಿಟ್ಟು ಹಳ್ಳಿಗಳ ಸಮಸ್ಯೆ ಆಲಿಸಬೇಕು. ಬಿಸಿಲು ಇದೆ ಎಂದು ಕುಳಿತುಕೊಳ್ಳುವುದಲ್ಲ, ಬೆಳಗಿನ ಅವಧಿಗೆ ಸಮಸ್ಯೆ ಇರುವ ಗ್ರಾಮಕ್ಕೆ ತೆರಳಿ ಜನರ ಸಮಸ್ಯೆ ಆಲಿಸಿ, ನಗರ ಹಂತದಲ್ಲಿ ಪೌರಾಯುಕ್ತರು ನಿಗಾ ವಹಿಸಬೇಕು. ಗ್ರಾಮೀಣ ವ್ಯಾಪ್ತಿಯಲ್ಲಿ ಇಒ ಹಾಗೂ ತಹಸೀಲ್ದಾರರ ಜವಾಬ್ದಾರಿ ಹೆಚ್ಚಿದೆ. ಇವರಿಬ್ಬರೂ ಹೆಚ್ಚು ಕಾಳಜಿ ವಹಿಸಬೇಕು. ಕೇವಲ ಮಾಧ್ಯಮದಲ್ಲಿ ಬಂದ ಮೇಲೆ ಹಳ್ಳಿಗೆ ಭೇಟಿ ನೀಡುವುದಲ್ಲ, ಮಾಧ್ಯಮಕ್ಕೂ ಮೊದಲು ನೀವು ಅಲ್ಲಿ ಹಾಜರಿರಬೇಕು ಎಂದರು.
ಕೊಪ್ಪಳ ತಾಲೂಕಿನಲ್ಲಿ ೩೬ ಹಳ್ಳಿಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಪಟ್ಟಿ ಮಾಡಿದ್ದು, ಸದ್ಯ ೮ ಹಳ್ಳಿಯಲ್ಲಿ ಕುಡಿಯುವ ನೀರಿನ ಸಮಸ್ಯೆಯಿದೆ ಎಂದಿದ್ದೀರಿ, ತಾಲೂಕಿನ ಗುಡಗೇರಿಯಲ್ಲಿ ಸಮಸ್ಯೆ ಇಲ್ಲ ಎನ್ನುತ್ತೀದ್ದೀರಿ, ಅಲ್ಲಿನ ಜನತೆ ಕೆರೆ ನೀರು ಕುಡಿಯುತ್ತಿದ್ದಾರೆ. ನಾನು ಸಹ ಅಧಿಕಾರಿಗಳ ಜತೆ ಮಾತನಾಡಿದ್ದೇನೆ ಎಂದು ಸಂಸದರು ಸಭೆಯಲ್ಲಿ ಪ್ರಸ್ತಾಪಿಸಿದರು.ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತು ಸಹಾಯವಾಣಿ ಆರಂಭ ಮಾಡಿದ್ದೇವೆ. ಇಒ ಹಾಗೂ ತಹಸೀಲ್ದಾರ್ ದಿನಕ್ಕೊಂದು ಗ್ರಾಪಂಗೆ ಭೇಟಿ ನೀಡಬೇಕು ಎಂದು ಸಚಿವ ಶಿವರಾಜ ತಂಗಡಗಿ ತಾಕೀತು ಮಾಡಿದರು.
ರಾಜೀವ ಗಾಂಧಿ ಯೋಜನೆ ಸರಿಯಾಗಿ ಕೆಲಸ ಮಾಡಿದರೆ ಇಷ್ಟು ಸಮಸ್ಯೆ ಆಗಲ್ಲ, ವಿಧಾನಸಭಾ ಕ್ಷೇತ್ರಕ್ಕೆ ಒಬ್ಬ ನೋಡಲ್ ಅಧಿಕಾರಿ ನೇಮಕ ಮಾಡಿ, ಏ. ೨೮ರಂದೇ ಅಧಿಕಾರಿಗಳ ಸಭೆ ಆಗಬೇಕು, ಪಿಡಿಒ, ಪಪಂ ಹಾಗೂ ನಗರಸಭೆ ಅಧಿಕಾರಿಗಳೊಂದಿಗೆ ಸಭೆ ಆಗಬೇಕು, ಮೂರು ದಿನದ ಬಳಿಕ ಶಾಸಕರ ಟಾಸ್ಕ್ಫೋರ್ಸ್ ಸಭೆ ನಡೆಸಬೇಕು, ತಾಲೂಕು, ಸ್ಥಳೀಯ ಸಂಸ್ಥೆಗಳ ಕುರಿತಂತೆ ಸಹಾಯವಾಣಿ ಪ್ರಕಟಿಸಬೇಕು ಎಂದರು.
ಪ್ರತಿಧ್ವನಿಸಿದ ಕನ್ನಡಪ್ರಭ ವರದಿ: ಕೊಪ್ಪಳ ಜಿಲ್ಲೆಯಲ್ಲಿ ಕುಡಿಯುವ ನೀರಿನ ಸಮಸ್ಯೆಯನ್ನು ಕನ್ನಡಪ್ರಭದಲ್ಲಿ ಸರಣಿ ಸುದ್ದಿಯಾಗಿ ಪ್ರಕಟಿಸಿದೆ. ಅದರಲ್ಲಿ ಜಿಲ್ಲೆಯ ಅನೇಕ ಸಮಸ್ಯೆಗಳ ಕುರಿತು ವರದಿಯಾಗಿದ. ಗುಡಿಗೇರಿ, ಕವಲೂರು ಸಮಸ್ಯೆಯ ವರದಿ ಮಾಡಿದ ಮೇಲೆ ಸ್ಪಂದನೆ ಮಾಡಲಾಯಿತು. ಖುದ್ದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಸಮಸ್ಯೆ ಕುರಿತು ನಮ್ಮನ್ನು ಕೇಳಿದರು. ಮಾಧ್ಯಮದಲ್ಲಿ ಬಂದ ಮೇಲೆ ಕ್ರಮವಹಿಸುವುದಲ್ಲ, ಅದಕ್ಕೂ ಮೊದಲೇ ಸ್ಪಂದಿಸಬೇಕು. ಕುಡಿಯುವ ನೀರಿನ ಸಮಸ್ಯೆಯಾಗದಂತೆ ಮುನ್ನಚ್ಚರಿಕೆ ವಹಿಸಿ ಎಂದು ಖಡಕ್ ಆಗಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.