ಕನ್ನಡಪ್ರಭ ವಾರ್ತೆ ಮಂಡ್ಯ
ಮಳವಳ್ಳಿ ತಾಲೂಕು ಆಡಳಿತ ಸಂಪೂರ್ಣ ನಿಷ್ಕ್ರಿಯವಾಗಿದ್ದು, ತಾಲೂಕಿನಾದ್ಯಂತ ಭ್ರಷ್ಟಾಚಾರ ತಾಂಡವವಾಡುತ್ತಿದೆ. ನನ್ನ ಅವಧಿಯಲ್ಲಾದ ಅಭಿವೃದ್ಧಿ ಕಾಮಗಾರಿಗಳ ನಾಲ್ಕು ನಾಮಫಲಕಗಳನ್ನು ಒಡೆದು ಹಾನಿಪಡಿಸಿದ್ದು ಇದುವರೆಗೂ ಜಿಲ್ಲಾಡಳಿತ ಮತ್ತು ತಾಲೂಕು ಆಡಳಿತ ಯಾವುದೇ ಕ್ರಮ ಜರುಗಿಸಿಲ್ಲ ಎಂದು ಮಾಜಿ ಶಾಸಕ ಡಾ.ಕೆ.ಅನ್ನದಾನಿ ಆರೋಪಿಸಿದರು.ನಾನು ಕ್ಷೇತ್ರದ ಶಾಸಕನಾಗಿದ್ದ ಅವಧಿಯಲ್ಲಿ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿತ್ತು. ಕೆಲವೊಂದಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಲಾಗಿತ್ತು. ಪ್ರಸ್ತುತ ಕಾಂಗ್ರೆಸ್ ಶಾಸಕ ಪಿ.ಎಂ.ನರೇಂದ್ರಸ್ವಾಮಿ ಅವರು ದ್ವೇಷದ ರಾಜಕಾರಣಕ್ಕೆ ಮುಂದಾಗಿದ್ದು, ನನ್ನ ಕಾಲದ ಅಭಿವೃದ್ಧಿಗೆ ಸಂಬಂಧಿಸಿದ ಶಂಕುಸ್ಥಾಪನೆ ಕಲ್ಲುಗಳನ್ನು ಕಿತ್ತೆಸೆಯಲಾಗಿದೆ. ಆಶ್ರಯ ಬಡಾವಣೆಗೆ ಸರ್ಕಾರವೇ ಡಾ.ಕೆ.ಅನ್ನದಾನಿ ಬಡಾವಣೆ ಎಂದು ನಾಮಕರಣ ಮಾಡಿ ಫಲಕ ಅಳವಡಿಸಿದ್ದರೂ ಒಡೆದುಹಾಕಿದ್ದಾರೆ.
ಆರು ತಿಂಗಳಿಂದ ಇಂತಹ ಕೆಲಸಗಳು ತಾಲೂಕಿನಲ್ಲಿ ನಡೆಯುತ್ತಿವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.ಹಲಗೂರು ಹೋಬಳಿಯ ಬ್ಯಾಡರಹಳ್ಳಿ ಮೊರಾರ್ಜಿ ವಸತಿ ಶಾಲೆಯಲ್ಲಿ ಮಕ್ಕಳಿಗೋಸ್ಕರ ಸರಬರಾಜಾಗಬೇಕಿದ್ದ ಗೋಧಿಯು ಕಾಂಗ್ರೆಸ್ ಮುಖಂಡ ಪ್ರಭುಲಿಂಗು ಮನೆಯಲ್ಲಿ ಪತ್ತೆಯಾಗಿದ್ದು, ಈ ಸಂಬಂಧ ಎಫ್ಐಆರ್ ಕೂಡ ಆಗಿದೆ. ಆದರೆ, ಗೋಧಿ ಪತ್ತೆಯಾದ ಕಾಂಗ್ರೆಸ್ ಮುಖಂಡನನ್ನು ಬಂಧಿಸದೆ ವಸತಿ ಶಾಲೆಯ ಅಮಾಯಕ ಸಿಬ್ಬಂದಿಯನ್ನು ಪೊಲೀಸರು ಬಂಧಿಸಿ ದೌರ್ಜನ್ಯವೆಸಗಿದ್ದಾರೆ ಎಂದು ದೂರಿದರು.
