- ಕೃಷ್ಣ ಮತ್ತು ಕಾವೇರಿ ವಸತಿ ಗೃಹಗಳನ್ನು ಉದ್ಘಾಟನೆ
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಜನಸಾಮಾನ್ಯರಿಗೆ ಅನುಕೂಲವಾಗುವಂತೆ ವಸತಿ ಯೋಜನೆಯಡಿ ಹಲವಾರು ಕಾರ್ಯಕ್ರಮಗಳನ್ನು ಕೊಡುವ ಮೂಲಕ ರಾಜ್ಯಸರ್ಕಾರ ದೊಡ್ಡ ಕ್ರಾಂತಿ ಮಾಡುತ್ತಿದೆ ಎಂದು ರಾಜ್ಯ ಇಂಧನ ಖಾತೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ ಜಾರ್ಜ್ ತಿಳಿಸಿದರು.ಕೆಂಪನಹಳ್ಳಿಯ ಆಶಾಕಿರಣ ಅಂಧಮಕ್ಕಳ ಶಾಲಾ ಆವರಣದಲ್ಲಿ ಇಂಧನ ಇಲಾಖೆ, ಜಿಲ್ಲಾಡಳಿತ, ಜಿಪಂ, ಕರ್ನಾಟಕ ಅಂಧರ ಒಕ್ಕೂಟ, ಆಶಾಕಿರಣ ಚಾರಿಟಬಲ್ ಟ್ರಸ್ಟ್, ಆಶ್ರಯ ಫೌಂಡೇಶನ್, ಆಶಾಕಿರಣ ಅಂಧಮಕ್ಕಳ ವಸತಿಯುತ ಪಾಠಶಾಲೆ ಸಂಯುಕ್ತಾಶ್ರಯದಲ್ಲಿ ಕೆಪಿಟಿಸಿಎಲ್ನ ಸಿಎಸ್ಆರ್ ನಿಧಿಯಲ್ಲಿ ಸುಮಾರು ₹51 ಲಕ್ಷ ವೆಚ್ಚದಲ್ಲಿ ಅಂಧಮಕ್ಕಳ ಸಿಬ್ಬಂದಿಗೆ ನಿರ್ಮಿಸಿರುವ ಕೃಷ್ಣ ಮತ್ತು ಕಾವೇರಿ ವಸತಿ ಗೃಹಗಳನ್ನು ಉದ್ಘಾಟಿಸಿ ಮಾತನಾಡಿದರು.ಕಳೆದ ಹಲವಾರು ವರ್ಷಗಳಿಂದ ಆಶಾಕಿರಣ ಅಂಧಮಕ್ಕಳ ಟ್ರಸ್ಟ್ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿದೆ ಎಂದು ಶ್ಲಾಘಸಿದ ಅವರು, ರಾಜ್ಯಾದ್ಯಂತ ಅಂಧರ ಕೌಶಲ್ಯಕ್ಕೆ ತಕ್ಕಂತೆ ಸೌಲಭ್ಯ ನೀಡಿ ಸಮಾಜದ ಮುನ್ನಲೆಗೆ ತರುವ ಕೆಲಸ ಮಾಡುತ್ತಿದೆ ಎಂದು ಹೇಳಿದರು.ಅಂಧರಿಗೆ ಕೇವಲ ಭಾಷಣದಲ್ಲಿ ಸಿಂಪತಿ ತೋರದೆ ಶಕ್ತಿ ತುಂಬುವ ಅಗತ್ಯ ಇದೆ. ಇದು ಜಾರಿಯಾದಾಗ ರಾಜ್ಯ, ದೇಶ ಅವರನ್ನು ಕಾಣುವ ಮನಸ್ಥಿತಿ ಬದಲಾಗುತ್ತದೆ ಎಂದು ತಿಳಿಸಿದರು.ಕೋವಿಡ್ ನಂತರದಲ್ಲಿ ದೇಶದಲ್ಲಿ ಜನತೆ ಸಂಕಷ್ಟದಲ್ಲಿದ್ದಾರೆಂಬುದನ್ನು ಮನಗಂಡು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಕಾಲ್ನಡಿಗೆ ಜಾಥಾ ಆರಂಭಿಸುವ ಮೂಲಕ ಸಮಸ್ಯೆಗಳನ್ನು ಆಲಿಸಿದರು. ಮಹಿಳೆ ಶಿಕ್ಷಿತಳಾದಾಗ ಮಾತ್ರ ಸುಶಿಕ್ಷಿತ ಸಮಾಜ ನಿರ್ಮಾಣವಾಗುತ್ತದೆ ಎಂದರು.ಪಂಚ ಗ್ಯಾರಂಟಿ ಯೋಜನೆಗಳ ಮೂಲಕ ಜನಸಾಮಾನ್ಯರಿಗೆ ಸರ್ಕಾರದ ಸೌಲಭ್ಯ ತಲುಪಿಸಿ ಬಡವರು, ಶೋಷಿತರು, ಕಾರ್ಮಿಕರ ಕುಟುಂಬಗಳನ್ನು ಸದೃಢಗೊಳಿಸಲು ಸರ್ಕಾರ ಚಿಂತನೆ ನಡೆಸಿದೆ ಎಂದರು.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಂಧರ ಒಕ್ಕೂಟದ ಅಧ್ಯಕ್ಷ ಡಾ. ಜಿ.ಪಿ ಕೃಷ್ಣೇಗೌಡ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಎಚ್.ಡಿ. ತಮ್ಮಯ್ಯ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ. ಕೆ.ಪಿ ಅಂಶುಮಂತ್, ನಗರ ಸಭಾಧ್ಯಕ್ಷೆ ಶೀಲಾದಿನೇಶ್, ಉಪಾಧ್ಯಕ್ಷೆ ಲಲಿತಾನಾಯ್ಕ್, ಜಿಲ್ಲಾಧಿಕಾರಿ ಮೀನಾ ನಾಗರಾಜ್, ಜಿ.ಪಂ ಸಿಇಒ ಎಚ್.ಎಸ್. ಕೀರ್ತನ, ಜಿಲ್ಲಾ ಪೊಲೀಸ್ ಮುಖ್ಯಾಧಿಕಾರಿ ಡಾ. ವಿಕ್ರಮ ಅಮಟೆ, ಪೌರಾಯುಕ್ತ ಬಿ.ಸಿ. ಬಸವರಾಜು, ಎಐಟಿ ಪ್ರಾಂಶುಪಾಲ ಡಾ. ಸಿ.ಟಿ ಜಯದೇವ್, ತಹಸೀಲ್ದಾರ್ ರೇಷ್ಮಾ, ಡಾ. ವರ್ಷಾ ಅಭಿಷೇಕ್, ಆಶ್ರಯ ಫೌಂಡೇಶನ್, ಅಧ್ಯಕ್ಷ ಸಾಗರ್, ನಗರಸಭೆ ಸದಸ್ಯೆ ಮಂಜುಳ ಲಕ್ಷ್ಮಣ್. ಡಾ. ಜ್ಯೋತಿ, ನಶ್ರುಲ್ಲಾ ಶರೀಫ್, ಜಯರಾಮ್ ಉಪಸ್ಥಿತರಿದ್ದರು. ಮೊದಲಿಗೆ ಮಹೇಶ್ ಸ್ವಾಗತಿಸಿದರು.