ಕೊಪ್ಪಳ: ತಾಲೂಕಿನ ಕವಲೂರು ಗ್ರಾಮಕ್ಕೆ ಕೊಪ್ಪಳ ತಹಸೀಲ್ದಾರ ವಿಠ್ಠಲ ಚೌಗಲಾ ಮತ್ತು ತಾಪಂ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ ಗುರುವಾರ ಜಂಟಿಯಾಗಿ ಭೇಟಿ ನೀಡಿ ನೀರು ಸರಬರಾಜು ವ್ಯವಸ್ಥೆ, ಲಭ್ಯತೆ ಪರಿಶೀಲಿಸಿದರು.
ಕವಲೂರಲ್ಲಿ ಕುಡಿಯುವ ನೀರಿಗೆ ಯಾವುದೇ ತೊಂದರೆ ಇಲ್ಲ ಎಂದು ತಾಪಂ ಕಾರ್ಯನಿರ್ವಹಣಾಧಿಕಾರಿ ದುಂಡಪ್ಪ ತುರಾದಿ ಹೇಳಿದರು.
ಕವಲೂರು ಗ್ರಾಮದಲ್ಲಿ 10 ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಇದೆ. ಗ್ರಾಮದಲ್ಲಿ 10 ಸರ್ಕಾರಿ ಬೋರ್ವೆಲ್ಗಳಿವೆ. ಅವುಗಳಲ್ಲಿ 5 ಕಾರ್ಯನಿವಹಿಸುತ್ತಿವೆ. ಇನ್ನುಳಿದ 5 ಬೋರ್ವೆಲ್ಗಳು ಮಳೆಯ ಕೊರತೆಯಿಂದ ಬತ್ತಿವೆ. ಗ್ರಾಮದಲ್ಲಿ ಲಭ್ಯವಿರುವ ಹೆಚ್ಚಿನ ಇಳುವರಿ ಇರುವ 3 ಖಾಸಗಿ ಬೋರ್ವೆಲ್ಗಳನ್ನು ಬಾಡಿಗೆ ತೆಗೆದುಕೊಳ್ಳಲಾಗಿದೆ. ಪ್ರತಿದಿನ ಟ್ಯಾಂಕರ್ ಮುಖಾಂತರ 4 ಟ್ರಿಪ್ ನೀರನ್ನು ಶಾಲೆ, ಅಂಗನವಾಡಿ ಹಾಗೂ ಹಾಸ್ಟೆಲ್ಗಳಿಗೆ ಪೂರೈಸಲಾಗುತ್ತಿದೆ. 3 ಕೆರೆಗಳಿದ್ದು, 2 ಕೆರೆಗಳಲ್ಲಿ ಸಾಕಷ್ಟು ಪ್ರಮಾಣದ ನೀರಿನ ಲಭ್ಯತೆ ಇದೆ. 1 ಕೆರೆ ಖಾಲಿಯಾಗಿದೆ. ತುಂಗಭದ್ರಾ ನದಿ ಪ್ರದೇಶದ ನೆಲೋಗಿಪುರ ಗ್ರಾಮದ ಹತ್ತಿರ ಇರುವ ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಕವಲೂರು ಸೇರಿದಂತೆ ಅಳವಂಡಿ, ಹಟ್ಟಿ ಮತ್ತು ಬೊಚನಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ 14 ಗ್ರಾಮಗಳಿಗೆ ಕುಡಿಯುವ ನೀರನ್ನು ಪೂರೈಸಲಾಗುತ್ತದೆ. ಆದರೆ ತುಂಗಭದ್ರಾ ನದಿ ಪಾತ್ರದ ನೀರು ಖಾಲಿಯಾಗಿರುವುದರಿಂದ ಕಳೆದ ಒಂದು ತಿಂಗಳಿಂದ ಈ ಯೋಜನೆಯ ಮೂಲಕ ಗ್ರಾಮಕ್ಕೆ ನೀರು ಪೂರೈಕೆ ಸ್ಥಗಿತವಾಗಿದೆ ಎಂದರು.