ಹಿರಿಕರ ಗ್ರಾಮದ ಶ್ರೀ ರಾಮೇಶ್ವರ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದಲ್ಲಿ ಪ್ರತಿಭಟನೆ ನಡೆಸಿದರು.
ಕನ್ನಡಪ್ರಭವಾರ್ತೆ ಸೋಮವಾರಪೇಟೆ
ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳಾದ ಬಿ.ಆರ್. ಗವಾಯಿ ಅವರಿಗೆ ಶೂ ಎಸೆದ ಪ್ರಕರಣ ಸಂವಿಧಾನ ವಿರೋಧಿಯಾಗಿದ್ದು, ಕೂಡಲೆ ಆರೋಪಿ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಿ, ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿ ಹಿರಿಕರ ಗ್ರಾಮದ ಶ್ರೀ ರಾಮೇಶ್ವರ ಯುವಕ ಸಂಘದ ಪದಾಧಿಕಾರಿಗಳು ಗ್ರಾಮದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಮುಖ್ಯ ನ್ಯಾಯಮೂರ್ತಿಗಳಿಗೆ ಶೂ ಎಸೆಯುವ ಪ್ರಯತ್ನ ಅತ್ಯಂತ ಖಂಡನೀಯವಾದದು. ಸಂವಿಧಾನ ವಿರೋಧಿಗಳಿಂದ ಮಾತ್ರ ಇಂತಹ ಕೃತ್ಯಗಳನ್ನು ಮಾಡಲು ಸಾಧ್ಯ. ಶೂ ಎಸೆದ ವಕೀಲನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಯುವಕ ಸಂಘದ ಅಧ್ಯಕ್ಷ ಎಚ್.ಆರ್.ಮೋಹನ್ದಾಸ್ ಒತ್ತಾಯಿಸಿದರು.ದಲಿತಪರ ಹೋರಾಟಗಾರ ಎಚ್.ಜೆ.ಹನುಮಯ್ಯ ಮಾತನಾಡಿ, ಭಾರತದಲ್ಲಿ ಮನುಸ್ಮೃತಿಯನ್ನೇ ಸಂವಿಧಾನ ಮಾಡಲು ಹೊರಟವರಿಗೆ ಅಂಬೇಡ್ಕರ್ ಬರೆದ ಸಂವಿಧಾನ ನುಂಗಲಾರದ ತುತ್ತಾಗಿದೆ. ಸಮಾನತೆಯ ವಿರೋಧಿಗಳು, ಮನುವಾದಿಗಳು ಸಂವಿಧಾನ ಬದಲಾವಣೆಯ ಸಂಚು ರೂಪಿಸುತ್ತಿದ್ದಾರೆ. ದೇಶದೆಲ್ಲಡೆ ದಲಿತ ದೌರ್ಜನ್ಯ ಮಿತಿಮೀರಿದೆ. ದಲಿತ ಜನಾಂಗಕ್ಕೆ ಸೇರಿದ ಅಧಿಕಾರಿಗಳಿಗೆ ಹಿಂಸೆ ನೀಡಲಾಗುತ್ತಿದೆ. ಅನೇಕ ದಲಿತ ಅಧಿಕಾರಿಗಳು ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನಾದರೂ ಶೂದ್ರರು ಎಚ್ಚತ್ತುಕೊಳ್ಳಬೇಕು. ಒಗ್ಗಟ್ಟಿನ ಹೋರಾಟದ ಮೂಲಕ ಸಂವಿಧಾನ ವಿರೋಧಿಗಳಿಗೆ ತಕ್ಕಪಾಠ ಕಲಿಸಬೇಕು ಎಂದು ಹೇಳಿದರು.ಪ್ರತಿಭಟನೆಯಲ್ಲಿ ಸಂಘದ ಕಾರ್ಯದರ್ಶಿ ಅಭಿಷೇಕ್, ಗ್ರಾಮ ಪಂಚಾಯಿತಿ ಸದಸ್ಯ ಸಿ.ಈ.ವೆಂಕಟೇಶ್, ಗ್ರಾಮದ ಹಿರಿಯರಾದ ರಾಜಪ್ಪ, ಉಮೇಶ್, ಬೋಜಪ್ಪ, ದೊಡ್ಡಯ್ಯ, ಪ್ರತಾಪ್, ಈರಪ್ಪ, ಶಿವಣ್ಣ ವಸಂತ್ ಮತ್ತಿತರರು ಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.