ಜಾನಕಿ ಭಾರತೀಯ ಸಂಗೀತ ಲೋಕದ ಅಮೂಲ್ಯ ಆಸ್ತಿ

KannadaprabhaNewsNetwork |  
Published : Jul 17, 2026, 02:00 AM IST
ಕಾರಟಗಿಯಲ್ಲಿ ಕಸಾಪದಿಂದ ರಾಗಸಂಗಮ ಸಿಂಗಿಗ್ ಸ್ಟೂಡಿಯೋದಲ್ಲಿ ಖ್ಯಾತ ಗಾಯಕಿ ಎಸ್. ಜಾನಕಿಗೆ ನುಡಿನಮನ ಸಲ್ಲಿಸಲಾಯಿತು. | Kannada Prabha

ಸಾರಾಂಶ

ಕಳೆದ ಆರು ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಸಂಗೀತ ಪ್ರಿಯರನ್ನು ಮೋಡಿ ಮಾಡಿದ್ದ ಎಸ್. ಜಾನಕಿ ಗಾಯನ ನಿಲ್ಲಿಸಿದ್ದಾರೆ

ಕಾರಟಗಿ: ಸಂಗೀತಕ್ಕೆ ಭಾಷೆಯ ಗಡಿ ಇಲ್ಲ ಎಂಬುದನ್ನು ತಮ್ಮ ಧ್ವನಿಯ ಮೂಲಕ ಸಾಬೀತುಪಡಿಸಿದ ಅಪರೂಪದ ಗಾಯಕಿ ಎಸ್.ಜಾನಕಿ. ಪ್ರೇಮಗೀತೆ, ಭಕ್ತಿಗೀತೆ

ಹೀಗೆ ಎಲ್ಲ ಪ್ರಕಾರದಲ್ಲೂ ತಮ್ಮದೇ ಛಾಪು ಮೂಡಿಸಿದ್ದ ಅವರು ಭಾರತೀಯ ಸಂಗೀತ ಲೋಕದ ಅಮೂಲ್ಯ ಆಸ್ತಿ. ಅವರು ಭೌತಿಕವಾಗಿ ದೂರವಾದರೂ, ಅವರ ಅಮರ ಗಾನ ಮುಂದಿನ ಅನೇಕ ತಲೆಮಾರುಗಳ ಮನದಲ್ಲಿ ಸದಾ ಜೀವಂತವಾಗಿಯೇ ಉಳಿಯಲಿದೆ ಎಂದು ಡಾ.ಸಿದ್ದಯ್ಯ ಪುರಾಣಿಕ ಟ್ರಸ್ಟ್ (ರಿ) ಸದಸ್ಯರ ಹಾಗೂ ಸಾಹಿತಿ ರಮೇಶ ಬನ್ನಿಕೊಪ್ಪ ಹೇಳಿದರು.

ಇಲ್ಲಿನ ದಲಾಲಿ ಬಜಾರ್ ರಸ್ತೆಯಲ್ಲಿರುವ ರಾಗಸಂಗಮ ಸಿಂಗಿಂಗ್ ಸ್ಟುಡಿಯೋ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಹಮ್ಮಿಕೊಳ್ಳಲಾಗಿದ್ದ, ಖ್ಯಾತ ಹಿನ್ನೆಲೆ ಗಾಯಕಿ ಎಸ್. ಜಾನಕಿ ನಿಧನದ ಹಿನ್ನೆಲೆ ನಡೆದ ಸ್ವರ ಶ್ರದ್ಧಾಂಜಲಿ ಕಾರ್ಯಕ್ರಮವನ್ನುದ್ಧೇಶಿಸಿ ಮಾತನಾಡಿದರು.

ಕಳೆದ ಆರು ದಶಕಗಳ ಕಾಲ ತಮ್ಮ ಸುಮಧುರ ಕಂಠದಿಂದ ಸಂಗೀತ ಪ್ರಿಯರನ್ನು ಮೋಡಿ ಮಾಡಿದ್ದ ಎಸ್. ಜಾನಕಿ ಗಾಯನ ನಿಲ್ಲಿಸಿದ್ದಾರೆ. ಸುಮಧುರ ಗಾಯನದಿಂದ ಮನೆಮಾತಾಗಿದ್ದ ಜಾನಕಮ್ಮ ಸುಮಾರು 48,000ಕ್ಕೂ ಹೆಚ್ಚು ಹಾಡು ಹಾಡಿದ್ದಾರೆ. ಆಂಧ್ರಪ್ರದೇಶದಲ್ಲಿ ಜನಿಸಿದ್ದರೂ ಎಸ್.ಜಾನಕಿಯವರಿಗೆ ಕರ್ನಾಟಕದ ಮೇಲೆ ವಿಶೇಷ ಪ್ರೀತಿಯಿತ್ತು. ಹೀಗಾಗಿ ಕನ್ನಡದಲ್ಲಿ 8,000 ಹಾಡು ಹಾಡಿ ಸಂಗೀತ ಆಸಕ್ತರ ಮನಗೆದ್ದಿದ್ದರು. ಡಾ.ರಾಜಕುಮಾರ, ವಿಷ್ಣುವರ್ಧನ್, ಅಂಬರೀಶ್, ಶಂಕರ್ ನಾಗ್, ಅನಂತ್ ನಾಗ್ ಸೇರಿದಂತೆ ಹಲವು ದಿಗ್ಗಜ ನಟರ ಸಿನಿಮಾಗಳಲ್ಲಿ ಧ್ವನಿ ಭಾವನೆಗಳಿಗೆ ಜೀವ ತುಂಬಿತ್ತು. ಭಾಷೆಯ ಗಡಿ ದಾಟಿ ಅವರಾಡಿದ ಎಲ್ಲ ಹಾಡುಗಳು, ಎಸ್.ಜಾನಕಿ ಅವರನ್ನು ಭಾರತೀಯ ಸಂಗೀತ ಲೋಕದ ಅತ್ಯಂತ ಅಭಿವ್ಯಕ್ತಿಶೀಲ ಗಾಯಕಿಯನ್ನಾಗಿ ರೂಪಿಸಿದೆ ಎಂದರು.

