ಕನ್ನಡಪ್ರಭ ವಾರ್ತೆ ಶಿರಾ ಶಿರಾ ತಾಲೂಕಿನ ಗೌಡಗೆರೆ ಹೋಬಳಿಯ ತಾವರೆಕೆರೆ (ಹಂದಿ ಜೋಗಿ ಕಾಲೋನಿ) ಗ್ರಾಮದ ಕಿನ್ನರಿ ಕಲಾವಿದ ಸಿದ್ದಪ್ಪ ಅವರು ಕರ್ನಾಟಕ ಜಾನಪದ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.ಶಿರಾ ತಾಲೂಕು, ಗೌಡಗೆರೆ ಹೋಬಳಿ, ಜೋಗೀರಹಟ್ಟಿ ಗ್ರಾಮದಲ್ಲಿ ವಾಸವಾಗಿರುವ ಶೆಟ್ಟಿಯಪ್ಪ ಮಗನಾದ ಸಿದ್ದಪ್ಪ (65) ಅವರು ಸುಮಾರು 40 ವರ್ಷಗಳಿಂದ ಜೋಗಿಪದಗಳಾದ ಅರ್ಜುನ್ ಜೋಗಿ ಹಾಡು, ಪಾಂಡವರ 12 ವರ್ಷಗಳ ವನವಾಸದ ಹಾಡು, ಮತ್ತು ಅರಗಿನ ಪರ್ವ ಜನಪದ ಸಂಸ್ಕೃತಿಯ ಗೀತೆಗಳನ್ನು ಹಾಡಿಕೊಂಡು ಬಂದಿದ್ದಾರೆ. ಹಂದಿಜೋಗಿ ವಂಶಸ್ಥರಾದ ಸಿದ್ದಪ್ಪ ಅವರು ತಾಲೂಕಿನ ವ್ಯಾಪ್ತಿಯಲ್ಲಿ ಬರುವಂತಹ ಎಲ್ಲಾ ಗ್ರಾಮಗಳಲ್ಲಿ ಮತ್ತು ಬೇರೆ ಬೇರೆ ಪ್ರಾಂತ್ಯಗಳಲ್ಲಿಯೂ ಸಹ ಜನಪದ ಕಲೆಯನ್ನು ವಿಸ್ತರಿಸುತ್ತಿದ್ದು ಇವರು ಹೋದ ಕಡೆಗಳಲ್ಲಿ ನೆಲೆಯಿಲ್ಲದೆ ಗುಡಿಸಲು ಮತ್ತು ಮರದಡಿಗಳಲ್ಲಿ ವಾಸವಿದ್ದುಕೊಂಡು ಈ ಗೀತೆಗಳನ್ನು ಹಳ್ಳಿಯಿಂದ ಹಳ್ಳಿಗೆ ಹಾಡಿಕೊಂಡು ಜನಪದ ಸಂಸ್ಕೃತಿ ಬೆಳಸಿಕೊಂಡು ಬಂದಿದ್ದಾರೆ. ಹುಳಿಯಾರು, ಗುಬ್ಬಿ, ನಿಟ್ಟೂರು, ಬಾಣಸಂದ್ರ ಚಿಕ್ಕನಾಯಕನಹಳ್ಳಿ ಬೆಳ್ಳಾರ ಕೆ.ಬಿ.ಕ್ರಾಸ್ ಬುಕ್ಕಾಪಟ್ಟಣ ,ಹಾಗಲವಾಡಿ ,ಕುರುಬರಹಳ್ಳಿ ಇನ್ನು ಬೇರೆ ಊರುಗಳಿಗೆ ಇವರು ಜಾನಪದ ಗೀತೆಗಳನ್ನು ಹಾಡಿದ್ದಾರೆ.
ಶಾಸಕ ಟಿ.ಬಿ. ಜಯಚಂದ್ರ, ಕರ್ನಾಟಕ ಜಾನಪದ ಅಕಾಡೆಮಿ ಸದಸ್ಯ ಕೆಂಕೆರೆ ಮಲ್ಲಿಕಾರ್ಜುನ್ ಅವರಿಗೆ ಕಲಾಭಿಮಾನಿಗಳು ಧನ್ಯವಾದ ಅರ್ಪಿಸಿದ್ದಾರೆ.