- ಇತಿಹಾಸ ಪುಟದಲ್ಲಿ ಅಚ್ಚಳಿಯದೇ ಉಳಿಯುವಂಥ ತೀರ್ಪು - - -
ದಾವಣಗೆರೆ: ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ ದಲಿತರು, ಸವರ್ಣೀಯರ ಮಧ್ಯೆ ಜಾತಿ ಸಂಘರ್ಷ ಪ್ರಕರಣದಲ್ಲಿ ಒಟ್ಟು 101 ಅಪರಾಧಿಗಳ ಪೈಕಿ 98 ಜನರಿಗೆ ಜೀವಾವಧಿ ಶಿಕ್ಷೆ ಹಾಗೂ ತಲಾ ₹5 ಸಾವಿರ ದಂಡ ವಿಧಿಸಲಾಗಿದೆ. ಕೊಪ್ಪಳದ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ನ್ಯಾಯಾಧೀಶ ಚಂದ್ರಶೇಖರ್ ನೀಡಿರುವ ಈ ಐತಿಹಾಸಿಕ ತೀರ್ಪನ್ನು ದಲಿತ ಸಂಘರ್ಷ ಸಮಿತಿ ಸ್ವಾಗತಿಸುತ್ತದೆ ಎಂದು ಜಿಲ್ಲಾ ಸಂಚಾಲಕ ಕುಂದುವಾಡ ಮಂಜುನಾಥ ತಿಳಿಸಿದ್ದಾರೆ.ಗಂಗಾವತಿಯ ಶಿವ ಚಿತ್ರ ಮಂದಿರದಲ್ಲಿ 2014ರ ಆ.28ರಂದು ಸಿನಿಮಾ ನೋಡಲು ಟಿಕೆಟ್ ಪಡೆಯುವ ವಿಚಾರಕ್ಕೆ ದಲಿತರು ಮತ್ತು ಸವರ್ಣೀಯರ ಮಧ್ಯೆ ಜಗಳವಾಗಿತ್ತು. ಗ್ರಾಮಕ್ಕೆ ಸವರ್ಣೀಯರನ್ನು ಕರೆತಂದು, ಅದೇ ಗ್ರಾಮದ ಮಾದಿಗ ಸಮುದಾಯದ ಮೇಲೆ ಜಾತಿ ನಿಂದನೆ ಮಾಡಿ, ಹಲ್ಲೆ ಮಾಡಲಾಗಿತ್ತು. ಗುಡಿಸಲುಗಳಿಗೆ ಬೆಂಕಿ ಹಚ್ಚಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ಕೊಪ್ಪಳ ಸೆಷನ್ಸ್ ನ್ಯಾಯಾಧೀಶ ಚಂದ್ರಶೇಖರ್ ನೀಡಿರುವ ತೀರ್ಪು ಇಡೀ ದೇಶವೇ ಕೊಪ್ಪಳದತ್ತ ತಿರುಗಿ ನೋಡುವಂತಿದೆ ಎಂದಿದ್ದಾರೆ.
98 ಜನರಿಗೆ ಜೀವಾವಧಿ ಶಿಕ್ಷೆ ನೀಡಿದ್ದು ಇಡೀ ದೇಶದಲ್ಲಿ ಇದೇ ಮೊದಲ ಪ್ರಕರಣವಾಗಿದೆ. ಇತಿಹಾಸದ ಪುಟದಲ್ಲಿ ಅಳಿಸಲಾಗದೇ ಉಳಿದುಕೊಳ್ಳುವ ತೀರ್ಪು ಇದಾಗಿದೆ. ಗಂಗಾವತಿ ತಾಲೂಕಿನ ಮರಕುಂಬಿ ಪ್ರಕರಣಕ್ಕಿಂತಲೂ ಕ್ರೂರ ಘಟನೆಗಳು ಈ ನಾಡಿನಲ್ಲಿ ಹಿಂದೆ ನಡೆದಿವೆ. ಆದರೂ, ಶೇ.99 ಪ್ರಕರಣಗಳಲ್ಲಿ ಅಪರಾಧಿಗಳು ಶಿಕ್ಷೆಯಿಂದ ಪಾರಾಗಿರುವ ನಿದರ್ಶನಗಳನ್ನು ನೋಡಿದ್ದೇವೆ. ಘನ ಘೋರವಾದ ಕಂಬಾಲಪಲ್ಲಿ ಘಟನೆಯಲ್ಲಿ ಸಂತ್ರಸ್ತರಿಗೆ, ಪ್ರಾಣ ಕಳೆದುಕೊಂಡವರಿಗೆ ನ್ಯಾಯ ಸಿಗಲಿಲ್ಲ. ಅಲ್ಲಿನ ದಲಿತರ ಸಜೀವ ದಹನ ಪ್ರಕರಣದಲ್ಲಿ ಅಪರಾಧಿಗಳಿಗೆ ಶಿಕ್ಷೆ ಆಗಲೇ ಇಲ್ಲ. ದಲಿತರ ಮೇಲೆ ಎಂತಹದ್ದೇ ದೌರ್ಜನ್ಯ ನಡೆದರೂ ನ್ಯಾಯಾಲಯದಿಂದ ತಪ್ಪಿಸಿಕೊಳ್ಳಬಹುದು ಎನ್ನುವಂತಹ ಅಭಿಪ್ರಾಯ ಮೂಡಿರುವ ಈ ಪ್ರಸಕ್ತ ಸನ್ನಿವೇಶದಲ್ಲಿ ಕೊಪ್ಪಳ ಜಿಲ್ಲಾ ನ್ಯಾಯಾಲಯ ತೀರ್ಪು ಬಹಳ ಮಹತ್ವ ಪಡೆದುಕೊಂಡಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.- - - -28ಕೆಡಿವಿಜಿ9: ಕುಂದುವಾಡ ಮಂಜುನಾಥ