ಬ್ಯಾಡಗಿ: ಕಠಿಣ ಪರಿಶ್ರಮದಿಂದ ಪಡೆದ ಶಿಕ್ಷಣ ನಿಮ್ಮ ಭವಿಷ್ಯವನ್ನು ಉಜ್ವಲಗೊಳಿಸಲಿದೆ ಎಂದು ನಿವೃತ್ತ ಉಪ ತಹಸೀಲ್ದಾರ್ ನೀಲಕಂಠಪ್ಪ ಕುಮ್ಮೂರ ತಿಳಿಸಿದರು.
ತಾಲೂಕಿನ ಕುಮ್ಮೂರ ಗ್ರಾಮದ ಫಾಸಿ ಪ್ರಭಾವತಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಮತಿ ಮುತ್ತಕ್ಕ ಶ್ರೀ ನೀಲಕಂಠಪ್ಪ ಕುಮ್ಮೂರ ಪ್ರತಿಷ್ಠಾನ ವತಿಯಿಂದ 2024- 25ನೇ ಸಾಲಿನ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ಪ್ರತಿಭಾ ಪುರಸ್ಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.ಜಗತ್ತು ಬದಲಾಗುತ್ತಿದ್ದು, ಭವಿಷ್ಯದ ಬೇಡಿಕೆಗಳಿಗೆ ವಿದ್ಯಾರ್ಥಿಗಳು ಹೊಂದಿಕೊಳ್ಳಬೇಕು. ಅದಕ್ಕೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಕೂಡ ವಿಕಸನಗೊಳ್ಳಬೇಕಾಗಿದೆ ಎಂದರು.
ಮೊದಲಿದ್ದ ಶಿಕ್ಷಣ ಪದ್ಧತಿಯೇ ಬೇರೆ. ಮೌಲ್ಯಯುತ ಬದುಕಿಗೆ ಹೆಚ್ಚಿನ ಮಹತ್ವ ದೊರೆಯುತ್ತಿತ್ತು. ನೀತಿ ಪಾಠಗಳಿಗೆ ಹೆಚ್ಚಿನ ಮಹತ್ವ ನೀಡಲಾಗಿತ್ತು ಎಂದರು.ಇದೇ ಸಂದರ್ಭದಲ್ಲಿ ಪ್ರತಿ ವರ್ಷದಂತೆ ಪ್ರತಿಷ್ಠಾನದ ವತಿಯಿಂದ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿಗೆ ₹22 ಸಾವಿರ, ದ್ವಿತೀಯ ₹15,000, ತೃತೀಯ ₹13,000 ಒಟ್ಟು ₹50 ಸಾವಿರ ನಗದು ಬಹುಮಾನ ಹಾಗೂ ಪಾರಿತೋಷಕ ನೀಡಿ ಸನ್ಮಾನಸಲಾಯಿತು. ಗ್ರಾಮದ ಚನ್ನಬಸಪ್ಪ ಬಣಕಾರ ಅವರು ವಿಜ್ಞಾನ ಮತ್ತು ಗಣಿತ ವಿಷಯದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ತಲಾ ₹5 ಸಾವಿರ ನಗದು ಬಹುಮಾನ, ನಿವೃತ್ತ ಸರ್ವೆಯರ್ ಚನ್ನಬಸಪ್ಪ ದಾಸರ ಅವರು ಪ್ರಥಮ ಸ್ಥಾನ ಗಳಿಸಿದ ವಿದ್ಯಾರ್ಥಿಗೆ ₹2500 ನಗದು ಬಹುಮಾನ ನೀಡಿ ಗೌರವಿಸಿದರು. ಬಳಿಕ ಫಲಿತಾಂಶಕ್ಕೆ ಕಾರಣೀಕರ್ತರಾದ ಶಿಕ್ಷಕವೃಂದವನ್ನು ಗೌರವಿಸಲಾಯಿತು.
