ಕನ್ನಡಪ್ರಭ ವಾರ್ತೆ ಹೊಳಲ್ಕೆರೆ
ಇಲ್ಲಿಯ ಒಂಟಿಕಂಬದ ಮುರುಘಾಮಠದಲ್ಲಿ ಶನಿವಾರ ನಡೆದ ಲಿಂಗೈಕ್ಯ ಶ್ರೀ ಜಗದ್ಗುರು ಮಲ್ಲಿಕಾರ್ಜುನ ಮುರುಘರಾಜೇಂದ್ರ ಮಹಾಸ್ವಾಮಿಗಳವರ 32ನೇ ಸ್ಮರಣೋತ್ಸವದ ಪೂರ್ವಸಿದ್ಧತಾ ಸಭೆಯ ಸಾನ್ನಿಧ್ಯ ವಹಿಸಿ ಮಾತನಾಡಿ, ಮಹಾತ್ಮರ ಮೂಲ ಹುಡುಕಬಾರದು ಎನ್ನುವ ಮಾತಿದೆ. ಜಯದೇವ ಶ್ರೀಗಳವರ ಮಾತುಗಳು ಭಾಷಣ ಆಗಿರುತ್ತಿತ್ತು. ಅವರ ಅಂತರಂಗದ ನುಡಿಯು ಲಿಂಗ ಮೆಚ್ಚುವಂತಿರುತ್ತತ್ತು. ಅವರ ಒಂದು ಭಾಷಣ ಕೇಳಿದರೆ ಸಾಕು ಧನ್ಯತಾಭಾವ ಮೂಡುತ್ತಿತ್ತು. ಅಷ್ಟೊಂದು ಅಧ್ಯಯನಶೀಲರಾಗಿದ್ದರು. ಈಗಿನ ಕಾಲದಲ್ಲಿ ಶಿಕ್ಷಣ ಸಂಸ್ಥೆಗಳನ್ನು ನಿರ್ಮಿಸುವುದು ತುಂಬ ಸುಲಭ. ಆದರೆ ಸುಮಾರು 70ವರ್ಷಗಳ ಹಿಂದೆ ಸಂಸ್ಥೆಗಳನ್ನು ಕಟ್ಟುವುದು ಸುಲಭ ಆಗಿರಲಿಲ್ಲ. ಮಲ್ಲಿಕಾರ್ಜುನ ಶ್ರೀಗಳು 1964ರಲ್ಲಿ ಎಸ್.ಜೆ.ಎಂ. ವಿದ್ಯಾಪೀಠವನ್ನು ಸ್ಥಾಪಿಸಿ ತಾಂತ್ರಿಕ, ದಂತವೈದ್ಯಕೀಯ, ಔಷಧೀಯ, ಪದವಿ, ಪದವಿ ಪೂರ್ವ, ಪ್ರೌಢಶಾಲೆ, ಪ್ರಾಥಮಿಕ ಹೀಗೆ ಒಂದೊಂದೇ ಶಾಲಾ ಕಾಲೇಜುಗಳನ್ನು ಕಟ್ಟಿ ಶಿಕ್ಷಣಸಂಸ್ಥೆಗಳ ಮೂಲಪ್ರವರ್ತಕರಾಗಿದ್ದಾರೆ. ಅಂತಹ ಮಹಾಂತರ ಸ್ಮರಣೆಯನ್ನು ಎಲ್ಲರೂ ಸೇರಿ ಆ.8ರಂದು ಅರ್ಥಪೂರ್ಣವಾಗಿ ಮಾಡೋಣ ಎಂದು ತಿಳಿಸಿದರು.
