ಕನ್ನಡಪ್ರಭ ವಾರ್ತೆ ದಾಬಸ್ಪೇಟೆ 50 ವರ್ಷಗಳ ಹಿಂದೆ ಕಾಣುತ್ತಿದ್ದ ಬಡ ರೋಗಿಗಳು ಇಂದಿಗೂ ಹೆಚ್ಚಾಗಿದ್ದಾರೆ. ದೇಶದಲ್ಲಿ ಚಿಕಿತ್ಸೆ ವೆಚ್ಚ ಕಡಿಮೆಯಾದರೆ ಮಾತ್ರ ಜನರು ಸಮಾಜದಲ್ಲಿ ಬದುಕಬಹುದು ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಡಾ.ರಮಣರಾವ್ ತಿಳಿಸಿದರು.
ನಾನು ವಿಲೇಜ್ ಕ್ಲಿನಿಕ್ ಆರಂಭಿಸಿದಾಗ ಬಡ ರೋಗಿಗಳನ್ನು ಕಂಡಿದ್ದೇನೆ, ಅವರಿಗೆ ಉಚಿತ ಚಿಕಿತ್ಸೆ ನೀಡಿದ್ದೇನೆ. ಆದರೆ, ಇಂದಿಗೂ ಅಂತಹ ರೋಗಿಗಳನ್ನು ಸಮಾಜದಲ್ಲಿ ಕಾಣುತ್ತಿದ್ದೇನೆ. ನಮ್ಮ ಸರ್ಕಾರಗಳು ದುಬಾರಿಯಾಗಿರುವ ಚಿಕಿತ್ಸೆ ವೆಚ್ಚಗಳನ್ನು ಕಡಿಮೆ ಮಾಡಿ ಹೊಸ ಕಾಯಿದೆ ತಂದರೆ ಜನರು ಆರ್ಥಿಕವಾಗಿ, ಮಾನಸಿಕವಾಗಿ ಸೋಲುವುದು ಕಡಿಮೆಯಾಗುತ್ತದೆ. ಪ್ರಸ್ತುತ ರೋಗಿಗಳಿಗೆ ಚಿಕಿತ್ಸೆಗಿಂತ ಮೊದಲು ಆತ್ಮಸ್ಥೆರ್ಯ ತುಂಬುವುದು ಬಹಳ ಮುಖ್ಯ ಎಂದರು.
ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ಅಗತ್ಯ: ಗುಣಮಟ್ಟದ ಕಾಮಗಾರಿ, ಗುಣಮಟ್ಟದ ಉತ್ಪನ್ನಗಳು ದೀರ್ಘ ಕಾಲ ಬಾಳಿಕೆ ಬರುತ್ತವೆ. ಅದೇ ರೀತಿ ಗುಣಮಟ್ಟದ ಶಿಕ್ಷಣ, ಗುಣಮಟ್ಟದ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ಅನಿವಾರ್ಯವಾಗಿದೆ. ಗುಣಮಟ್ಟದ ಶಿಕ್ಷಣ ಸಂಸ್ಥೆಗಳ ಸಾಲಿನಲ್ಲಿ ಹರ್ಷ ಸಂಸ್ಥೆ ಅತ್ಯುತ್ತಮ ಸ್ಥಾನ ಪಡೆಯುವ ಜತೆ ಗ್ರಾಮೀಣ ವಿದ್ಯಾರ್ಥಿಗಳಿಗೆ ಗುಣಮಟ್ಟ ಶಿಕ್ಷಣ ನೀಡುವ ಗುರಿ ಹೊಂದಿ ಅನುಷ್ಠಾನ ಮಾಡಿರುವುದು ಸಮಾಜಕ್ಕೆ ಮಾದರಿಯಾಗಿದೆ ಎಂದರು.ಸಂವಾದ: ಹರ್ಷ ಸಂಸ್ಥೆಯ ಪ್ರಾಥಮಿಕ, ಪ್ರೌಢ, ಪದವಿ, ನರ್ಸಿಂಗ್ ಸೇರಿ ನಾನಾ ಕೋರ್ಸ್ ಗಳ ವಿದ್ಯಾರ್ಥಿಗಳು ಆರೋಗ್ಯ ಕ್ಷೇತ್ರದ ಬದಲಾವಣೆ ಹಾಗೂ ರಮಣರಾವ್ ನಡೆದುಬಂದ ಪಯಣ ಸೇರಿ ಅನೇಕ ವಿಷಯಗಳ ಬಗ್ಗೆ ಪ್ರಶ್ನೆ ಮಾಡಿ ಡಾ.ರಮಣರಾವ್ ಬಳಿ ಉತ್ತರ ಪಡೆದುಕೊಂಡರು. ಸಮಾರಂಭದಲ್ಲಿ ಪುಟಾಣಿ ಮಕ್ಕಳು ಭರತನಾಟ್ಯ ಹಾಗೂ ರಮಣರಾವ್ ವಿಲೇಜ್ ಕ್ಲಿನಿಕ್ ಹಾಗೂ ನಾನಾ ಸೇವಾಕಾರ್ಯ ಗಳನ್ನು ನೆನಪಿಸುವ ನೃತ್ಯ ಮಾಡಿದರು.