ಬಿಜೆಪಿಗೆ ಅನಿವಾರ್ಯ. ಹೆಬ್ಬಾರ್ ಗೆ ಬಯಸಿ ಬಂದ ಭಾಗ್ಯ

KannadaprabhaNewsNetwork |  
Published : May 28, 2025, 12:33 AM IST
ಸಸಸಸಸ | Kannada Prabha

ಸಾರಾಂಶ

ಚುನಾವಣೆಯಲ್ಲಿ ಬಿಜೆಪಿ ಮುಖಂಡರು ತಮ್ಮ ವಿರುದ್ಧ ಕೆಲಸ ಮಾಡಿದರು ಎಂಬ ಆರೋಪ ಮಾಡಿದ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ದೂರವಾಗತೊಡಗಿದರಲ್ಲದೆ, ಕಾಂಗ್ರೆಸ್ ಗೆ ಹತ್ತಿರವಾದರು

ಕಾರವಾರ: ಅಂತೂ ಇಂತೂ ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ ಅವರನ್ನು ಬಿಜೆಪಿಯಿಂದ 6 ವರ್ಷಗಳ ಕಾಲ ಉಚ್ಛಾಟಿಸಲಾಗಿದೆ. ಬಿಜೆಪಿಗೆ ಇದು ಅನಿವಾರ್ಯ ಆಗಿತ್ತು. ಹೆಬ್ಬಾರ್ ಅವರಿಗೆ ಬಯಸಿ ಬಂದ ಭಾಗ್ಯ ಆಗಿತ್ತು.

ಹಾಗೆ ನೋಡಿದರೆ ಶಿವರಾಮ ಹೆಬ್ಬಾರ್ ಈ ಬಾರಿ ಶಾಸಕರಾಗಿ ಆಯ್ಕೆಯಾದ ಮೇಲೆ ಯಾವ ಹಂತದಲ್ಲೂ ಬಿಜೆಪಿಯೊಂದಿಗೆ ಗುರುತಿಸಿಕೊಳ್ಳಲೇ ಇಲ್ಲ. ಬಿಜೆಪಿಯಿಂದ ಆಯ್ಕೆಯಾದರೂ ಒಲವು ಕಾಂಗ್ರೆಸ್ ಕಡೆಗಾಗಿತ್ತು.

ಚುನಾವಣೆಯಲ್ಲಿ ಬಿಜೆಪಿ ಮುಖಂಡರು ತಮ್ಮ ವಿರುದ್ಧ ಕೆಲಸ ಮಾಡಿದರು ಎಂಬ ಆರೋಪ ಮಾಡಿದ ಶಿವರಾಮ ಹೆಬ್ಬಾರ್ ಬಿಜೆಪಿಯಿಂದ ದೂರವಾಗತೊಡಗಿದರಲ್ಲದೆ, ಕಾಂಗ್ರೆಸ್ ಗೆ ಹತ್ತಿರವಾದರು. ಹೆಬ್ಬಾರ್ ಆರೋಪದ ಮೇಲೆ ಕೆಲವರನ್ನು ಹುದ್ದೆಯಿಂದ ಬಿಜೆಪಿ ಬಿಡುಗಡೆಗೊಳಿಸಿತಾದರೂ ಹೆಬ್ಬಾರ್ ಕಾಂಗ್ರೆಸ್ ನತ್ತಲೇ ಮುಖ ಮಾಡಿದ್ದರಿಂದ ಹುದ್ದೆಯಿಂದ ಅಮಾನತುಗೊಂಡವರಿಗೆ ಮತ್ತೆ ಮಣೆ ಹಾಕಿತು.

ಅದಾದ ನಂತರ ಯಾವ ಹಂತದಲ್ಲೂ ಬಿಜೆಪಿಯತ್ತ ಶಿವರಾಮ ಹೆಬ್ಬಾರ್ ಅವರ ಒಲವು ಕಾಣಿಸಲೇ ಇಲ್ಲ. ವಿಧಾನಸೌಧದಲ್ಲಿ ಬಿಜೆಪಿ ವಿಪ್ ನೀಡಿದರೆ ಅನಾರೋಗ್ಯದ ಕಾರಣ ನೀಡಿ ಮತದಾನದಲ್ಲಿ ಭಾಗವಹಿಸಲಿಲ್ಲ.

ಶಾಸಕ ಸ್ಥಾನಕ್ಕೆ ರಾಜಿನಾಮೆ ನೀಡಿ ಮತ್ತೆ ಚುನಾವಣೆ ಎದುರಿಸುವ ಧೈರ್ಯಕ್ಕೆ ಶಿವರಾಮ ಹೆಬ್ಬಾರ್ ಮುಂದಾಗದೆ ಬಿಜೆಪಿಯವರೇ ಉಚ್ಛಾಟನೆ ಮಾಡಲಿ ಆಗ ಶಾಸಕ ಸ್ಥಾನ ಉಳಿಸಿಕೊಂಡು ಕಾಂಗ್ರೆಸ್ ಗೆ ಹತ್ತಿರವಾಗಿ ಇರಬಹುದು ಎಂಬ ಲೆಕ್ಕಾಚಾರ ಹಾಕಿದರು.

