10 ನೇ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಅವರ ಆಯ್ಕೆಯು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ನರಸಿಂಹರಾಜಪುರ
10 ನೇ ಕನ್ನಡ ಸಾಹಿತ್ಯ ಸಮ್ಮೇಳಾಧ್ಯಕ್ಷರಾಗಿ ಬೆಮ್ಮನೆ ದಯಾನಂದ್ ಅವರ ಆಯ್ಕೆಯು ಕನ್ನಡ ಸಾಹಿತ್ಯ ಪರಿಷತ್ತಿಗೆ ಸಂದ ಗೌರವವಾಗಿದೆ ಎಂದು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪೂರ್ಣೇಶ್ ತಿಳಿಸಿದರು.ಬೆಳ್ಳೂರಿನಲ್ಲಿ ಫೆ.21, 22ರಂದು ನಡೆಯುವ ತಾಲೂಕುಮಟ್ಟದ 10ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಬೆಮ್ಮನೆ ದಯಾನಂದ್ ಅವರನ್ನು ತಾಲೂಕಿನ ಬೆಮ್ಮನೆಯ ಅವರ ಮನೆಯಲ್ಲಿ ಸಮ್ಮೇಳನಕ್ಕೆ ಆಮಂತ್ರಿಸಿ ಮಾತನಾಡಿದರು.
ಬೆಮ್ಮನೆ ದಯಾನಂದ್ ಅವರು ಸಾಹಿತ್ಯ ಲೋಕದಲ್ಲಿ ಹೆಸರು ಮಾಡಿದ್ದು ತಾಲೂಕಿಗೆ ಕೀರ್ತಿ ತಂದಿದ್ದಾರೆ. ಕನ್ನಡ ಸಾಹಿತ್ಯ ಸಮ್ಮೇಳನಕ್ಕಾಗಿ ಈಗಾಗಲೇ ಸ್ವಾಗತ ಸಮಿತಿ ಸೇರಿ 12 ಸಮಿತಿಗಳನ್ನು ರಚಿಸಲಾಗಿದೆ. 2 ದಿನಗಳ ಕಾಲ ನಡೆಯುವ ಸಾಹಿತ್ಯ ಸಮ್ಮೇಳನದಲ್ಲಿ 5 ಗೋಷ್ಠಿಗಳು ನಡೆಯಲಿವೆ. ಸಾಹಿತ್ಯ ಸಿರಿ ಪ್ರಶಸ್ತಿ ನೀಡಲಾಗುವುದು. ಸನ್ಮಾನ ಕಾರ್ಯಕ್ರಮ, 7 ಉದಯೋನ್ಮುಖ ಸಾಹಿತಿಗಳ ಪುಸ್ತಕಗಳು ಬಿಡುಗಡೆಯಾಗಲಿದೆ. ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಈಗಾಗಲೇ ಸಮಿತಿಗಳು ಕಾರ್ಯಾರಂಭ ಮಾಡಿದೆ.ಸಾಹಿತ್ಯ ಸಮ್ಮೇಳನ ಯಶಸ್ಸು ಕಾಣಬೇಕಾದರೆ ಎಲ್ಲರ ಸಹಕಾರ ಅಗತ್ಯ ಎಂದರು.ಆಹ್ವಾನ ಸ್ವೀಕಾರ ಮಾಡಿದ ಸರ್ವಾಧ್ಯಕ್ಷ ಬೆಮ್ಮನೆ ದಯಾನಂದ್ ಮಾತನಾಡಿ, ನಾನು ಕನ್ನಡ ಶಿಕ್ಷಕನಾಗಿ ಕೋಲಾರದಲ್ಲಿ 12 ವರ್ಷ, ಹರಿಹರಪುರದಲ್ಲಿ 15 ವರ್ಷ ಕೆಲಸ ಮಾಡಿದ್ದೇನೆ.ಕನ್ನಡ ಸಾಹಿತ್ಯಕ್ಕೂ ನನಗೂ ಹತ್ತಿರದ ಸಂಬಂಧವಿದೆ.