ರಜೆಯಿಂದಾಗಿ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳ

KannadaprabhaNewsNetwork | Published : May 1, 2025 12:47 AM

ಸಾರಾಂಶ

ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭವಾಗಿದೆ.

ಕಾರವಾರ: ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಜೊತೆಗೆ ಪಾಲಕರಿಗೆ ಸಾಲು ಸಾಲು ರಜೆ. ಇದರಿಂದ ಜಿಲ್ಲೆಯ ಪ್ರವಾಸಿ ತಾಣಗಳಲ್ಲಿ ಜನಜಂಗುಳಿ ಹೆಚ್ಚಿದೆ.

ವಿದ್ಯಾರ್ಥಿಗಳಿಗೆ ಬೇಸಿಗೆ ರಜೆ ಆರಂಭವಾಗಿದೆ. ಇತರ ಉದ್ಯೋಗಿಗಳಿಗೆ ಬುಧವಾರ ಬಸವ ಜಯಂತಿ, ಗುರುವಾರ ಕಾರ್ಮಿಕ ದಿನಾಚರಣೆ ರಜೆ. ಶುಕ್ರವಾರ, ಶನಿವಾರ ರಜೆ ಹಾಕಿದರೆ ಮತ್ತೆ ಭಾನುವಾರ ರಜೆ. ಇದರಿಂದ ಗೋಕರ್ಣ, ಮುರ್ಡೇಶ್ವರ, ದಾಂಡೇಲಿ, ಜೋಯಿಡಾಗಳಲ್ಲಿ ಪ್ರವಾಸಿಗರ ಸಂಖ್ಯೆಯಲ್ಲಿ ಭಾರಿ ಹೆಚ್ಚಳವಾಗಿದೆ.

ಪ್ರವಾಸಿಗರ ಭರಾಟೆಯಿಂದಾಗಿ ಗೋಕರ್ಣದ ಹೊಟೇಲ್, ಲಾಡ್ಜ್, ರೆಸಾರ್ಟ್, ಕಾಟೇಜ್, ಹೋಂಸ್ಟೇಗಳು ಭರ್ತಿಯಾಗುತ್ತಿವೆ. ಮುಖ್ಯ ಕಡಲತೀರ, ಓಂ ಬೀಚ್, ಕುಡ್ಲೆ ಬೀಚ್, ಹಾಫ್ ಮೂನ್ ಬೀಚ್ ಗಳಲ್ಲೂ ಪ್ರವಾಸಿಗರು ವಿಹರಿಸುತ್ತಿದ್ದಾರೆ. ರಥಬೀದಿ, ಮಹಾಬಲೇಶ್ವರ ದೇವಾಲಯ, ಮಹಾಗಣಪತಿ, ತಾಮ್ರಗೌರಿ ದೇವಾಲಯಗಳಲ್ಲೂ ಭಕ್ತರ ಸಂಖ್ಯೆ ಹೆಚ್ಚಿದೆ.

ಗೋಕರ್ಣ ಪೌರಾಣಿಕವಾಗಿ ಪ್ರಸಿದ್ಧಿಯ ಜೊತೆಗೆ ಜಾಗತಿಕ ಪ್ರವಾಸಿ ತಾಣವಾಗಿ ಬೆಳೆದಿದೆ. ಪ್ರವಾಸಿಗರು ಹಾಗೂ ಭಕ್ತರು ಇಲ್ಲಿಗೆ ಆಗಮಿಸುವುದರಿಂದ ಜನಜಂಗುಳಿ ಹೆಚ್ಚಿದೆ.

ಮುರ್ಡೇಶ್ವರ ಕಡಲತೀರ ಹಾಗೂ ದೇವಾಲಯಗಳಲ್ಲೂ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಪ್ರವಾಸಿಗರೂ ಕಡಲತೀರದಲ್ಲಿ ವಿಹರಿಸುತ್ತಿದ್ದಾರೆ. ಕರಾವಳಿಯಲ್ಲಿ ಈಗ ವಿಪರೀತ ಬಿಸಿಲಿನ ಝಳ, ತಡೆಯಲಾರದ ಸೆಕೆ. ಆದರೆ ಇಲ್ಲಿನ ಬಿಸಿಲಿನ ಬೇಗೆಯನ್ನೂ ಲೆಕ್ಕಿಸದೇ ಪ್ರವಾಸಿಗರು ಆಗಮಿಸಿದ್ದಾರೆ.

ಜೋಯಿಡಾ, ದಾಂಡೇಲಿಗಳಲ್ಲಿ ಕಾಡು ಇದೆ. ಕಾಳಿ ನದಿ ಇದೆ. ಕರಾವಳಿಗಿಂತ ಕೂಲ್ ಆಗಿರುವ ಪ್ರದೇಶ. ಇದರಿಂದ ದಾಂಡೇಲಿ ಹಾಗೂ ಜೋಯಿಡಾಗಳಿಗೂ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಉಂಚಳ್ಳಿ, ಸಾತೊಡ್ಡಿ, ಮಾಗೋಡ, ವಿಭೂತಿ ಮತ್ತಿತರ ಫಾಲ್ಸ್ ಗಳಿಗಳಲ್ಲೂ ಪ್ರವಾಸಿಗರು ಹೆಚ್ಚು ಕಾಣಿಸುತ್ತಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರ್ಮಿಕ ಕ್ಷೇತ್ರಗಳಿವೆ. ನೈಸರ್ಗಿಕ ತಾಣಗಳಿವೆ. ಮಾನವ ನಿರ್ಮಿತ ತಾಣಗಳಿವೆ. ಐತಿಹಾಸಿಕ ಸ್ಥಳಗಳಿವೆ. ವಿಶಾಲವಾದ ಕಡಲತೀರ, ಜಲಪಾತಗಳಿವೆ. ವಿವಿಧ ರೀತಿಯ ಅಭಿರುಚಿಯ ಪ್ರವಾಸಿಗರಿಗೆ ಉತ್ತರ ಕನ್ನಡ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಹೀಗಾಗಿ ಪ್ರವಾಸಿಗರು ತಮಗೆ ಬೇಕಾದ ತಾಣಗಳಿಗೆ ಬರುತ್ತಿದ್ದಾರೆ. ಪ್ರವಾಸಿಗರ ಸಂಖ್ಯೆ ಹೆಚ್ಚುತ್ತಿದೆ.

ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಗುರುವಾರ ಮತ್ತಷ್ಟು ಪ್ರವಾಸಿಗರು ಆಗಮಿಸಲಿದ್ದಾರೆ. ಇದರಿಂದ ವ್ಯಾಪಾರ ವಹಿವಾಟು ಹೆಚ್ಚಳವಾಗಿದೆ ಎನ್ನುತ್ತಾರೆ ಹೊಟೇಲ್ ವ್ಯವಸ್ಥಾಪಕ ವಿನಾಯಕ ಗೌಡ.

Share this article