ಗದಗ: ಕೇವಲ ಒಂದು ದಿನ ಮಲಗಿದರೆ ರೈತರ ಮಕ್ಕಳಾಗಲು ಸಾಧ್ಯವೇ? ರೈತರ ಮಕ್ಕಳಾಗಿದ್ದರೆ ದುಬೈನಲ್ಲಿ ಯಾಕೆ ಆಸ್ತಿ ಮಾಡಿದ್ದಾರೆ ಎಂದು ಶಾಸಕ ವಿಜಯಪುರ ಬಸನಗೌಡ ಪಾಟೀಲ ಯತ್ನಾಳ ಹೇಳಿದರು.
ಪ್ರಾಮಾಣಿಕವಾಗಿ ಮತದಾನ ಮಾಡಿ. ಇಲ್ಲದಿದ್ದರೆ ಹಿಂದೂಗಳು ಉಳಿಯಲು ಸಾಧ್ಯವಿಲ್ಲ. ಜಮೀರ್ 400 ಜನರಿಗೆ ಉಚಿತ ತರಬೇತಿ ಕೊಟ್ಟರು. ನಾವೆಲ್ಲ ಜಾತಿ ಜಾತಿ ಎಂದು ಬಡಿದಾಡಿ ಮತ ಹಾಕಿದರೆ ಹಿಂದೂಗಳು ಜೀವನ ಮಾಡಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಲಿದೆ ಎಂದರು.
ಅಂಬೇಡ್ಕರ್ ಅವರಿಗೆ ಗೌರವ ಕೊಟ್ಟಿದ್ದು ಮೋದಿ. ಕಾಂಗ್ರೆಸಿಗರು ಅಂಬೇಡ್ಕರ್ ಅವರಿಗೆ ದಿಲ್ಲಿಯಲ್ಲಿ ಅಂತ್ಯ ಸಂಸ್ಕಾರಕ್ಕೆ ಜಾಗ ಕೊಡಲಿಲ್ಲ. ಅವರಿಗೆ ಕಾಂಗ್ರೆಸ್ ಸರ್ಕಾರ ಭಾರತ ರತ್ನ ಕೊಡಲಿಲ್ಲ. ಅಂಬೇಡ್ಕರ್ ಅವರನ್ನು ಚುನಾವಣೆಯಲ್ಲಿ ಸೋಲಿಸಿದರು. ಅದಕ್ಕಾಗಿ ನಾವೆಲ್ಲ ಒಂದಾಗಬೇಕು. ಸನಾತನ ಹಿಂದೂ ಧರ್ಮ ಇರುವ ವರೆಗೆ ಸಂವಿಧಾನ ಇರುತ್ತದೆ ಎಂದು ವಿಶ್ವಾಸದಿಂದ ಹೇಳಿದರು.ರಾಜ್ಯದಲ್ಲಿ ಗಣಪತಿ ಮೂರ್ತಿ ಪ್ರತಿಷ್ಠಾಪನೆ ಮಾಡಲಿಕ್ಕಾಗಲ್ಲ, ಆರ್ಎಸ್ಎಸ್ ನಿಷೇಧ ಮಾಡುವ ಮಾತಾಡುತ್ತಾರೆ. ಅದೇ ಎಸ್ಡಿಪಿಐ ಅವರಿಗೆ ಯಾವ ಪರವಾನಗಿ ಇದೆ. ಗಣಪತಿ ಮೂರ್ತಿ ಪ್ರತಿಷ್ಠಾಪನೆಗೆ ಡಿಜೆ ಪರವಾನಗಿ ಬೇಕು. ಐದು ಬಾರಿ ಅಜಾನ್ ಕೂಗುವುದಕ್ಕೆ ಯಾರು ಪರವಾನಗಿ ಕೊಟ್ಟಿದ್ದಾರೆ? ಸಿದ್ದರಾಮಯ್ಯ ಜೆಡಿಎಸ್ನಿಂದ ಉಚ್ಚಾಟನೆ ಆಗಿ ಮುಖ್ಯಮಂತ್ರಿ ಆದರು. ಯಡಿಯೂರಪ್ಪ ಸಹ ಉಚ್ಚಾಟನೆ ಆದ ಮೇಲೆ ಸಿಎಂ ಆದವರು. ಹೀಗಾಗಿ ನಾನೂ ಸಹ 2028ಕ್ಕೆ ಮುಖ್ಯಮಂತ್ರಿ ಆಗುವುದು ನಿಶ್ಚಿತ ಎಂದರು.
ಕೂಡಲಸಂಗಮದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಪಂಚಮಸಾಲಿ ಸಮಾಜದ ಪ್ರಮುಖರು ಉಪಸ್ಥಿತರಿದ್ದರು. ಸ್ಥಳೀಯ ನಾಯಕರು, ಸಮಾಜದ ಮುಖಂಡರು ಹಾಜರಿದ್ದರು.