ಮುಖ್ಯ ಸಚೇತಕ ಸ್ಥಾನಕ್ಕೆ ಅವರು ಏಷ್ಟು ಕೊಟ್ಟಿದ್ದಾರೆ ಎನ್ನುವುದು ಮೊದಲು ಹೇಳಲಿ
ಕೊಪ್ಪಳ: ಬಿಜೆಪಿ ಕಚೇರಿ ಮೇಲೆ ದಾಳಿ ಮಾಡಲು ಐದು ನಿಮಿಷವೂ ಬೇಕಾಗಿಲ್ಲ, ಆದರೆ ಅವರು ಮಾಡಿದ್ದಾರೆಂದು ನಾವು ಆ ರೀತಿ ಮಾಡಲ್ಲ ಎಂದು ಶಾಸಕ ರಾಘವೇಂದ್ರ ಹಿಟ್ನಾಳ ಹೇಳಿದರು.
ನಗರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಎಂಎಲ್ಸಿ ಹೇಮಲತಾ ನಾಯಕ್ ಕಾಂಗ್ರೆಸ್ ಕಚೇರಿಗೆ ಕಲ್ಲು ಎಸೆದಿದ್ದು ಸರಿಯಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಹೋರಾಟ ಮಾಡಬೇಕು. ಜನರು ಪ್ರತಿಯೊಂದನ್ನೂ ಸೂಕ್ಷ್ಮವಾಗಿ ನೋಡುತ್ತಿರುತ್ತಾರೆ. ನಮ್ಮ ಕಾರ್ಯಕರ್ತರಿಗೆ ಹೋರಾಟಕ್ಕೆ ಕರೆ ನೀಡಿದರೆ ಐದು ನಿಮಿಷವೂ ಆಗಲ್ಲ. ಅವರು ದಾಳಿ ಮಾಡುತ್ತಾರೆ. ಬಿಜೆಪಿಯವರು ಮಾಡುತ್ತಾರೆ ಎಂದು ನಾವು ಮಾಡಿದರೆ ಅದಕ್ಕೆ ಅರ್ಥ ಇರಲ್ಲ. ನಾವು ನಮ್ಮ ನಾಯಕರೊಂದಿಗೆ ಮಾತನಾಡಿದ್ದೇವೆ. ಬಿಜೆಪಿ ಯಾವ ರೀತಿ ಇದೆ ಎನ್ನುವುದು ಜನರಿಗೆ ಗೊತ್ತಾಗಲಿ, ಬಿಜೆಪಿ ನಾಯಕರು ಮಾತನಾಡಿರುವ ಭಾಷೆ, ಮಾತನಾಡಿದ ವಿಚಾರ ಎಲ್ಲವೂ ಜನರಿಗೆ ಗೊತ್ತಿದೆ. ಹೋರಾಟ ನಾವೂ ಮಾಡಿದ್ದೇವೆ. ಆದರೆ ಈ ರೀತಿ ಮಾಡಿದ್ದು ಸರಿಯಲ್ಲ. ಮುಂದೆ ಆರೋಗ್ಯಕರ ಹೋರಾಟ ಮಾಡಲಿ. ಇದೇ ರೀತಿ ಮಾಡಿದರೆ ನಾವು ತಕ್ಕ ಪಾಠ ಕಲಿಸಲಿದ್ದೇವೆ ಎಂದರು.
ಮಂತ್ರಿ ಸ್ಥಾನಕ್ಕೆ ಹಣ ಕೊಡಲಾಗಿದೆ ಎಂಬ ಶಾಸಕ ದೊಡ್ಡನಗೌಡ ಪಾಟೀಲ್ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಮುಖ್ಯ ಸಚೇತಕ ಸ್ಥಾನಕ್ಕೆ ಅವರು ಏಷ್ಟು ಕೊಟ್ಟಿದ್ದಾರೆ ಎನ್ನುವುದು ಮೊದಲು ಹೇಳಲಿ. ಅವರೇನು ಹಣ ಕೊಟ್ಟು ಮುಖ್ಯ ಸಚೇತಕರು ಆಗಿದ್ದಾರಾ? ಹಣದ ವ್ಯವಹಾರ ಅವರಿಗೆ ಗೊತ್ತಿದೆ ಎಂದರೆ ಇದೆಲ್ಲವೂ ಗೊತ್ತಿರುತ್ತದೆ. ಸಚಿವ ಸ್ಥಾನಕ್ಕೆ ಹಣ ಕೊಡುವ ವ್ಯವಸ್ಥೆ ನಮ್ಮಲ್ಲಿ ಇಲ್ಲ. ನಮ್ಮ ಹೈಕಮಾಂಡ್ ಗಟ್ಟಿಯಾಗಿದೆ ಎಂದರು.
ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಹೇಳಿಕೆ ವಿಚಾರವಾಗಿ ಮಾತನಾಡಿದ ಅವರು, ಅನ್ಸಾರಿ ಮನಸ್ಸು ಮಾಡಿದರೆ ರಾಜ್ಯದಲ್ಲಿನ ಎಲ್ಲ ಕ್ಷೇತ್ರದಲ್ಲಿಯೂ ಸೋಲಿಸಬಹುದು. ಕೇವಲ ಮೂರು ಕ್ಷೇತ್ರದಲ್ಲಿ ಅಲ್ಲ. ಈಗ ಎಲ್ಲರೂ ಎಸ್ಐಆರ್ ಕಾರ್ಯದಲ್ಲಿ ತೊಡಗಿದ್ದಾರೆ. ಆದರೆ ಅವರು ಏನು ಮಾಡುತ್ತಿದ್ದಾರೆ? ನಾಯಕರಾಗುವುದು ಜನರ ಬೆಂಬಲದಿಂದ ಎನ್ನುವುದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ನಾವು ದೆಹಲಿಗೆ ಹೋಗಿದ್ದೇವು. ಆದರೆ ನೀಟ್ ಅಕ್ರಮದ ಕುರಿತು ಹೋರಾಟ ನಡೆದಿದೆ. ಹಾಗಾಗಿ ಸಂಪುಟ ವಿಚಾರ ಮುಂದಕ್ಕೆ ಹೋಗಿದೆ. ಸಚಿವ ಸ್ಥಾನಕ್ಕಾಗಿ ನಾವು ಮನವಿ ಮಾಡಿದ್ದೇವೆ. ಎಲ್ಲವೂ ಹೈಕಮಾಂಡ್ ನಿರ್ಧಾರ ಕೈಗೊಳ್ಳಲಿದೆ ಎಂದರು.
ಬರದ ಪರಿಸ್ಥಿತಿ ಕ್ಷೇತ್ರದಲ್ಲಿ ಕುಳಿತರೆ ಎದುರಿಸಲು ಆಗಲ್ಲ. ಬದಲಾಗಿ ನಮ್ಮ ಸರ್ಕಾರ ಬರವನ್ನು ಗಂಭೀರವಾಗಿ ತೆಗೆದುಕೊಂಡಿದೆ. ತುಂಗಭದ್ರಾ ಡ್ಯಾಂ ಕ್ರಸ್ಟ್ ಗೇಟ್ ಬಗ್ಗೆ ಬಿಜೆಪಿ ಅಪಹಾಸ್ಯ ಮಾಡಿದರು. ಆದರೆ ಸಕಾಲಕ್ಕೆ ಗೇಟ್ ಅಳವಡಿಕೆ ಮಾಡಿದ್ದೇವೆ. ಈಗ ಮಳೆ ಬರುತ್ತಿದೆ. ಡ್ಯಾಂಗೆ ಒಳ ಹರಿವು ಇದೆ. ಹಿರೇಹಳ್ಳವೂ ಭರ್ತಿಯಾಗುತ್ತಿದೆ. ಪ್ರಕೃತಿ ನಿಯಮ ಅರಿತು ಮಾತನಾಡುತ್ತಿಲ್ಲ. ಅವರಿಗೆ ಏನು ಮಾತನಾಡಬೇಕು, ಏನು ಮಾತನಾಡಬಾರದು ಎನ್ನುವುದು ಗೊತ್ತಿಲ್ಲ. ಬರದ ಬಗ್ಗೆ ಕಲಬುರಗಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಶಾಸಕರೂ ಚರ್ಚೆ ಮಾಡಿದ್ದೇವೆ. ಮುಂಜಾಗೃತೆ ಕ್ರಮ ವಹಿಸುತ್ತಿದ್ದೇವೆ ಎಂದರು.
ಮೋಡ ಬಿತ್ತನೆ ಬಗ್ಗೆ ಸರ್ಕಾರ ಚಿಂತನೆ ಮಾಡುತ್ತಿದೆ. ಮೋಡ ಬಿತ್ತನೆ ಯಶಸ್ವಿಯಾಗುತ್ತಿದೆಯೆ ಎನ್ನುವ ಕುರಿತು ಸರ್ಕಾರ ಅವಲೋಕನ ಮಾಡುತ್ತಿದೆ. ಅದರ ಸಾಧಕ-ಬಾಧಕ ನೋಡಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲಿದೆ ಎಂದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.