ಕನ್ನಡಪ್ರಭ ವಾರ್ತೆ ಕೋಲಾರನಗರದ ಸಿ.ಬೈರೇಗೌಡ ಬಡಾವಣೆಯಲ್ಲಿ ಸುಮಾರು ೮ ಕೋಟಿ ರು. ವೆಚ್ಚದಲ್ಲಿ ನಿರ್ಮಿಸುತ್ತಿರುವ ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳ ಹಾಸ್ಟೆಲ್ ಕಾಮಗಾರಿ ಗುಣಮಟ್ಟದಿಂದ ಕೂಡಿಲ್ಲ. ಕೂಡಲೇ ನಿಯಮಾನುಸಾರವಾಗಿ ನಿರ್ಮಿಸಲು ಗುತ್ತಿಗೆದಾರನಿಗೆ ಸೂಚಿಸುವ ಜೊತೆಗೆ ಸಾಧ್ಯವಾದರೆ ಮರು ಟೆಂಡರ್ ಮಾಡುವಂತೆ ಪಕ್ಷಾತೀತವಾಗಿ ಸಮಾಜದ ಮುಖಂಡರು ಸಂಘದ ಪದಾಧಿಕಾರಿಗಳನ್ನು ಒತ್ತಾಯಿಸಿದರು. ನಗರದ ಹೊರವಲಯದ ಖಾಸಗಿ ರೆಸಾರ್ಟ್ನಲ್ಲಿ ಒಕ್ಕಲಿಗ ಸಮಾಜದ ಹಾಸ್ಟೆಲ್ ನಿರ್ಮಾಣಕ್ಕೆ ಸಂಬಂಧಿಸಿದ ತೊಡಕುಗಳ ಬಗ್ಗೆ ಚರ್ಚಿಸಲು ಕರೆದಿದ್ದ ಒಕ್ಕಲಿಗ ಸಮಾಜದ ಮುಖಂಡರ ಸಭೆಯಲ್ಲಿ ಮಾತನಾಡಿದ ಮುಖಂಡರು ಹಾಸ್ಟೆಲ್ ನಿರ್ಮಾಣ ಸಮಾಜದ ಗೌರವ ಮತ್ತು ಘನತೆಯನ್ನು ಹೆಚ್ಚಿಸುತ್ತದೆ. ಈಗಿರುವ ಗುತ್ತಿಗೆದಾರ ಸರಿಯಾಗಿ ಗುಣಮಟ್ಟದಿಂದ ಕಾಮಗಾರಿ ನಡೆಸುತ್ತಿಲ್ಲ. ಕೂಡಲೇ ಸರಿಪಡಿಸುವ ಕೆಲಸವನ್ನು ಸಂಘದ ರಾಜ್ಯ ನಿರ್ದೇಶಕರು ಹಾಗೂ ಪ್ರಮುಖ ಮುಖಂಡರು ಮುಂದಾಳತ್ವವನ್ನು ವಹಿಸಿಕೊಳ್ಳಬೇಕು ಎಂದು ಒತ್ತಾಯ ಮಾಡಿದರು.ವಿಧಾನ ಪರಿಷತ್ ಸದಸ್ಯ ಎಂ.ಎಲ್. ಅನಿಲ್ ಕುಮಾರ್ ಮಾತನಾಡಿ, ಇತಿಹಾಸದಲ್ಲಿ ಮೊದಲ ಬಾರಿಗೆ ಸಂಘದ ಆಸ್ತಿ ಉಳಿಸಲು ಒಗ್ಗಟ್ಟಾಗಿದ್ದು ಒಳ್ಳೆಯ ಬೆಳವಣಿಗೆ ಹಿಂದೆ ಸಂಘದ ಚುನಾವಣೆಯಲ್ಲಿ ಪಾರದರ್ಶಕತೆಯಿಂದ ನಡೆಯಬೇಕು ಎಂದು ಸ್ವಾಮೀಜಿಗಳ ನೇತೃತ್ವದಲ್ಲಿ ಪ್ರಯತ್ನ ಮಾಡಿ ಯಾರಿಗೂ ಹಣ ಕೊಡದೆ ಚುನಾವಣೆ ನಡೆಸಿದ್ದಾರೆ ಅದು ಒಕ್ಕಲಿಗ ಸಮಾಜದ ಬಗ್ಗೆ ಇತರೆ ಸಮುದಾಯಗಳು ಸಹ ಗೌರವದಿಂದ ಕಾಣಲು ಸಾಧ್ಯವಾಗಿದೆ ಹಾಸ್ಟೆಲ್ ನಿರ್ಮಾಣ ಒಕ್ಕಲಿಗ ಸಮಾಜದ ಭವಿಷ್ಯ ರೂಪಿಸಲು ಸಾಧ್ಯವಾಗುತ್ತದೆ ಅದನ್ನು ಸರಿಯಾದ ರೀತಿಯಲ್ಲಿ ನಿರ್ಮಿಸುವಂತೆ ಮಾಡುವುದು ಸಹ ನಮ್ಮೆಲ್ಲರ ಜವಾಬ್ದಾರಿಯಾಗಿದೆ ಕೂಡಲೇ ಗುತ್ತಿಗೆದಾರ ನಿಯಮಾನುಸಾರ ಕೆಲಸ ಮಾಡಬೇಕು, ಇಲ್ಲ ಅವರ ಹೆಸರಿನಲ್ಲಿ ನಮ್ಮ ಸಮುದಾಯದವರು ಬೇರೆ ಯಾರಾದರೂ ಕಾಮಗಾರಿ ಮುಂದುವರೆಸಲು ನಿರ್ಧರಿಸಬೇಕು, ಜೊತೆಗೆ ಹಿರಿಯರ ಸಲಹೆ ಸೂಚನೆ ಹಾಗೂ ಮಾರ್ಗದರ್ಶನ ಮಾಡಬೇಕು ಎಂದು ಸಭೆಗೆ ತಿಳಿಸಿದರು.ಒಕ್ಕಲಿಗ ಸಂಘದ ರಾಜ್ಯ ನಿರ್ದೇಶಕ ಕೋನಪ್ಪರೆಡ್ಡಿ ಮಾತನಾಡಿ, ಸಂಘದಲ್ಲಿ ನಡೆದ ಅನೇಕ ಕಾಮಗಾರಿಗಳ ಭ್ರಷ್ಟಾಚಾರವನ್ನು ಪ್ರಶ್ನೆ ಮಾಡಿ ಸಂಘಕ್ಕೆ ಉಳಿಸುವ ಕೆಲಸವನ್ನು ಮಾಡಿದ್ದಕ್ಕೆ ನನ್ನನ್ನು ಕಾರ್ಯದರ್ಶಿ ಸ್ಥಾನದಿಂದ ಹೊರಹಾಕಿದರು. ಇವತ್ತು ಕೋಲಾರ ಜಿಲ್ಲೆಯ ಒಕ್ಕಲಿಗ ಸಮಾಜದ ಹೆಣ್ಣು ಮಕ್ಕಳ ಹಾಸ್ಟೆಲ್ ನಿಂದ ಭವಿಷ್ಯ ಕಾಣಬೇಕಾಗಿದೆ ಎಂದರು.ಸಭೆಯ ನಂತರ ಹೊರಬಂದ ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿ, ಹಾಸ್ಟೆಲ್ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಸಭೆಯ ನಿರ್ಣಯಕ್ಕೆ ಸಮುದಾಯದ ಎಲ್ಲಾ ಮುಖಂಡರು ಒಮ್ಮತದಿಂದ ಬೆಂಬಲ ನೀಡಿದ್ದಾರೆ ಎಂದರು.ಸಮುದಾಯದ ಮುಖಂಡರಾದ ಆರ್. ಪ್ರಭಾಕರ್ ರೆಡ್ಡಿ, ಸೀಸಂದ್ರ ಗೋಪಾಲಗೌಡ, ಡಿ.ಎಲ್. ನಾಗರಾಜ್, ಮುರಳಿಗೌಡ ಮುಂತಾದವರು ಮಾತನಾಡಿದರು.ಸಭೆಯಲ್ಲಿ ಜಿಲ್ಲಾ ಒಕ್ಕಲಿಗ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ, ರಾಜ್ಯ ಒಕ್ಕಲಿಗ ಸಂಘದ ನಿರ್ದೇಶಕರಾದ ಯಲುವಹಳ್ಳಿ ರಮೇಶ್, ಡಿ.ಕೆ ರಮೇಶ್, ಜೆಡಿಎಸ್ ರಾಜ್ಯ ಹಿರಿಯ ಉಪಾಧ್ಯಕ್ಷ ಕೆ.ಬಿ.ಗೋಪಾಲಕೃಷ್ಣ, ಮುಖಂಡರಾದ ವಡಗೂರು ನಾಗರಾಜ್, ಛತ್ರಕೋಡಿಹಳ್ಳಿ ಮುನೇಗೌಡ ಸೇರಿ ಹಲವಾರು ಮಂದಿ ಹಾಜರಿದ್ದರು.