ಹೊಸಕೋಟೆ: ಸುಮಾರು ಎರಡು ಸಾವಿರ ವರ್ಷಗಳ ಇತಿಹಾಸ ಹೊಂದಿರುವ ಕನ್ನಡ ಭಾಷೆಯ ಬಳಕೆ ಸಮರ್ಪಕ ಅನುಷ್ಠಾನವಾಗಬೇಕಾದರೆ ಮೊದಲು ಸರ್ಕಾರಿ ಕಚೇರಿಗಳ ವ್ಯವಹಾರಗಳು ಸಂಪೂರ್ಣ ಕನ್ನಡ ಭಾಷೆಯಲ್ಲಿ ಆಗಬೇಕು ಎಂದು ವನಮಾಲಿ ಕೃತಿ ರಚನೆಕಾರ ಹಾಗೂ ಸಾಹಿತಿ ಬಾಗೇಪಲ್ಲಿ ಕೃಷ್ಣಮೂರ್ತಿ ತಿಳಿಸಿದರು.
ಕನ್ನಡ ಭಾಷೆಗೆ ಸುಮಾರು 2 ಸಾವಿರ ವರ್ಷಗಳ ಇತಿಹಾಸ ಇದ್ದರೂ ಸಹ ಕನ್ನಡದ ಬಗ್ಗೆ ಇನ್ನು ಸಾಕಷ್ಟು ಅಧ್ಯಯನಗಳಾಗಬೇಕಿದೆ. ಇಲ್ಲಿ ಕೆಲಸ ಮಾಡುವ ಅಧಿಕಾರಿಗಳು ಕನ್ನಡದಲ್ಲೆ ವ್ಯವಹರಿಸಬೇಕು. ಈ ವಿಚಾರವಾಗಿ ಜಾಗೃತಿ ಮೂಡಿಸುವ ಅನಿವಾರ್ಯ ಇದ್ದು ಕನ್ನಡ ಜಾಗೃತ ಸಮಿತಿಯ ಸದಸ್ಯರಾದ ರವಿಸಿರಿ ಅವರು ಸಾಕಷ್ಟು ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಿದೆ. ಅವರು ಮೊದಲು ಹೊಸಕೋಟೆ ತಾಲೂಕಿನ 244 ಗ್ರಾಮಗಳಿಗೂ ತೆರಳಿ ಎಲ್ಲಿಯೂ ಅಹಿತಕರ ವಾತಾವರಣ ಸೃಷ್ಟಿಯಾಗದಂತೆ ಸಾಮರಸ್ಯದಿಂದ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು
ಜಾತ್ಯತೀತ ಪದವೀಧರ ಒಕ್ಕೂಟದ ರಾಜ್ಯಾಧ್ಯಕ್ಷ ಟಿ.ನಾರಾಯಣಸ್ವಾಮಿ ಮಾತನಾಡಿ, ತಾಲೂಕಿನ ಸಾಕಷ್ಟು ಸಿಬಿಎಸ್ಸಿ ಮತ್ತು ಐಸಿಎಸ್ ಶಾಲೆಗಳಲ್ಲಿ ಕನ್ನಡಕ್ಕೆ ಕೊನೆಯ ಸ್ಥಾನ ನೀಡಲಾಗುತ್ತಿದೆ. ಆದ್ದರಿಂದ ಕನ್ನಡ ಎಂದರೆ ಎಂದಿಗೂ ಕೊನೆಯ ಸ್ಥಾನವಲ್ಲ ಎಂಬುದನ್ನು ಸಾಬೀತುಪಡಿಸುವ ಮತ್ತು ಅಂಗಡಿ ಮುಂಗಟ್ಟು, ಕಂಪನಿಗಳು ಕಡ್ಡಾಯವಾಗಿ ಕನ್ನಡದ ನಾಮಪಲಕ ಹಾಕಿಸುವಂತೆ ಮಾಡುವ ಗುರುತರ ಜವಾಬ್ದಾರಿ ನಿಮ್ಮ ಮೇಲಿದೆ ಎಂದು ರವಿಸಿರಿ ಅವರಿಗೆ ಸಲಹೆ ನೀಡಿದರು.ಜಾತ್ಯತೀತ ಪದವೀಧರ ಒಕ್ಕೂಟದ ತಾಲೂಕು ಅಧ್ಯಕ್ಷ ಧನಂಜಯ್ ಮಾತನಾಡಿ, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸುವ, ಕನ್ನಡ ಸಾಹಿತ್ಯ ರಚನೆಗೆ ಪೂರಕ ವಾತಾವರಣ, ಕನ್ನಡ ಪರ ಕೆಲಸ ಮಾಡುವವರನ್ನು ಗುರುತಿಸಿ ಗೌರವಿಸುವಂತಹ ರವಿಸಿರಿ ಅವರ ಗುರುತರ ಕೆಲಸಗಳಲ್ಲಿ ಅವರಿಗೆ ಬೆನ್ನೆಲುಬಾಗಿ ಕನ್ನಡ ಪರ ಚಿಂತಕರೆಲ್ಲರೂ ನಿಲ್ಲಬೇಕಾದ ಅನಿವಾರ್ಯತೆ ಮತ್ತು ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮುನಿರಾಜು, ನಿವೃತ್ತ ಉಪ ತಹಸೀಲ್ದಾರ್ ಚಂದ್ರಶೇಖರ್, ಸರ್ಕಾರಿ ಬಾಲಕಿಯರ ಶಾಲೆ ಮುಖ್ಯಶಿಕ್ಷಕ ಸುಬ್ರಹ್ಮಣ್ಯ ಹೆಗಡೆ, ಶ್ರೀನಿವಾಸ್, ಉಪನ್ಯಾಸಕ ದಾಮೋದರೆಡ್ಡಿ ಮೊದಲಾದವರು ಉಪಸ್ಥಿತರಿದ್ದರು.ಫೋಟೋ: 22 ಹೆಚ್ಎಸ್ಕೆ 4
ಹೊಸಕೋಟೆಯಲ್ಲಿ ಜಾತ್ಯತೀತ ಪದವೀಧರರ ಒಕ್ಕೂಟ ಆಯೋಜಿಸಿದ್ದ ಕನ್ನಡ ಚಿಂತನ ಮಂತನ ಕಾರ್ಯಕ್ರಮದಲ್ಲಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಕನ್ನಡ ಜಾಗೃತ ಸಮಿತಿ ಸದಸ್ಯರಾಗಿ ನೇಮಿಸಿರುವ ಸಾಹಿತಿ ಜಡಿಗೇನಹಳ್ಳಿ ರವಿಸಿರಿ ಅವರನ್ನು ಅಭಿನಂದಿಸಲಾಯಿತು.