ದಾವಣಗೆರೆ ವಿರಕ್ತಮಠದ ಡಾ. ಬಸವಪ್ರಭು ಸ್ವಾಮೀಜಿ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಜ್ಞಾನದ ಸೂರ್ಯ. ಯಾವಾಗಲೂ ಅವರ ವಾಣಿಯಲ್ಲಿ ಜ್ಞಾನದ ಗಂಗೆ ಹರಿದುಬರುವಂತೆ ಭಾಸವಾಗುತ್ತಿತ್ತು. ಶ್ರೀಗಳು ಸಮಾಜಕ್ಕೆ ತಾತ್ವಿಕವಾದ ಸಂದೇಶವನ್ನು ನೀಡಿದ್ದಾರೆ. ಮಾತನಾಡಿದರೆ ಮುತ್ತಿನಂತೆ ಮಾತನಾಡಬೇಕು. ಮಾತೆಂಬುದು ಜ್ಯೋತಿರ್ಲಿಂಗ ಎನ್ನುವ ಅಲ್ಲಮಪ್ರಭುಗಳ ವಾಣಿಗೆ ಶ್ರೀಗಳು ಸಾಕ್ಷಿಯಾಗಿದ್ದರು ಎಂದು ಸ್ಮರಿಸಿದರಲ್ಲದೆ, ಇಂಥ ಶ್ರೀಗಳವರ ಸ್ಮರಣೋತ್ಸವವನ್ನು 2022ರಿಂದ ಪ್ರತಿವರ್ಷ ಆಗಸ್ಟ್ 8ನೇ ತಾರೀಕು ಆಯೋಜಿಸುತ್ತ ಬರಲಾಗಿದೆ. ಈ ಬಾರಿಯೂ ಆಗಸ್ಟ್ 8ಕ್ಕೆ ಆಚರಿಸಲು ಶ್ರೀಮಠದ ಆಡಳಿತ ಮಂಡಳಿಯು ತೀರ್ಮಾನಿಸಿದೆ ಎಂದರು.ಶಾಸಕ ಡಾ.ಎಂ.ಚಂದ್ರಪ್ಪ ಮಾತನಾಡಿ, ಮಲ್ಲಿಕಾರ್ಜುನ ಶ್ರೀಗಳು ಮಾಡಿರುವ ಸಾಧನೆಗಳು, ಸಂಸ್ಥಾನವನ್ನು ಕಟ್ಟಿ ಬೆಳೆಸಿ, ಶಾಲಾ ಕಾಲೇಜುಗಳ ಸ್ಥಾಪಿಸುವುದರ ಮೂಲಕ ನಾಡಿನಲ್ಲಿ ಶೈಕ್ಷಣಕ ಕ್ರಾಂತಿಯನ್ನೇ ಮಾಡಿದ್ದಾರೆ. ಅಪರಿಮಿತವಾದ ಹೆಸರು ಮಾಡಿದವರು. ಆಧ್ಯಾತ್ಮಿಕವಾಗಿ ಧಾರ್ಮಿಕವಾಗಿ ಸಾಮಾಜಿಕವಾಗಿ ಅವರ ಘನತೆ, ಗಾಂಭಿರ್ಯ ಮತ್ತು ಪ್ರೌಢಿಮೆಯಿಂದ ಮೇರುವ್ಯಕ್ತಿತ್ವವುಳ್ಳರಾಗಿದ್ದರು ಎಂದರು.
ಶ್ರೀಮಠಕ್ಕೆ ನಾವೆಲ್ಲ ಭಕ್ತರಷ್ಟೆ. ಯಾವುದೇ ಪ್ರತಿಫಲಾಪೇಕ್ಷೆ ಹೊಂದಿದವರಲ್ಲ. ಮಠವು ಎತ್ತರಕ್ಕೆ ಬೆಳೆದಷ್ಟೂ ಸಮಾಜವು ಅಷ್ಟೇ ಸಂತೋಷವಾಗಿರುತ್ತದೆ. ಜಯದೇವ ಶ್ರೀಗಳು ಹಾಕಿಕೊಟ್ಟಿರುವ ದಾರಿಯಲ್ಲಿ ಜಯವಿಭವ ಶ್ರೀಗಳು ಮಾಡಿದಂತಹ ಕಾರ್ಯಕ್ರಮಗಳು, ಅದಕ್ಕೆ ಪೂರಕವಾದಂತಹ ವ್ಯವಸ್ಥೆಯ ತಂದಂತಹ ಮಲ್ಲಿಕಾರ್ಜುನ ಶ್ರೀಗಳವರನ್ನು ಭೂಮಿ-ಚಂದ್ರ-ಸೂರ್ಯ ಇರುವವರೆಗೂ ಸ್ಮರಿಸುವಂತಹ ಕಾರ್ಯ ಇಂಥ ಪವಿತ್ರ ಜಾಗದಲ್ಲಿ ನಡೆಯುತ್ತದೆ ಎಂದು ಹೇಳಿದರು.ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ ನಿಪ್ಪಾಣಿ, ಶ್ರೀ ಮುರುಘೇಂದ್ರ ಸ್ವಾಮೀಜಿ, ತಿಪ್ಪೇರುದ್ರ ಸ್ವಾಮೀಜಿ, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಎಸ್.ಆರ್.ಗಿರೀಶ್, ಕೆಇಬಿ ಷಣ್ಮುಖಪ್ಪ, ರೈತಸಂಘದ ಮುಖಂಡರು, ಎಸ್.ಜೆ.ಎಂ. ವಿದ್ಯಾಪೀಠದ ಸಂಸ್ಥೆಗಳ ಸಿಬ್ಬಂದಿ, ನೂರಾರು ಸಂಖ್ಯೆಯಲ್ಲಿ ಚಿತ್ರದುರ್ಗ, ಹೊಳಲ್ಕೆರೆ, ಹೊಸದುರ್ಗ ಸುತ್ತಮುತ್ತಲ ತಾಲೂಕುಗಳಿಂದ ಭಕ್ತರು ಭಾಗವಹಿಸಿದ್ದರು. ಮುರುಘೇಶ್ ಸ್ವಾಗತಿಸಿ, ನಿರೂಪಿಸಿದರು.