ಹೊನ್ನಾವರ ಎಸ್ಡಿಎಂ ಪದವಿ ಕಾಲೇಜಿನಲ್ಲಿ ವೈದ್ಯರ ದಿನಾಚರಣೆ
ವಿದ್ಯಾರ್ಥಿಗಳು ಸಮಾಜಮುಖಿಗಳಾಗಬೇಕು ಎಂದು ಮೂತ್ರಾಂಗ ತಜ್ಞ ವೈದ್ಯ ಡಾ. ಗಜಾನನ ಭಟ್ ಹೇಳಿದರು.
ಇಲ್ಲಿಯ ಮಲ್ನಾಡ್ ಪ್ರೊಗ್ರೆಸ್ಸಿವ್ ಎಜ್ಯುಕೇಶನ್ ಸೊಸೈಟಿಯ ಎಸ್.ಡಿ.ಎಂ. ಪದವಿ ಕಾಲೇಜಿನ ಆರ್.ಎಸ್. ಹೆಗಡೆ ಸಭಾಭವನದಲ್ಲಿ ನಡೆದ ವೈದ್ಯರ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು. ಜಗತ್ತಿನಲ್ಲಿ ಭಾರತೀಯರನ್ನು ನೋಡುವ ರೀತಿ ಬದಲಾಗಿದೆ. ಜನಜಾಸ್ತಿ ಇದ್ದಲ್ಲಿ ರೋಗ ಹೆಚ್ಚು. ಭಾರತದಲ್ಲಿ ಜನಸಂಖ್ಯೆ ಜಾಸ್ತಿ ಇದೆ. ಹೀಗಾಗಿ ಇಲ್ಲಿ ರೋಗವು ಹೆಚ್ಚಿದೆ. ಆದರೆ ನಮ್ಮಲ್ಲಿ ಬಂದಿರುವ ರೋಗದ ಚಿಕಿತ್ಸೆಯ ಕುರಿತು ಮಾನದಂಡವನ್ನು ಹಾಕುವುದು ಪಾಶ್ಚಿಮಾತ್ಯರಾಗಿದ್ದಾರೆ ಎಂದು ಹೇಳಿದರು.ಕಲಿತ ಜಾಗ, ಶಿಕ್ಷಕರನ್ನು ಮರೆಯಬೇಡಿ. ಯಾವುದೂ ಅಸಾಧ್ಯವಲ್ಲ. ನಮ್ಮ ಚಿಂತನೆಗಳು ಬದಲಾದರೆ ಜನರು ನೋಡುವ ರೀತಿ ಬದಲಾಗುತ್ತದೆ. ಯಾರೂ ನಡೆಯದ ಹಾದಿಯಲ್ಲಿ ನಡೆಯಲು ಪ್ರಯತ್ನಿಸಿ. ನೈಪುಣ್ಯ ಬೆಳೆಸಿಕೊಳ್ಳಿ. ಜೀವನದಲ್ಲಿ ತೊಂದರೆಗಳು ಬರುತ್ತದೆ, ಅದು ಸಾಮಾನ್ಯ. ಹೀಗಿದ್ದೂ ಗುರಿಯ ಕಡೆ ಗಮನ ಕೊಡಿ. ಕಾಲ ಯಾರಿಗೂ ಕಾಯುವುದಿಲ್ಲ. ಜೀವನ ಬಹಳ ದೊಡ್ಡದಿದೆ. ಚಿಂತನೆ ಚಿತ್ತ, ಲಕ್ಷ್ಯ ಒಂದೇ ಕಡೆ ಇರಲಿ ಎಂದು ಕಿವಿಮಾತು ಹೇಳಿದರು.
ಎಂ.ಪಿ.ಇ. ಸೊಸೈಟಿ ಪಿಆರ್ಒ ಡಾ. ಡಿ.ಎಲ್. ಹೆಬ್ಬಾರ್ ಅಭಿನಂದನಾ ನುಡಿಗಳನ್ನಾಡಿದರು. ಎಂ.ಪಿ.ಇ. ಸೊಸೈಟಿಯ ವತಿಯಿಂದ ಡಾ. ಗಜಾನನ ಭಟ್ ಅವರನ್ನು ಗೌರವಿಸಲಾಯಿತು. ಪದವಿ ಕಾಲೇಜು, ಕಾಲೇಜು ಪೂರ್ವ ವಿದ್ಯಾರ್ಥಿ ಸಂಘದ ಅಧ್ಯಕ್ಷ ವಿಜಯ್ ಕಾಮತ್ ಉಪಸ್ಥಿತರಿದ್ದರು.