ಹೆಬ್ಬಾರ್ ಲೆಕ್ಕಾಚಾರ ಅರಿತ ಬಿಜೆಪಿ ಮುಖಂಡರು ಪಕ್ಷದಿಂದ ಉಚ್ಛಾಟನೆ ಮಾಡದೆ ಶಿವರಾಮ ಹೆಬ್ಬಾರ್ ಅವರನ್ನು ಅತಂತ್ರ ಪರಿಸ್ಥಿತಿಯಲ್ಲೇ ಮುಂದುವರಿಸಿದರು. ಈ ನಡುವೆ ಶಿವರಾಮ ಹೆಬ್ಬಾರ್ ತಮ್ಮ ಪುತ್ರ ವಿವೇಕ ಹೆಬ್ಬಾರ್ ಅವರನ್ನು ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಳಿಸಿದ್ದಾರೆ.

ಈ ನಡುವೆ ಬಸನಗೌಡ ಪಾಟೀಲ್ ಯತ್ನಾಳ ಉಚ್ಛಾಟನೆ ಮಾಡಿದ ತರುವಾಯ ಹೆಬ್ಬಾರ್ ಹಾಗೂ ಸೋಮಶೇಖರ ಅವರ ಉಚ್ಛಾಟನೆ ಮುನ್ನೆಲೆಗೆ ಬಂತು. ಕಾಂಗ್ರೆಸ್ ಪರವಾಗಿ ನಿಂತು ಬಿಜೆಪಿಗೆ ಮುಜುಗರ ಉಂಟುಮಾಡುತ್ತಿದ್ದ ಹೆಬ್ಬಾರ್ ಅವರ ಉಚ್ಛಾಟನೆ ಬಿಜೆಪಿಗೆ ಈಗ ಅನಿವಾರ್ಯವಾಯಿತು. ಅದೀಗ ನೆರವೇರಿದೆ. ಹೆಬ್ಬಾರ್ ಅವರ ಮುಂದಿನ ನಡೆ ಸ್ಪಷ್ಟವಾಗಿದೆ. ಮುಂದಿನ ಚುನಾವಣೆ ವೇಳೆಗೆ ಅಧಿಕೃತವಾಗಿ ಕಾಂಗ್ರೆಸ್ ಪಕ್ಷ ಸೇರಿ ಸ್ಪರ್ಧಿಸುವುದು ಖಚಿತವಾಗಿದೆ.

ಇನ್ನು ಬಿಜೆಪಿ ಮುಂಬರುವ ಚುನಾವಣೆಗೆ ಹೆಬ್ಬಾರ್ ಅವರ ವಿರುದ್ಧ ಸೆಣಸಲು ಹೊಸ ಅಭ್ಯರ್ಥಿಯನ್ನು ಕಂಡುಕೊಳ್ಳಬೇಕಾಗಿದೆ. ಈಗ ಇರುವವರಲ್ಲೆ ಒಬ್ಬರನ್ನು ಆಯ್ಕೆ ಮಾಡಲಿದೆಯೇ ಅಥವಾ ಬೇರೊಬ್ಬರಿಗೆ ಮಣೆ ಹಾಕಲಿದೆಯೇ ಎನ್ನುವ ಕುತೂಹಲ ಈಗಲೆ ಉಂಟಾಗಿದೆ.

ಭಾರತೀಯ ಜನತಾ ಪಕ್ಷ ಕೈಗೊಂಡ ನಿರ್ಣಯ ಸ್ವಾಗತಿಸುತ್ತೇನೆ. ಸಂತಸವಾಗಿದೆ. ಮುಂದೇನು ಮಾಡಬೇಕು ಎಂಬ ಬಗ್ಗೆ ಸೂಕ್ತ ಸಂದರ್ಭದಲ್ಲಿ ಸೂಕ್ತ ನಿರ್ಣಯ ಕೈಗೊಳ್ಳುತ್ತೇನೆ ಎಂದು ಯಲ್ಲಾಪುರ ಶಾಸಕ ಶಿವರಾಮ ಹೆಬ್ಬಾರ್ ಹೇಳಿದ್ದಾರೆ.

ಪಕ್ಷ ಒಳ್ಳೆಯ ನಿರ್ಧಾರ ಕೈಗೊಂಡಿದ್ದು, ಸ್ವಾಗತಿಸುತ್ತೇನೆ. ಹೆಬ್ಬಾರ್ ಪಕ್ಷದ ಚಟುವಟಿಕೆಯಿಂದ ದೂರ ಇದ್ದರು. ಪಕ್ಷ ವಿರೋಧಿ ಚಟುವಟಿಕೆ ನಡೆಸಿದ್ದರು. ಅವರ ಉಚ್ಛಾಟನೆಯಿಂದ ಕಾರ್ಯಕರ್ತರಿಗೆ ಆಗುವ ಮುಜುಗರ ತಪ್ಪಿದಂತಾಗಿದೆ ಎಂದು , ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಹೇಳಿದ್ದಾರೆ.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ನಾವೂರು ಶ್ರೀ ಗೋಪಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ವಿಷ್ಣುಸಹಸ್ರನಾಮ ಪಠಣ ಸಂಪನ್ನ
ಸಚಿವ ತಿಮ್ಮಾಪುರ ಬೆಂಬಲಿಸಿ ಕಾಂಗ್ರೆಸ್‌ ಬೃಹತ್‌ ಪ್ರತಿಭಟನೆ