ನೌಕರರ ಸಂಘದ ಅಧ್ಯಕ್ಷ ಹನುಮಂತಪ್ಪ ತೊಂಡಿಹಾಳ ಮಾತನಾಡಿ, ಡಾ.ಎಸ್. ಜಾನಕಿ ಇಂದು ದೈಹಿಕವಾಗಿ ನಮ್ಮಿಂದ ಅಗಲಿದ್ದರೂ ತಲೆಮಾರುಗಳನ್ನು ಪ್ರಭಾವಿಸಿದ ಅವರ ಹತ್ತಾರು ಸಾವಿರ ಹಾಡುಗಳ ಮೂಲಕ ಚಿರಸ್ಥಾಯಿಯಾಗಿದ್ದಾರೆ. ಅದರಲ್ಲೂ ಸಿನಿ ಸಂಗೀತ ಪ್ರೇಮಿಗಳ ಹೃದಯದಲ್ಲಿ ತಮ್ಮ ಮಾಧುರ್ಯ ತುಂಬಿದ ಹಾಡುಗಳಿಂದ ಎಂದೆಂದಿಗೂ ಅಮರರಾಗಿದ್ದಾರೆ.

ಕಸಾಪ ಅಧ್ಯಕ್ಷ ಶರಣಪ್ಪ ಕೋಟ್ಯಾಳ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಗಸಂಗಮ ಸಿಂಗಿಂಗ್ ಸ್ಟುಡಿಯೋದ ಮಾಲೀಕ ಶರಣಬಸವರಾಜ್ ಹಳೇಮನಿ ವಹಿಸಿದ್ದರು.

ಬಳಿಕ ಗಾಯಕರಾದ ಎಂ.ಅಮರೇಶಗೌಡ, ಶರಣಬಸವರಾಜ ಹಳೇಮನಿ, ಶರಣಪ್ಪ ಕುಂಬಾರ, ಮಹಾಂತೇಶ ಗದ್ದಿ, ಉದಯರಾಜ್ ಎನ್ ದುಂಡಸಿ, ವೆಂಕಟೇಶ್ ಭೋವಿ, ನಾಗಲಾಂಬಿಕಾ, ನೀಲಾಂಬಿಕಾ, ಶಶಿಧರ ಸಿದ್ದಾಪುರ, ಮಲ್ಲಿಕಾರ್ಜುನ ಹಿಂದುಪುರ, ಬಸವರಾಜ ಸೌದ್ರಿ, ವೆಂಕಟೇಶ ಅಯ್ಯ ಇನ್ನಿತರರು ಇದ್ದರು.

ಈ ಸಂದರ್ಭದಲ್ಲಿ ಕಸಾಪ ಮಾಜಿ ಅಧ್ಯಕ್ಷ ಚನ್ನಬಸಪ್ಪ ವಕ್ಕಳದ, ಈರಮ್ಮ ಹಳೇಮನಿ, ಪ್ರಹ್ಲಾದ್ ಜೋಶಿ, ಜಾನಪದ ಪರಿಷತ್ತಿನ ಸದಸ್ಯ ಮಹಿಬೂಬ್ ಕಿಲ್ಲೇದಾರ್,ಪ್ರಹ್ಲಾದ್ ಜೋಷಿ, ಸಂದೀಪಗೌಡ, ಶಿಕ್ಷಕ ಅಮರೇಶ ಪಾಟೀಲ್,ದೇವೇಂದ್ರಪ್ಪ ವಡ್ಡೋಡಗಿ, ಭೀಮಣ್ಣ ಕರಡಿ, ಗುರುರಾಜ್ ಶ್ರೇಷ್ಠಿ, ಮಲ್ಲಿಕಾರ್ಜುನ ನೂಲ್ವಿ, ಶರಣಪ್ಪ ಹುರಕಡ್ಲಿ ಇತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಸೋನಂ ವಾಂಗ್ಚೂಕ್ ಹೋರಾಟಕ್ಕೆ ಗದುಗಿನಲ್ಲಿ ಬೆಂಬಲ
ಬೆಳೆವಿಮೆ ಯೋಜನೆ: ರೈತರಿಗೆ ಸಹಕಾರ ನೀಡದ ಬ್ಯಾಂಕ್ ಅಧಿಕಾರಿಗಳ ಮೇಲೆ ಕಠಿಣ ಕ್ರಮಕ್ಕೆ ಆಗ್ರಹ