ಕೆಂಪೇಗೌಡರ ಆಡಳಿತ ಸ್ಮರಣೀಯ

KannadaprabhaNewsNetwork | Published : Jun 28, 2024 12:48 AM

ನಾಡಿನಲ್ಲಿ ಮಹಾತ್ಮರ-ಶರಣರ-ಮಹನೀಯರ ಸಾಧನೆ, ತತ್ವ-ಸಂದೇಶಗಳು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಅವರ ಜಯಂತಿ ಕಾರ್ಯಕ್ರಮ, ಸ್ಮರಣೀಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ನಾಡಿನಲ್ಲಿ ಉತ್ತಮ ಆಡಳಿತ ನೀಡಿದ ಮಹನೀಯರಲ್ಲಿ ಒಬ್ಬರಾದ ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಎಂದಿಗೂ ಮಾದರಿಯಾಗಿದೆ ಎಂದು ತಹಸೀಲ್ದಾರ್ ವೈ.ಎಸ್.ಸೋಮನಕಟ್ಟಿ ಹೇಳಿದರು.

ಕನ್ನಡಪ್ರಭ ವಾರ್ತೆ ಬಸವನಬಾಗೇವಾಡಿ

ನಾಡಿನಲ್ಲಿ ಮಹಾತ್ಮರ-ಶರಣರ-ಮಹನೀಯರ ಸಾಧನೆ, ತತ್ವ-ಸಂದೇಶಗಳು ಎಲ್ಲರಿಗೂ ತಿಳಿಸುವ ಉದ್ದೇಶದಿಂದ ಅವರ ಜಯಂತಿ ಕಾರ್ಯಕ್ರಮ, ಸ್ಮರಣೀಯ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದೆ. ನಾಡಿನಲ್ಲಿ ಉತ್ತಮ ಆಡಳಿತ ನೀಡಿದ ಮಹನೀಯರಲ್ಲಿ ಒಬ್ಬರಾದ ನಾಡಪ್ರಭು ಕೆಂಪೇಗೌಡ ಅವರ ಆಡಳಿತ ಎಂದಿಗೂ ಮಾದರಿಯಾಗಿದೆ ಎಂದು ತಹಸೀಲ್ದಾರ್‌ ವೈ.ಎಸ್.ಸೋಮನಕಟ್ಟಿ ಹೇಳಿದರು.

ಪಟ್ಟಣದ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ತಾಲೂಕಾಡಳಿತ, ತಾಪಂ ಹಾಗೂ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಸಹಯೋಗದಲ್ಲಿ ಗುರುವಾರ ಹಮ್ಮಿಕೊಂಡಿದ್ದ ನಾಡಪ್ರಭು ಕೆಂಪೇಗೌಡ ಅವರ ೫೧೫ನೇ ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ೫೧೫ ವರ್ಷಗಳ ನಂತರವೂ ಕೆಂಪೇಗೌಡ ಅವರ ಸ್ಮರಣೆ ಮಾಡುವುದಕ್ಕೆ ಅವರು ಮಾಡಿರುವ ಸ್ಮರಣೀಯ ಕಾರ್ಯಗಳೇ ಕಾರಣ. ಸಮಾಜಕ್ಕಾಗಿ ಕೆಲಸ ಮಾಡಿದವರನ್ನು ಮಾತ್ರ ಸಮಾಜ ಸದಾ ನೆನಪಿನಲ್ಲಿ ಇಟ್ಟುಕೊಳ್ಳುತ್ತದೆ. ಕೆಂಪೇಗೌಡ ಅವರು ಬೆಂಗಳೂರಿನಲ್ಲಿ ಒಂದು ಸಾವಿರ ಕೆರೆಗಳನ್ನು ನಿರ್ಮಾಣ ಮಾಡಿದ್ದರೂ ಕೆರೆಗಳು ಬಹಳಷ್ಟು ಅತಿಕ್ರಮಣವಾಗಿ ಕಾರಣದಿಂದಾಗಿ ಇಂದು ಕೇವಲ ೩೭ ಕೆರೆಗಳು ಮಾತ್ರ ಉಳಿದುಕೊಂಡಿವೆ. ನಾಡಪ್ರಭು ಕೆಂಪೇಗೌಡ ಅವರು ಬೆಂಗಳೂರು ನಗರದ ನಿರ್ಮಾತೃವಾಗಿದ್ದಾರೆ. ಇವರ ಆಡಳಿತ ಆದರ್ಶಪ್ರಾಯವಾಗಿದೆ. ವಿದ್ಯಾರ್ಥಿಗಳು ನಾಡಪ್ರಭುವಿನ ಜನಪರ ಆಡಳಿತವನ್ನು ಅರಿತುಕೊಳ್ಳಬೇಕೆಂದರು.

