- ಕ್ರಯಪತ್ರ ಅಡವಿಟ್ಟು ₹1.50 ಕೋಟಿ ಸಾಲ ಪಡೆದಿದ್ದ ಕಟ್ಟಡ ಮಾಲಕಿ, ಕಾಲೇಜು ಸಂಸ್ಥಾಪಕಿ ರೂಪ
- - -* ಮುಖ್ಯಾಂಶಗಳು
- ದಾವಣಗೆರೆಯ ಬಸವರಾಜ್ ಎಂಬವರಿಂದ ಪಡೆದ ಸಾಲ ಹಿಂದಿರುಗಿಸದ ಕಾರಣ ಸಮಸ್ಯೆ
- ಕಾಲೇಜಿನ ಪೀಠೋಪಕರಣಗಳ ಹೊರಗಿಟ್ಟು ಕಟ್ಟಡಕ್ಕೆ ಬೀಗ ಜಡಿದಿರುವ ಬಸವರಾಜ- ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆ ಬಳಿಯ ಶ್ರೀ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು
- ಪ್ರಯೋಗ ಶಾಲೆ ತರಬೇತಿಗಾಗಿ ಬೇರೆ ಬೇರೆ ಕಾಲೇಜುಗಳಿಗೆ ವಿದ್ಯಾರ್ಥಿಗಳ ರವಾನೆ- - -
ಕನ್ನಡಪ್ರಭ ವಾರ್ತೆ ಚನ್ನಗಿರಿತಾಲೂಕಿನ ಚಿಕ್ಕೂಲಿಕೆರೆ ಗ್ರಾಮದ ಬಳಿಯ ಶ್ರೀ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜು ನಡೆಯುತ್ತಿದ್ದ ಕಟ್ಟಡಕ್ಕೆ ಸಂಬಂಧಪಟ್ಟಂತೆ ಕ್ರಯಪತ್ರ ಅಡವಿಟ್ಟು ಕೋಟಿ ರು.ಗೂ ಅಧಿಕ ಸಾಲ ಪಡೆದ ವಿಚಾರ ಮಾತುಕತೆಯಲ್ಲಿ ಬಗೆಹರಿಯದೇ ಈಗ ವಿವಾದ ಸೃಷ್ಠಿಯಾಗಿ ಕಾಲೇಜಿಗೆ ಬೀಗಬಿದ್ದಿದೆ. ಇದರಿಂದಾಗಿ ಅಲ್ಲಿನ ವಿದ್ಯಾರ್ಥಿಗಳ ವಿದ್ಯಾಭ್ಯಾಸ, ಭವಿಷ್ಯ ಅತಂತ್ರವಾಗಿದೆ.
ಪ್ಯಾರಾ ಮೆಡಿಕಲ್ ಕೋರ್ಸ್ ಅವಧಿ 3 ವರ್ಷಗಳದ್ದಾಗಿದೆ. ಪ್ರಥಮ, ದ್ವಿತೀಯ, ತೃತೀಯ ವರ್ಷ ಸೇರಿ ಒಟ್ಟು 120 ವಿದ್ಯಾರ್ಥಿಗಳು ಕಾಲೇಜಿನಲ್ಲಿ ಪ್ರವೇಶ ಪಡೆದು, ಕಲಿಯುತ್ತಿದ್ದಾರೆ. ಕಾಲೇಜು ನಡೆಸುತ್ತಿದ್ದ, ಕಟ್ಟಡದ ಮಾಲಕಿಯೂ ಆಗಿರುವ ರೂಪ ಎಂಬವರು ಕಟ್ಟಡದ ಕ್ರಯಪತ್ರವನ್ನು ಅಡವಿಟ್ಟು ದಾವಣಗೆರೆಯ ಬಸವರಾಜ್ ಎಂಬವರಿಂದ ₹1.50 ಕೋಟಿ ಸಾಲ ಪಡೆದಿದ್ದರು. ಈ ಸಾಲ ಮರುಪಾವತಿ ಮಾಡಿಲ್ಲ ಎಂಬ ಕಾರಣವೊಡ್ಡಿ ಬಸವರಾಜ್ ಮತ್ತವರ ಕಡೆಯವರು ಕಾಲೇಜಿನ ಪೀಠೋಪಕರಣಗಳನ್ನು ಹೊರಹಾಕಿ ಕಟ್ಟಡಕ್ಕೆ ಬೀಗ ಹಾಕಿದ್ದಾರೆ.ರೂಪ ಅವರು ಪಡೆದ ಸಾಲದ ಹಣವನ್ನು ನೀಡಬೇಕು ಎಂದು 8ರಿಂದ 10 ದಿನಗಳ ಹಿಂದೆಯೇ ಕಾಲೇಜಿನ ಪೀಠೋಪಕರಣಗಳನ್ನು ಬಸವರಾಜ್ ಕಡೆಯವರು ಹೊರಹಾಕಿ ಬೀಗ ಹಾಕಿದ್ದಾರೆ. ಆದ್ದರಿಂದ ಚನ್ನಗಿರಿ ಪಟ್ಟಣ ಮತ್ತು ನಲ್ಲೂರು ಗ್ರಾಮದಲ್ಲಿರುವ ಖಾಸಗಿ ಲ್ಯಾಬ್ಗಳಲ್ಲಿ ತರಬೇತಿಗಾಗಿ ವಿದ್ಯಾರ್ಥಿಗಳನ್ನು ಕಳಿಸುತ್ತಿದ್ದೇವೆ. ವಿದ್ಯಾರ್ಥಿಗಳ ಶಿಕ್ಷಣಕ್ಕೆ ಯಾವುದೇ ತೊಂದರೆ ಆಗದಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ ಎಂದು ಶಿಕ್ಷಣ ಸಂಸ್ಥೆಯ ರೂಪ ಕನ್ನಡಪ್ರಭಕ್ಕೆ ತಿಳಿಸಿದ್ದಾರೆ.
ಸಾಲದ ಮರುಪಾವತಿಗೆ ಸಮಯ ಕೇಳಿದ್ದೇವೆ. ಆದರೂ, ಕಾಲೇಜಿಗೆ ಬೀಗ ಹಾಕಿದ್ದಾರೆ. ಇದರಿಂದ ಹೊಸದಾಗಿ ಸೇರ ಬಯಸುವ ವಿದ್ಯಾರ್ಥಿಗಳ ಶಿಕ್ಷಣಕ್ಕೂ ತೊಂದರೆ ಆಗುತ್ತಿದೆ. ಪ್ರಸ್ತುತ ನಮ್ಮ ಶಿಕ್ಷಣ ಸಂಸ್ಥೆಯಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಪಠ್ಯ ವಿಷಯದ ಬೋಧನಾ ತರಗತಿಗಳು ಈಗಾಗಲೇ ಮುಗಿದಿವೆ. ನವೆಂಬರ್ ತಿಂಗಳಿನಲ್ಲಿ ಪರೀಕ್ಷೆ ನಡೆಯಲಿದೆ ಎಂದು ಎಂದು ರೂಪ ಸಮಸ್ಯೆ ಬಗ್ಗೆ ಹೇಳುತ್ತಾರೆ.- - -
-18ಕೆಸಿಎನ್ಜಿ1.ಜೆಪಿಜಿ:ಚನ್ನಗಿರಿ ತಾಲೂಕಿನ ಚಿಕ್ಕೂಲಿಕೆರೆ ಬಳಿಯ ಸಿದ್ದೇಶ್ವರ ಪ್ಯಾರಾ ಮೆಡಿಕಲ್ ಕಾಲೇಜಿನ ಕಟ್ಟಡ.