ಪತ್ರಿಕೆಗಳು ಸಮಾಜದ ಕೈಗನ್ನಡಿಯಾಗಿದ್ದು ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಎಂದು ಐಶ್ವರ್ಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಅಮ್ಮಾಟಂಡ ಎ ಜೋಯಪ್ಪ ಅಭಿಪ್ರಾಯಪಟ್ಟರು.
ಕನ್ನಡಪ್ರಭವಾರ್ತೆ ಸುಂಟಿಕೊಪ್ಪ
ಪತ್ರಿಕೆಗಳು ಸಮಾಜದ ಕೈಗನ್ನಡಿಯಾಗಿದ್ದು ಪತ್ರಕರ್ತರ ಮೇಲೆ ಸಾಮಾಜಿಕ ಜವಾಬ್ದಾರಿ ಹೆಚ್ಚಿದೆ ಎಂದು ಐಶ್ವರ್ಯ ವಿದ್ಯಾ ಸಂಸ್ಥೆಯ ಪ್ರಾಂಶುಪಾಲ ಅಮ್ಮಾಟಂಡ ಎ ಜೋಯಪ್ಪ ಅಭಿಪ್ರಾಯಪಟ್ಟರು.ಕುಶಾಲನಗರ ತಾಲೂಕು ಪತ್ರಕರ್ತರ ಸಂಘದ ವತಿಯಿಂದ ಗುಡ್ಡೆಹೊಸೂರಿನ ಐಶ್ವರ್ಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮತ್ತು ಪತ್ರಿಕಾ ದಿನಾಚರಣೆ ಮತ್ತು ಜ್ಞಾನ ಗಂಗಾ ದತ್ತಿನಿಧಿ ಪ್ರಶಸ್ತಿ ಪ್ರದಾನ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
ಪ್ರಸ್ತುತ ಕಾಲಘಟ್ಟದಲ್ಲಿ ವಿವಿಧ ಮಾಧ್ಯಮಗಳು ನೀಡುವ ಸುದ್ದಿಗಳೆಲ್ಲಾ ವಾಸ್ತವ ಎಂದು ನಂಬುವ ಪರಿಸ್ಥಿತಿಯಿದೆ. ಆದರೆ ಮುದ್ರಣ ಮಾಧ್ಯಮ ಈ ಪೈಕಿ ಹೆಚ್ಚು ವಿಶ್ವಾಸರ್ಹತೆ ಉಳಿಸಿಕೊಂಡಿದೆ ಎಂದರು.ದಿನದ ಮಹತ್ವದ ಕುರಿತು ಉಪನ್ಯಾಸ ನೀಡಿದ ಹಿರಿಯ ಪತ್ರಕರ್ತ ಎಸ್. ಜಿ.ಉಮೇಶ್ ಮಾತನಾಡಿ, ಪತ್ರಿಕೆ ಕೇವಲ ರಾಜಕೀಯ ಅಥವಾ ವ್ಯಕ್ತಿಗತ ವಿಷಯಾಧಾರಿತವಾಗಿರದೆ ಜೀವನದ ಎಲ್ಲ ಆಯಾಮಗಳನ್ನು ಸ್ಪರ್ಶಿಸುವ ಪ್ರಭಾವಿಸುವ ಶಕ್ತಿ ಹೊಂದಿದೆ ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕೊಡಗು ಪತ್ರಕರ್ತರ ಸಂಘದ ಅಧ್ಯಕ್ಷ ಎಚ್.ಟಿ. ಅನಿಲ್, ಪತ್ರಿಕೋದ್ಯಮದವರ ಬೆಳವಣಿಗೆ ಬಗ್ಗೆ ಮಾಹಿತಿ ನೀಡಿ ಸುದ್ದಿ ಇಲ್ಲದ ಪ್ರಪಂಚ ಶೂನ್ಯ ಎಂದು ಹೇಳಿ ಎಷ್ಟೇ ಡಿಜಿಟಲೀಕರಣ ಆದರೂ ಕೂಡ ಮುದ್ರಣ ಮಾಧ್ಯಮಕ್ಕೆ ಅಳಿವಿಲ್ಲ ಎಂದು ಪ್ರತಿಪಾದಿಸಿದರು.ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಪಿ.ಆರ್ ಸುನಿಲ್ಕುಮಾರ್ ಮತ್ತು ಸುಂಟಿಕೊಪ್ಪ ಹೋಬಳಿ ಕಸಾಪ ಅಧ್ಯಕ್ಷ ಪಿ.ಎಫ್. ಸಬಾಸ್ಟಿನ್ ಮಾತನಾಡಿದರು.
ಜ್ಞಾನಗಂಗಾ ದತ್ತಿನಿಧಿ ಪ್ರಶಸ್ತಿಯನ್ನು ಕನ್ನಡಪ್ರಭ ಸುಂಟಿಕೊಪ್ಪ ವರದಿಗಾರ ಎಂ.ಬಿ. ವಿನ್ಸೆಂಟ್ ಅವರಿಗೆ ಪ್ರದಾನ ಮಾಡಲಾಯಿತು.ಕೊಡಗು ಪತ್ರಕರ್ತರ ಸಂಘದ ಖಜಾಂಚಿ ಸಂತೋಷ್ ಟಿ.ಕೆ. ಇದ್ದರು.
ತಾಲೂಕು ಘಟಕದ ಅಧ್ಯಕ್ಷ ಬಿ.ಸಿ. ದಿನೇಶ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿ ಪತ್ರಕರ್ತ ಲೋಕೇಶ್ ಸಾಗರ್ ಭಾವಗೀತೆ ಹಾಡಿದರು. ತಾಲೂಕು ಸಂಘದ ಉಪಾಧ್ಯಕ್ಷ ನವೀನ್ ಚಿಣ್ಣಪ್ಪ, ಖಜಾಂಚಿ ಕೆ.ಎಸ್ ಅನಿಲ್ ಕುಮಾರ್, ಗೌರವ ಸಲಹೆಗಾರ ಕೆ.ತಿಮ್ಮಪ್ಪ, ಜಿಲ್ಲಾ ನಿರ್ದೇಶಕ ಗುಡ್ಡೆಮನೆ ವಿಶ್ವಕುಮಾರ್ ಸಹ ಕಾರ್ಯದರ್ಶಿ ಬಿ.ಎನ್.ರವಿಕುಮಾರ್,ಎಂ.ಎಸ್.ಸುನಿಲ್ ಹಾಗೂ ಅಲ್ಪೆರ್ಡ್ ಡಿಸೋಜ ಮತ್ತಿತರರಿದ್ದರು.