ಎಲ್ಲ ಶಾಲೆಗಳಲ್ಲಿ ಕೆಂಪೇಗೌಡರ ಕುರಿತು ಭಾಷಣ ಸ್ಪರ್ಧೆ ಹಮ್ಮಿಕೊಳ್ಳಲಾಗಿತ್ತು. ಈ ಸ್ಪರ್ಧೆಗಳಲ್ಲಿ ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಲಾಗುತ್ತಿದೆ ಎಂದರು.

ತಾಲೂಕು ಪಂಚಾಯಿತಿ ಪ್ರಭಾರಿ ಕಾರ್ಯನಿರ್ವಾಹಕ ಅಧಿಕಾರಿ ಪ್ರಕಾಶ ದೇಸಾಯಿ ಮಾತನಾಡಿ, ಕೆಂಪೇಗೌಡ ಅವರು ಒಳ್ಳೆಯ ಸೈನಿಕನಾಗುವ ಜೊತೆಗೆ ಒಳ್ಳೆಯ ಆಡಳಿತ ನೀಡುವ ಜೊತೆಗೆ ಬೆಂಗಳೂರಿನಲ್ಲಿ ವಿವಿಧೆಡೆ ಕೆರೆಗಳನ್ನು ನಿರ್ಮಾಣ ಮಾಡುವ ಮೂಲಕ ಜನರಿಗೆ ನೀರಿನ ಸಂಪನ್ಮೂಲ ಹೆಚ್ಚಳ ಮಾಡಿದ್ದರು. ಇಂದಿಗೂ ಬೆಂಗಳೂರಿನಲ್ಲಿ ಅವರು ನಿರ್ಮಿಸಿದ ಅನೇಕ ಕೆರೆಗಳನ್ನು ಕಾಣಬಹುದಾಗಿದೆ ಎಂದರು.

ಡಿವೈಎಸ್ಪಿ ಬಲ್ಲಪ್ಪ ನಂದಗಾಂವಿ ಅವರು ನಾಡಪ್ರಭು ಕೆಂಪೇಗೌಡ ಕುರಿತು ಮಾತನಾಡಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅಧ್ಯಾಪಕಿ ವಿಜಯಲಕ್ಷ್ಮೀ ಅವರು ಉಪನ್ಯಾಸ ನೀಡಿದರು. ಕಾರ್ಯಕ್ರಮದಲ್ಲಿ ನಾಡಪ್ರಭು ಕೆಂಪೇಗೌಡ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಲಾಯಿತು. ಇದೇ ಸಂದರ್ಭದಲ್ಲಿ ತಾಲೂಕಿನಲ್ಲಿರುವ ಎಲ್ಲ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಕೆಂಪೇಗೌಡ ಅವರು ಕುರಿತು ಹಮ್ಮಿಕೊಂಡಿದ್ದ ಭಾಷಣ ಸ್ಪರ್ಧೆಯಲ್ಲಿ ಶಾಲಾ ಹಂತದಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದ ವಿದ್ಯಾರ್ಥಿಗಳಿಗೆ ಪುಸ್ತಕ, ಪ್ರಶಸ್ತಿ ನೀಡಲಾಯಿತು. ಕ್ಷೇತ್ರಸಮನ್ವಾಧಿಕಾರಿ ಪಿ.ಯು.ರಾಠೋಡ ಸ್ವಾಗತಿಸಿದರು. ಎಂ.ವ್ಹಿ.ಗಬ್ಬೂರ ನಿರೂಪಿಸಿದರು. ಶಿವಾನಂದ ಮಂಗಾನವರ ವಂದಿಸಿದರು.