ಹೊಸಪೇಟೆ: ಮಕ್ಕಳನ್ನು ಸಮಾಜದಲ್ಲಿ ಆರ್ಥಿಕ, ಸಾಮಾಜಿಕ, ಸಾಂಸ್ಕೃತಿಕವಾಗಿ ಸದೃಢಗೊಳಿಸಿ ಉತ್ತಮ ವ್ಯಕ್ತಿಗಳನ್ನಾಗಿ ರೂಪಿಸುವಲ್ಲಿ ಮಕ್ಕಳ ಹಕ್ಕುಗಳನ್ನು ಸಂರಕ್ಷಿಸಿ ಗೌರವಿಸಬೇಕಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ದಿವಾಕರ್ ಹೇಳಿದರು.ಜಿಲ್ಲಾ ಕೇಂದ್ರ ಹೊಸಪೇಟೆಯ ಜಿಲ್ಲಾ ಒಳ ಕ್ರೀಡಾಂಗಣದ ಸಭಾಭವನದಲ್ಲಿ ಸುವರ್ಣ ಕರ್ನಾಟಕ ಸಂಭ್ರಮದ ಪ್ರಯುಕ್ತ ಬೆಂಗಳೂರಿನ ಕರ್ನಾಟಕ ಮಕ್ಕಳ ಅಕಾಡೆಮಿ ಹಾಗೂ ಹಗರಿಬೊಮ್ಮನಹಳ್ಳಿಯ ಮಕ್ಕಳ ಅಧ್ಯಯನ ಕೇಂದ್ರದ ಸಹಯೋಗದಲ್ಲಿ ಗುರುವಾರ ನಡೆದ ರಾಜ್ಯಮಟ್ಟದ ಶೌರ್ಯ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ ಶೈಕ್ಷಣಿಕ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು. ಪ್ರತಿಯೊಂದು ಮಗುವಿನಲ್ಲೂ ಸುಪ್ತ ಪ್ರತಿಭೆ ಅಡಗಿದ್ದು, ಅದನ್ನು ಗುರುತಿಸಿ ಬೆಳೆಸುವ ಮಹತ್ತರ ಜವಾಬ್ದಾರಿ ಶಿಕ್ಷಕರದ್ದಾಗಿದೆ. ಈ ನಿಟ್ಟಿನಲ್ಲಿ ಮಕ್ಕಳ ಬೆಳವಣಿಗೆಗೆ ಸಹಾಯಕವಾಗುವ ಇಂತಹ ಶೈಕ್ಷಣಿಕ ಚಟುವಟಿಕೆ ಕಾರ್ಯಾಗಾರಗಳ ಮೂಲಕ ಮಕ್ಕಳ ಸರ್ವತೋಮುಖ ಪ್ರಗತಿಗೆ ಶಿಕ್ಷಕರು ಶ್ರಮಿಸಲು ಸಾಧ್ಯವಾಗುತ್ತದೆ ಎಂದರು.ಚಿಲಿಪಿಲಿ ಬಳಗದ ಅಧ್ಯಕ್ಷ ಹಾಗೂ ಸಾಹಿತಿ ಹುರುಕಡ್ಲಿ ಶಿವಕುಮಾರ ಮಾತನಾಡಿ, ಮಕ್ಕಳಿಗೆ ಪಠ್ಯದ ಜತೆಗೆ ಸಹಪಠ್ಯ ಚಟುವಟಿಕೆಯಲ್ಲಿ ತೊಡಗಿಸಿ ಶಿಸ್ತನ್ನು ಕಲಿಸಿದಾಗ ಮಗುವಿನಲ್ಲಿ ಉತ್ತಮ ವ್ಯಕ್ತಿತ್ವ ನಿರ್ಮಾಣವಾಗಿ ಸಮಾಜದಲ್ಲಿ ಪ್ರಭುತ್ವ ವ್ಯಕ್ತಿಯಾಗಿ ಬದುಕುತ್ತಾರೆ. ವಿವಿಧ ರಂಗಗಳಲ್ಲಿ ಸಾಧನೆಗೈದ ಹಲವು ಪ್ರತಿಭೆಗಳನ್ನು ಗುರುತಿಸಿ ಗೌರವಿಸುವ ಮೂಲಕ ಪ್ರೇರೇಪಿಸುವ ಕೆಲಸವನ್ನು ಕರ್ನಾಟಕ ಮಕ್ಕಳ ಅಕಾಡೆಮಿ ಹಾಗೂ ಮಕ್ಕಳ ಅಧ್ಯಯನ ಕೇಂದ್ರ ಉತ್ತಮ ಕೆಲಸ ಮಾಡುತ್ತಿದೆ ಎಂದರು.ನಿವೃತ್ತ ಚಿತ್ರಕಲಾ ಉಪನ್ಯಾಸಕ ಆರ್.ಎಲ್. ಜಾಧವ್ ಅವರಿಗೆ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಹಾಗೂ ವಲ್ಲಭಾಪುರ ಶಾಲೆಯ ಬಹುಮುಖ ಪ್ರತಿಭೆ, ಕುಸ್ತಿಪಟು ಕೆ.