ರಾಜ್ಯ ಸರ್ಕಾರ ಮಕ್ಕಳಿಗೆ ಕೊಡುವ ಆಹಾರವನ್ನೂ ಕದಿಯಲಾಗುತ್ತಿದೆ. ಗೋಧಿ ಸೇರಿದಂತೆ ಬೇರೆ ಬೇರೆ ಆಹಾರ ಧಾನ್ಯಗಳನ್ನು ಮಾರಾಟ ಮಾಡಲಾಗುತ್ತಿದೆ. ಈ ವಿಷಯವಾಗಿ ಶಾಸಕರು ಏನು ಮಾಡುತ್ತಿದ್ದಾರೆ ಎಂದು ಪ್ರಶ್ನಿಸಿದರು.ಬಿಗ್ಬಾಸ್ ರಿಯಾಲಿಟಿ ಷೋನಿಂದ ಪರಿಸರ ಮಾಲಿನ್ಯವಾಗುತ್ತಿದೆ ಎಂಬ ಕಾರಣ ನೀಡಿ ದಿಢೀರ್ ಸ್ಥಗಿತಗೊಳಿಸಿದ್ದಾರೆ. ಆ ಕಾರ್ಯಕ್ರಮವನ್ನು ನಂಬಿಕೊಂಡು ೭೦೦ ಜನರು ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲಿ ನಡೆಯುತ್ತಿರುವುದು ಮನರಂಜನೆ ಕಾರ್ಯಕ್ರಮವೇ ಹೊರತು ಯಾವ ಕಾರ್ಖಾನೆಯನ್ನೂ ಸಹ ನಡೆಸುತ್ತಿಲ್ಲ. ಅಲ್ಲಿ ಯಾವ ಹೊಗೆಯೂ ಬರುತ್ತಿಲ್ಲ. ಮನರಂಜನೆ ಕಾರ್ಯಕ್ರಮದಲ್ಲಿ ಪರಿಸರ ಮಾಲಿನ್ಯ ಹೇಗೆ ಉಂಟಾಗುತ್ತದೆ. ಬಿಗ್ಬಾಸ್ ಷೋನವರಿಂದ ಹಣ ಬರಲಿಲ್ಲವೆಂಬ ಕಾರಣಕ್ಕೆ ದಿಢೀರ್ ಬಂದ್ ಮಾಡಿಸಿದ್ದಾರೆ ಎಂದು ಆರೋಪಿಸಿದರು.
ಜಿಲ್ಲೆಯಲ್ಲಿ ನಡೆದಿದ್ದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸಂಬಂಧಿಸಿದಂತೆ ಭ್ರಷ್ಟಾಚಾರದ ಕುರಿತು ಮೊದಲಿಗೆ ನಾನು ಆರೋಪ ಮಾಡಿದೆ. ಇದೀಗ ಎಂ.ಬಿ.ನಾಗಣ್ಣಗೌಡ ಅವರು ಲೋಕಾಯುಕ್ತರಿಗೆ ದೂರು ನೀಡಿದ್ದಾರೆ. ಮುಂದಿನವಾರ ಲೋಕಾಯುಕ್ತಕ್ಕೆ ನಾನೊಂದು ದೂರು ದಾಖಲಿಸುತ್ತೇನೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸುವಂತೆ ಒತ್ತಾಯಿಸಿದರು.ಗೋಷ್ಠಿಯಲ್ಲಿ ಕಾಂತರಾಜು, ಸಿದ್ದಾಚಾರಿ, ಸಾತನೂರು ಜಯರಾಂ ಹಾಜರಿದ್ದರು.