ನರಗುಂದ: ಕನ್ನಡಿಗರು ಕೇವಲ ನವೆಂಬರ್ ತಿಂಗಳ ಕನ್ನಡದ ಬಗ್ಗೆ ಪ್ರೇಮ ತಾಳಿದರೆ ಸಾಲದು. ವರ್ಷಪೂರ್ತಿ ಕನ್ನಡವನ್ನು ತಾಯಿಯ ಭಾಷೆಯೆಂದು ಪ್ರೀತಿಸಿದರೆ ಮಾತ್ರ ಕನ್ನಡ ಉಳಿಯಲು ಸಾಧ್ಯವೆಂದು ಪ್ರಾಚಾರ್ಯ ಸಿ.ಜಿ. ಖಾನಾಪುರ ತಿಳಿಸಿದರು.
ಭಾಷೆಯ ಬಗ್ಗೆ ನಮಗೆ ಸ್ವಾಭಿಮಾನ ಇರಬೇಕು. ಕನ್ನಡ ಸಾಹಿತ್ಯ ಪರಿಷತ್ತು ಕನ್ನಡಿಗ ಹೆಮ್ಮೆಯ ಸಂಸ್ಥೆ. ಅದು ಸದಾಕಾಲ ಕನ್ನಡ ಭಾಷೆ ಹಾಗೂ ಕನ್ನಡಿಗರ ಏಳಿಗೆಗಾಗಿ ಶ್ರಮಿಸುತ್ತಿದೆ ಎಂದರು.
ಪ್ರೊ. ರಮೇಶ ಐನಾಪೂರ ಮಾತನಾಡಿ, ಹರಿದುಹಂಚಿ ಹೋಗಿದ್ದ ಕರ್ನಾಟಕವನ್ನು ಒಂದುಗೂಡಿಸಲು ಕರ್ನಾಟಕ ಹಲವಾರು ಮಹನೀಯರು ಅವಿರತವಾಗಿ ಶ್ರಮಿಸಿದ್ದಾರೆ. ಅವರ ಹೋರಾಟದ ಫಲವಾಗಿ ಕನ್ನಡಿಗರಾದ ನಾವೆಲ್ಲರೂ ಒಂದಾಗಿ ಬಾಳುವಂತಾಗಿದೆ ಎಂದರು.ಕಸಾಪ ಅಧ್ಯಕ್ಷ ಪ್ರೊ. ಬಿ.ಸಿ. ಹನುಮಂತಗೌಡ್ರ ಮಾತನಾಡಿ, ಅಭಿವೃದ್ಧಿ ಹೆಸರಿನಲ್ಲಿ ಪ್ರತ್ಯೇಕ ಉತ್ತರ ಕರ್ನಾಟಕ ರಾಜ್ಯ ರಚನೆಯ ಕೂಗು ಕೇಳಿ ಬರುತ್ತಿದೆ. ಅಧಿಕಾರ ಲಾಲಸೆಯ ಪಟ್ಟಭದ್ರ ಹಿತಾಸಕ್ತಿಯ ಈ ಗುಂಪಿಗೆ ನಮ್ಮ ಬೆಂಬಲವಿಲ್ಲ ಎಂದರು.
ಎಸ್.ವೈ. ಪಾಟೀಲ, ರೂಪಾ ಪಾಟೀಲ, ರಮೇಶ ಮೆಣಸಗಿ ಇದ್ದರು. ಬಸಮ್ಮ ಪಾಟೀಲ ಸ್ವಾಗತಿಸಿದರು. ಅಂಜನಾದೇವಿ ಓಜನಳ್ಳಿ ನಿರೂಪಿಸಿದರು. ಬಿ.ಆರ್. ಕುರಿ ವಂದಿಸಿದರು.