ಗ್ರಾಪಂ ಅಧ್ಯಕ್ಷ ಮಾರುತಿ ಕಾಳಪ್ಪನವರ, ಪಿಎಲ್ಡಿ ಬ್ಯಾಂಕ್ ನಿರ್ದೇಶಕ ಮಾರುತಿ ಫಾಸಿ, ನೀಲಕಂಠಪ್ಪ ಫಾಸಿ, ಮುತ್ತಕ್ಕ ನೀಲಕಂಠಪ್ಪ ಕುಮ್ಮೂರ, ಸೋಮಶೇಖರ ಕುಮ್ಮೂರ ಉಪಸ್ಥಿತರಿದ್ದರು. ಮುಖ್ಯಶಿಕ್ಷಕ ಶ್ರೀನಿವಾಸ್ ಕರ್ನೂಲ್ ಅಧ್ಯಕ್ಷತೆ ವಹಿಸಿದ್ದರು. ಎಚ್.ಟಿ. ಸತ್ಯಪ್ರಕಾಶ ಸ್ವಾಗತಿಸಿದರು. ರೂಪಾ ನಿರೂಪಿಸಿದರು. ಜಿ.ಡಿ. ಕೂನಬೇವು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುಮಂಗಲಾ ಬೆಟದೂರು ವಂದಿಸಿದರು. ಶಂಕರ ಜಾಡರ್, ಆಶಾ ಹೊಸಳ್ಳಿ ಉಪಸ್ಥಿತರಿದ್ದರು.ರಾಣಿಬೆನ್ನೂರಿನ ಸಮಗ್ರ ಪ್ರಗತಿಗೆ ಶ್ರಮಿಸುವೆ: ಶಾಸಕ ಕೋಳಿವಾಡ
ರಾಣಿಬೆನ್ನೂರು: ನಗರದ ಸರ್ವತೋಮುಖ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಎಲ್ಲ ಸದಸ್ಯರ ಸಹಕಾರದೊಂದಿಗೆ ಪ್ರಾಮಾಣಿಕವಾಗಿ ಕಾರ್ಯ ನಿರ್ವಹಿಸುವೆ ಎಂದು ಶಾಸಕ ಪ್ರಕಾಶ ಕೋಳಿವಾಡ ಭರವಸೆ ನೀಡಿದರು.ನಗರದ ವಿವಿಧ ವಾರ್ಡ್ಗಳಲ್ಲಿ ಸೋಮವಾರ ಸ್ಥಳೀಯ ನಗರಸಭೆ ವತಿಯಿಂದ ಅಮೃತ ನಗರೋತ್ಥಾನ ಯೋಜನೆಯಡಿ ವಿವಿಧ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು.ಗುತ್ತಿಗೆದಾರರು ನಿಗದಿತ ಕಾಲಮಿತಿಯೊಳಗೆ ಗುಣಮಟ್ಟದ ಕಾಮಗಾರಿ ಪೂರ್ಣಗೊಳಿಸಬೇಕು. ಕಾಮಗಾರಿ ಸಮಯದಲ್ಲಿ ಸಾರ್ವಜನಿಕರು ಸಹಕಾರ ನೀಡಬೇಕು ಎಂದರು.ನಗರಸಭಾ ಸದಸ್ಯರಾದ ಶೇಖಪ್ಪ ಹೊಸಗೌಡ್ರ, ಗಂಗಮ್ಮ ಹಾವನೂರ, ಮಂಜುಳಾ ಹತ್ತಿ, ಪ್ರಭಾವತಿ ತಿಳವಳ್ಳಿ, ಮಲ್ಲಿಕಾರ್ಜುನ ಅಂಗಡಿ, ಪುಟ್ಟಪ್ಪ ಮರಿಯಮ್ಮನವರ, ಮಲ್ಲೇಶಪ್ಪ ಮದ್ಲೇರ, ಮಾಜಿ ಸದಸ್ಯ ಬಸವರಾಜ ಹುಚ್ಚಗೊಂಡರ, ರಾಜಶೇಖರಯ್ಯ ಸುರಳಿಕೇರಿಮಠ, ಮಧು ಕೋಳಿವಾಡ, ಸಿಡಿಪಿಒ ಪಾರ್ವತಿ ಹುಂಡೇಕಾರ, ಪೌರಾಯುಕ್ತ ಪಕ್ಕೀರಪ್ಪ ಇಂಗಳಗಿ, ಎಇಇ ಮರೀಗೌಡ್ರ, ನಿರ್ಮಲಾ ನಾಯಕ, ಗುಡಿಸಲಮನಿ, ಗುತ್ತಿಗೆದಾರರಾದ ನಿರಂಜನ ಗಡಾದ, ನಾಗಾರ್ಜುನ ಗಡಾದ ಮತ್ತಿತರರಿದ್ದರು.