ರಾಮನಗರದ ಜಾನಪದ ಲೋಕದಲ್ಲಿ ಕರ್ನಾಟಕ ಜಾನಪದ ಪರಿಷತ್ತಿನ ಅಧ್ಯಕ್ಷರಾಗಿದ್ದ ನಾಗೇಗೌಡರ ಜೊತೆಯಲ್ಲಿ ಕೆಲಸ ಮಾಡಿದ್ದೆ.ಜಾನಪದ ನಿಘಂಟು ಕಾರ್ಯದಲ್ಲಿ ಕೈ ಜೋಡಿಸಿದ್ದೆ. ನಮ್ಮ ಬೆಮ್ಮನೆಯ ಕುಟುಂಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿಗೆ 28 ಜನರು ಅಜೀವ ಸದಸ್ಯರಾಗಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತಿನವರು ಸರ್ವಾಧ್ಯಕ್ಷರಾಗಿ ನನ್ನನ್ನು ಆಯ್ಕೆ ಮಾಡಿರುವುದಕ್ಕೆ ಕೃತಜ್ಞನಾಗಿದ್ದೇನೆ. ಸಾಹಿತ್ಯ ಸಮ್ಮೇಳನವು ಚೆನ್ನಾಗಿ ನಡೆಯಬೇಕು. ನಮ್ಮ ಬೆಮ್ಮನೆ ಕುಟುಂಬದವರಿಂದ ಎಲ್ಲಾ ಸಹಕಾರ ನೀಡುತ್ತೇನೆ ಎಂದರು.
ತಾಲೂಕು ಕಸಾಪ ಮಹಿಳಾ ಘಟಕದ ಅಧ್ಯಕ್ಷೆ ಭಾಗ್ಯ ನಂಜುಂಡಸ್ವಾಮಿ ಮಾತನಾಡಿ, ಸೀತೂರು ಭಾಗದಲ್ಲಿ ಈಗಾಗಲೇ ಇಬ್ಬರು ಸಮ್ಮೇಳಾಧ್ಯಕ್ಷರಾಗಿದ್ದಾರೆ. ಬೆಮ್ಮನೆ ದಯಾನಂದ್ 3ನೇ ಸಮ್ಮೇಳನಾಧ್ಯಕ್ಷರಾಗಿದ್ದಾರೆ. ಪಟ್ಟಣ ಭಾಗಕ್ಕಿಂತ ಗ್ರಾಮೀಣ ಭಾಗದಲ್ಲೇ ಸಾಹಿತ್ಯ ಸಮ್ಮೇಳನ ನಡೆಸುವುದು ಸೂಕ್ತ ಎಂದು ಕಸಾಪ ಸದಸ್ಯರ ಸಲಹೆಯಂತೆ ಬೆಳ್ಳೂರಿನಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ತೀರ್ಮಾನಿಸಲಾಯಿತು ಎಂದರು.ಈ ವೇಳೆ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳಾಧ್ಯಕ್ಷ ಬಿ.ಪಿ.ದಯಾನಂದ್ ಹಾಗೂ ಸುರೇಖ ದಂಪತಿಗೆ ವೀಳ್ಯ, ಹಾರ, ಪೇಟ, ಹಣ್ಣು ನೀಡಿ ಸನ್ಮಾನಿಸಲಾಯಿತು.
ಸ್ವಾಗತ ಸಮಿತಿ ಅಧ್ಯಕ್ಷ ಆರ್.ವೆಂಕಟರಮಣಯ್ಯ, ಕಾರ್ಯಾಧ್ಯಕ್ಷ ಎಸ್.ಎಸ್.ಸಂತೋಷ್ ಕುಮಾರ್, ನಿಕಟಪೂರ್ವ ಅಧ್ಯಕ್ಷ ಎನ್.ಎಂ.ಕಾಂತರಾಜ್, ಕಸಾಪ ಪ್ರಧಾನ ಕಾರ್ಯದರ್ಶಿ ನಂದಿನಿ ಆಲಂದೂರು, ಬೆಮ್ಮನೆ ಕುಟುಂಭದ ಹಿರಿಯರಾದ ಮಂಜುನಾಥ ಗೌಡ ಇದ್ದರು.