ಸಿ. ಸುಧಾಬಾಯಿ ಅವರಿಗೆ ಶೌರ್ಯ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಮಕ್ಕಳ ಹಕ್ಕುಗಳು ಹಾಗೂ ಮಕ್ಕಳಲ್ಲಿ ಸೃಜನಶೀಲತೆಯನ್ನು ಹೆಚ್ಚಿಸುವಲ್ಲಿ ಶಿಕ್ಷಕರ ಪಾತ್ರದ ಕುರಿತು ಸಂಪನ್ಮೂಲ ವ್ಯಕ್ತಿಗಳಾಗಿ ಎಲ್. ತಿಪ್ಪ ನಾಯ್ಕ ಹಾಗೂ ಬಿ.ಬಿ. ಶಿವಾನಂದ ಭಾಗವಹಿಸಿ ಶಿಕ್ಷಕರಿಗೆ ತರಬೇತಿ ನೀಡಿದರು.
ಕರ್ನಾಟಕ ಮಕ್ಕಳ ಅಕಾಡೆಮಿಯ ರಾಜ್ಯಾಧ್ಯಕ್ಷ ಎಲ್. ರೆಡ್ಡಿ ನಾಯ್ಕ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜದ ಪ್ರತಿಯೊಬ್ಬ ಮಗುವು ಉತ್ತಮ ಶಿಕ್ಷಣ ಪಡೆದು ಸ್ವಾಸ್ಥ್ಯ ಬದುಕಿನ ನಿರ್ಮಾಣಕ್ಕಾಗಿ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಮಕ್ಕಳ ಅಧ್ಯಯನ ಕೇಂದ್ರದ ಮೂಲಕ ಬಡ ಮಕ್ಕಳಿಗೆ ಸಂಘದ ವತಿಯಿಂದ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಚಿತ ತರಬೇತಿ ನೀಡುತ್ತಿದ್ದೇವೆ. ಬಾಲ್ಯ ವಿವಾಹ, ಬಾಲಕಾರ್ಮಿಕದಂತಹ ಸಮಸ್ಯೆಗಳ ಬಗ್ಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ. ಸರ್ಕಾರ ಐದು ಎಕರೆ ಜಮೀನು ನೀಡಿದರೆ ಕೇಂದ್ರವನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲಾಗುವುದು ಎಂದರು.ಶಿಕ್ಷಣ ಇಲಾಖೆಯ ಜಿಲ್ಲಾ ಉಪ ನಿರ್ದೇಶಕ ಯುವರಾಜ ನಾಯ್ಕ, ಬಿಇಒ ಎಂ ಚನ್ನಬಸಪ್ಪ, ಪಿಡಿಒ ಗಂಗಾಧರ, ಸಮನ್ವಯಾಧಿಕಾರಿಗಳಾದ ಶಿವಕುಮಾರ ಹಾಗೂ ಎಂ.ಎಸ್. ಪ್ರಭಾಕರ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಕೃಷ್ಣ ನಾಯ್ಕ, ಎಚ್. ಲೋಕಪ್ಪ, ಕೆ. ಬಸವರಾಜ, ಹನುಮಂತಪ್ಪ, ಹೀರ್ಯಾ ನಾಯ್ಕ, ಮಕ್ಕಳ ಅಕಾಡೆಮಿಯ ರಮೇಶ, ತಿಪ್ಪೇಸ್ವಾಮಿ, ಪ್ರಕಾಶ್, ಭೀಮಾ ನಾಯ್ಕ, ವೀರಣ್ಣ, ರವಿಕುಮಾರ ಸಕ್ರಹಳ್ಳಿ ಮತ್ತಿತರರಿದ್ದರು. ಸಂಗೀತ ಶಿಕ್ಷಕಿ ಶಾರದಾ ಸಕ್ರಹಳ್ಳಿ, ಮಕ್ಕಳ ಅಕಾಡೆಮಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ. ಕೊಟ್ರೇಶ್ ನಿರ್ವಹಿಸಿದರು.