ಕನ್ನಡಪ್ರಭ ವಾರ್ತೆ ಬೆಂಗಳೂರು
ರಿಚ್ಮಂಡ್ ಟೌನ್ ಸಮೀಪದ, ಹೊಸೂರು ರಸ್ತೆಯಲ್ಲಿರುವ ತಮ್ಮ ಒಡೆತನದ ಕಾನ್ಫಿಡೆಂಟ್ ಗ್ರೂಪ್ ಕಂಪನಿಯ ಪ್ರಧಾನ ಕಚೇರಿಯಲ್ಲಿ ರಾಯ್ ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ಕಚೇರಿಯಲ್ಲೇ ರಾಯ್ ಅವರು ಸ್ವಅಕ್ಷರದಲ್ಲಿ ಬರೆದಿದ್ದಾರೆ ಎನ್ನಲಾದ ಕೆಲ ಪತ್ರಗಳು ಸಿಕ್ಕಿವೆ. ಇವುಗಳು ಹಣಕಾಸು ವ್ಯವಹಾರಕ್ಕೆ ಸಂಬಂಧಿಸಿದ್ದಾಗಿದ್ದು, ಆ ಪತ್ರಗಳಲ್ಲಿ ಉಲ್ಲೇಖಿತ ವಿವರಗಳನ್ನಾಧರಿಸಿ ಆತ್ಮಹತ್ಯೆ ಕಾರಣಗಳ ಶೋಧನೆಗೆ ಎಸ್ಐಟಿ ಪ್ರಯತ್ನಿಸಿದೆ ಎಂದು ಮೂಲಗಳು ಹೇಳಿವೆ.
ರಾಯ್ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳು ತಪಾಸಣೆ ನಡೆಸಿದ ವೇಳೆ ಕೆಲ ದಾಖಲೆಗಳು ಹಾಗೂ ಕೈ ಬರಹದ ಪತ್ರಗಳು ಸಿಕ್ಕವು. ಇವುಗಳನ್ನು ಜಪ್ತಿ ಮಾಡಿದ ಅಧಿಕಾರಿಗಳು, ಕೈ ಬರಹದ ಅಕ್ಷರವು ರಾಯ್ ಅವರದ್ದು ಎಂಬುದನ್ನು ಖಚಿತಪಡಿಸಿಕೊಳ್ಳಲು ಎಫ್ಎಸ್ಎಲ್ಗೆ ಕಳುಹಿಸಲಾಗಿದೆ. ಈ ತಜ್ಞರ ವರದಿ ಬಳಿಕ ಮುಂದಿನ ಹಂತದ ತನಿಖೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.ಕೇರಳ, ಬೆಂಗಳೂರು ಸೈಟ್ ವ್ಯವಹಾರ:
ಇತ್ತೀಚೆಗೆ ಕೇರಳ ರಾಜ್ಯದಲ್ಲಿ 150ಕ್ಕೂ ಹೆಚ್ಚಿನ ನಿವೇಶನಗಳನ್ನು ರಾಯ್ ಮಾರಾಟ ಮಾಡಿದ್ದರು ಎನ್ನಲಾಗಿದೆ. ಅಲ್ಲದೆ ಬೆಂಗಳೂರಿನಲ್ಲಿ ಕೂಡ ಕೆಲವು ಆಸ್ತಿ ಖರೀದಿಗೆ ಯತ್ನಿಸಿದ್ದರು. ಕೋರಮಂಗಲದಲ್ಲಿ ತಾವು ವಾಸವಾಗಲು ಬಂಗಲೆ ನಿರ್ಮಾಣಕ್ಕೂ ಅವರು ಯೋಜಿಸಿದ್ದರು. ಈ ಬಗ್ಗೆ ಕೆಲವರ ಜತೆ ಆರ್ಥಿಕ ವ್ಯವಹಾರಗಳನ್ನು ಹೊಂದಿದ್ದರು ಎನ್ನಲಾಗಿದೆ.....ಬಾಕ್ಸ್....ರಾಯ್ ಕುಟುಂಬದವರಿಗೆ ಬುಲಾವ್
ರಾಯ್ ಆತ್ಮಹತ್ಯೆ ಪ್ರಕರಣ ಸಂಬಂಧ ಮೃತರ ಪತ್ನಿ ಹಾಗೂ ಮಕ್ಕಳಿಂದ ಅಧಿಕೃತ ಹೇಳಿಕೆ ದಾಖಲಿಸಿಕೊಳ್ಳಲು ಎಸ್ಐಟಿ ಮುಂದಾಗಿದೆ. ಆತ್ಮಹತ್ಯೆ ವಿಚಾರ ತಿಳಿದು ದುಬೈನಿಂದ ಮರಳಿದ್ದ ರಾಯ್ ಅವರ ಪತ್ನಿ ಹಾಗೂ ಮಕ್ಕಳನ್ನು ಭೇಟಿಯಾಗಿ ಪ್ರಾಥಮಿಕ ಹಂತದ ವಿವರವನ್ನು ಎಸ್ಐಟಿ ಕಲೆ ಹಾಕಿತ್ತು.ಮಾನಸಿಕ ನೆಮ್ಮದಿಗೆ ಕೌನ್ಸೆಲಿಂಗ್
ಇತ್ತೀಚಿನ ವ್ಯವಹಾರಿಕ ಕಾರ್ಯದೊತ್ತಡದಿಂದ ಬಳಲುತ್ತಿದ್ದ ರಾಯ್ ಅವರು, ಮಾನಸಿಕ ಒತ್ತಡದಿಂದ ಪಾರಾಗಲು ಮನಃಶಾಸ್ತ್ರಜ್ಞರ ಕೌನ್ಸೆಲಿಂಗ್ಗೆ ಒಳಗಾಗಿದ್ದರು. ಆತ್ಮಹತ್ಯೆ ಹಿಂದಿನ ದಿನ ಸಹ ಅವರು ತಜ್ಞರನ್ನು ಭೇಟಿಯಾಗಿ ಸಮಾಲೋಚಿಸಿದ್ದರು ಎನ್ನಲಾಗಿದೆ.ಆತ್ಮಹತ್ಯೆ ನೂರಕ್ಕೆ ನೂರು ಖಚಿತ
ರಾಯ್ ಅವರದ್ದು ನೂರಕ್ಕೆ ನೂರಷ್ಟು ಆತ್ಮಹತ್ಯೆ ಎಂಬುದು ಖಚಿತವಾಗಿದೆ. ಆದರೆ ಆ ಆತ್ಮಹತ್ಯೆ ಹಿಂದಿನ ಕಾರಣ ಪತ್ತೆಯಾಗಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ರಾಯ್ ಅವರಿಗೆ ಐಟಿ ಅಧಿಕಾರಿಗಳು ಗುಂಡಿಟ್ಟಿದ್ದಾರೆ ಎಂದು ಕೆಲವರು ಆರೋಪಿಸಿದ್ದರು. ಈ ಎಲ್ಲ ಶಂಕೆಗಳನ್ನು ಅಧಿಕಾರಿಗಳು ತಳ್ಳಿ ಹಾಕಿದ್ದಾರೆ.