ಹಾವೇರಿ: ಪ್ರತಿಯೊಬ್ಬ ಪಾಲಕರು ಮಕ್ಕಳ ಕಲಿಕೆಗಾಗಿ ಹೆಚ್ಚಿನ ಸಮಯ ಮೀಸಲಿಡಬೇಕು. ತಮ್ಮ ಮಕ್ಕಳಲ್ಲಿ ಶಿಕ್ಷಕರ ಬಗ್ಗೆ ಗೌರವದ ಭಾವನೆ ಮೂಡಿಸಬೇಕು ಎಂದು ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಮೋಹನ ದಂಡಿನ ಹೇಳಿದರು.
ಶಿಕ್ಷಕರ ಕುರಿತು ಹಗುರವಾಗಿ ಮಾತನಾಡುವುದರಿಂದ ಮಕ್ಕಳಿಗೆ ಶಿಕ್ಷಕರ ಬಗ್ಗೆ ಗೌರವ ಕಡಿಮೆಯಾಗುತ್ತದೆ. ಇದರಿಂದ ಮಕ್ಕಳು ಅವರ ವಿಷಯವನ್ನು ಆಸಕ್ತಿಯಿಂದ ಕಲಿಯುವುದಿಲ್ಲ. ಸಮಾಜದ ಪ್ರತಿಯೊಬ್ಬ ವ್ಯಕ್ತಿಯೂ ಶಿಕ್ಷಕರಿಗೆ ಗೌರವ ನೀಡಬೇಕು. ಹೆಚ್ಚಿನ ಪ್ರಮಾಣದಲ್ಲಿ ಗೌರವ ನೀಡುವುದರಿಂದ ಶಿಕ್ಷಕರಲ್ಲಿ ಕಲಿಸುವ ಜವಾಬ್ದಾರಿ ಹೆಚ್ಚುತ್ತದೆ ಎಂದರು.
ಜಿಲ್ಲಾ ಶಿಕ್ಷಣಾಧಿಕಾರಿಗಳ ಸಂಘದ ಜಿಲ್ಲಾಧ್ಯಕ್ಷ ಡಾ. ಬಿ.ಎಂ.ಬೇವಿನಮರದ ಮಾತನಾಡಿ, ಅನೇಕ ಶಿಕ್ಷಕರು ತಮ್ಮ ವೃತ್ತಿ ಬದುಕಿನಲ್ಲಿ ಪ್ರಾಮಾಣಿಕತೆಯಿಂದ ತಮ್ಮಷ್ಟಕ್ಕೆ ತಾವು ಪಾಠ ಬೋಧನೆಯಲ್ಲಿ ತೊಡಗಿ ಅನೇಕ ಮಕ್ಕಳ ಬದುಕಿಗೆ ದಾರಿದೀಪವಾಗಿದ್ದಾರೆ. ಇಂದಿನ ಪರಿಸ್ಥಿತಿಯಲ್ಲಿ ಅರ್ಜಿ ಹಾಕಿ ಒತ್ತಡ ತಂದು ಪ್ರಶಸ್ತಿ ಪಡೆಯುವ ಮನಸ್ಥಿತಿಯಲ್ಲಿ ಅವರಿರುವುದಿಲ್ಲ. ಅಂಥ ಶಿಕ್ಷಕರನ್ನು ಗುರುತಿಸಿ ಅವರ ಕುರಿತು ಪರಿಶೀಲನೆ ನಡೆಸಿ ಎಲ್ಲ ಸಂಘಟನೆಗಳ ಸಮ್ಮುಖದಲ್ಲಿ ಅವರ ಪ್ರ್ರಸ್ತಾಪ ಮಂಡಿಸಿ ಪ್ರಶಸ್ತಿ ನೀಡುವ ಕುರಿತು ತೀರ್ಮಾನಿಸಲಾಗುತ್ತದೆ ಎಂದರು.ಇದೇ ಸಂದರ್ಭದಲ್ಲಿ ಜಿಲ್ಲೆಯ 14 ಶಿಕ್ಷಕರನ್ನು ಗುರುತಿಸಿ ಜಿಲ್ಲಾ ಜ್ಞಾನದೀಪ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮಾಡಲಾಯಿತು. ಪ್ರಶಸ್ತಿ ಪುರಸ್ಕೃತರ ಪರವಾಗಿ ಸಿ.ಎಸ್. ಭಗವಂತಗೌಡ್ರ, ಅರ್ಪಣಾ ಎಲ್. ಮಾತನಾಡಿದರು.
ವಿಶೇಷವೆಂದರೆ ಇವರಿಗೆಲ್ಲ ಪ್ರಶಸ್ತಿಯನ್ನು ವಿದ್ಯಾರ್ಥಿಗಳು, ವೈದ್ಯರು, ಪತ್ರಿಕಾ ಮಾಧ್ಯಮದವರು, ಪೌರಕಾರ್ಮಿಕರು, ಶಿಕ್ಷಣಾಧಿಕಾರಿಗಳು, ಪೊಲೀಸ್ ಇಲಾಖೆಯವರು ಸನ್ಮಾನಿಸಿದರು.ಕಾರ್ಯಕ್ರಮದಲ್ಲಿ ಬ್ಯಾಡಗಿ ಬಿಇಓ ಎಸ್.ಜಿ. ಕೋಟಿ, ದತ್ತಾತ್ರೇಯ ಜೋಶಿ, ಕಾಶಿನಾಥ ಅರಾವತ್, ಮಲ್ಲಿಕಾರ್ಜುನ ಶಾಂತಗಿರಿ, ಮುರಗೇಶ ಹುಂಬಿ, ಎ.ಎಚ್. ಕಬ್ಬಿಣಕಂತಿಮಠ, ಎನ್. ಸುರೇಶಕುಮಾರ, ಈರಪ್ಪ ಲಮಾಣಿ ಇದ್ದರು. ನಾಗರಾಜ ನಡುವಿನಮಠ ನಿರ್ವಹಿಸಿದರು.
ಪ್ರಶಸ್ತಿಗೆ ಭಾಜನರಾದ ಶಿಕ್ಷಕರು:ಶಿಕ್ಷಕರ ದಿನಾಚರಣೆ ಅಂಗವಾಗಿ ಜಿಲ್ಲೆಯ 14 ಶಿಕ್ಷಕರಾದ ಸಿ.ಎಸ್. ಭಗವಂತಗೌಡ್ರ, ಎಂ.ಎಫ್. ಈಳಿಗೇರ, ಹೊನ್ನವ್ವ ವಡ್ಲವರ, ಪುಷ್ಪಾ ಶಿರಿಗೌಡ, ಸುಧಾ ಬಣಕಾರ, ಸುರೇಶ ಹಂಜೇರ, ನೀಲಮ್ಮ ಕೆಂಡದಮಠ, ಮಾಲತೇಶ ಗುಡಗೂರ, ಅರ್ಪಣಾ ಮೋಹನ್ಕುಮಾರ, ಅಮಾನುಲ್ಲಾ ಗೋರಿಖಾನ್, ಪ್ರಭು ಭಂಗೇರಾ, ಹನುಮಂತಪ್ಪ ಹಾಲವರ, ಪಿ.ಕೆ. ನಿಂಗಪ್ಪ, ಸುಮಲತಾ ಹಿರೇಮಠ ಅವರಿಗೆ ಜಿಲ್ಲಾ ಜ್ಞಾನ ದೀಪ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.