ಶಿವಕುಮಾರ ಕುಷ್ಟಗಿ
ರಾಜ್ಯದಲ್ಲಿ ಬೀದಿದೀಪಗಳಿಗಾಗಿ ಕೇಂದ್ರೀಕೃತ ನಿಯಂತ್ರಣ ಮತ್ತು ಮೇಲ್ವಿಚಾರಣಾ ವ್ಯವಸ್ಥೆಯನ್ನು(ಸಿಸಿಎಂಎಸ್) (Centralized Control and Monitoring Systems) 2019ರಿಂದ ಜಾರಿಗೆ ತರಲಾಗಿದೆ. ಈ ಯೋಜನೆಯಲ್ಲಿ ಹಳೆಯ ಸಾಂಪ್ರದಾಯಿಕ ಬೀದಿದೀಪಗಳ ಬದಲಿಗೆ ಡಿಜಿಟಲ್ ನಿರ್ವಹಣಾ ವ್ಯವಸ್ಥೆಯನ್ನು ಹೊಂದಿರುವ ಸ್ಮಾರ್ಟ್ ಎಲ್ಇಡಿ ದೀಪ ಅಳವಡಿಸುವ ಪ್ರಕ್ರಿಯೆಯಾಗಿದೆ. ಅವಳಿ ನಗರದಲ್ಲಿ ಈ ಯೋಜನೆ ಜಾರಿಯಾಗುತ್ತದೆ ಎಂದು ಹೇಳುತ್ತಲೇ ಕಾಲಹರಣ ಮಾಡುತ್ತಿದ್ದಾರೆ.
ಏನೆಲ್ಲಾ ಒಳಗೊಂಡಿದೆ?: ಈ ವ್ಯವಸ್ಥೆಯು ಹಬ್ ಮಾದರಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಇಲ್ಲಿ ಪ್ರತಿ ಎಲ್ಇಡಿ ದೀಪಗಳನ್ನು ಟ್ಯಾಗ್ ಮಾಡಲಾಗಿರುತ್ತದೆ ಮತ್ತು ಅವುಗಳನ್ನು ಸ್ಮಾರ್ಟ್ ಮೀಟರ್ ಹಾಗೂ ಕಂಟ್ರೋಲರ್ ಹಾಕಿ, ಹಳೆಯ ಬೀದಿದೀಪಗಳನ್ನು ತೆಗೆದು 3- ಪಿನ್ ಸಂಪರ್ಕ (ಫೇಸ್, ನ್ಯೂಟ್ರಲ್ ಮತ್ತು ಅರ್ಥ್) ಹೊಂದಿರುವ ಎಲ್ಇಡಿ ದೀಪಗಳನ್ನು ಅಳವಡಿಸಲಾಗುತ್ತದೆ. ಇವುಗಳನ್ನು ನೇರವಾಗಿ ಸಿಸಿಎಂಎಸ್ ಪ್ಯಾನಲ್ಗೆ ಜೋಡಿಸಲಾಗುತ್ತದೆ. ಹೀಗೆ ಅಳವಡಿಕೆಯಾದ ನಂತರ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯಕ್ಕೆ ಅನುಗುಣವಾಗಿ ಅಥವಾ ನಿಗದಿಪಡಿಸಿದ ವೇಳಾಪಟ್ಟಿಯಂತೆ ಈ ದೀಪಗಳು ಸ್ವಯಂಚಾಲಿತವಾಗಿ ಆನ್ ಮತ್ತು ಆಫ್ ಆಗುತ್ತವೆ. ಅಲ್ಲದೆ, ವಿದ್ಯುತ್ ಉಳಿಸಲು ಇವುಗಳಲ್ಲಿ ಬೆಳಕಿನ ತೀವ್ರತೆಯನ್ನು ಕಡಿಮೆ ಮಾಡುವ (ಡಿಮ್ಮಿಂಗ್) ವ್ಯವಸ್ಥೆಯೂ ಇದೆ.ಈ ಸಂಪರ್ಕ ವ್ಯವಸ್ಥೆಯು ಎಲ್ಇಡಿ ಬೀದಿದೀಪಗಳು, ಸಿಸಿಎಂಎಸ್ ಕಂಟ್ರೋಲರ್, ಪ್ಯಾನಲ್, ಸರ್ವಿಸ್ ವೈರ್ಗಳು, ಎಂಸಿಬಿ ಮತ್ತು ಸರ್ಜ್ ಪ್ರೊಟೆಕ್ಷನ್ ಸಾಧನಗಳನ್ನು ಒಳಗೊಂಡಿದ್ದು, ಮುನ್ಸಿಪಲ್ ಎಂಜಿನಿಯರ್ಗಳು ಮೊಬೈಲ್ ಆ್ಯಪ್ ಅಥವಾ ಡ್ಯಾಶ್ಬೋರ್ಡ್ ಮೂಲಕ ವಿದ್ಯುತ್ ಬಳಕೆಯನ್ನು ಮೇಲ್ವಿಚಾರಣೆ ಮಾಡಬಹುದು. ವಿದ್ಯುತ್ ಕಳ್ಳತನವನ್ನು ಪತ್ತೆಹಚ್ಚಬಹುದು ಮತ್ತು ದೂರದಿಂದಲೇ ದೀಪಗಳನ್ನು ನಿಯಂತ್ರಿಸಬಹುದಾದ ಮಹತ್ವದ ಯೋಜನೆ ಇದಾಗಿದೆ.
ಟೆಂಡರ್ ಕರೆದಿಲ್ಲ: 2019ರಲ್ಲಿಯೇ ಅವಳಿ ನಗರದ ಎಲ್ಲ ಬೀದಿದೀಪಗಳನ್ನು ಬದಲಿಸಿ ಎಲ್ಇಡಿ ಬಲ್ಬ್ ಅಳವಡಿಕೆಗೆ ಯೋಜನೆ ರೂಪಿಸಲಾಗಿದೆ. ಆದರೆ ಇದುವರೆಗೂ ಎಲ್ಇಡಿ ಬಲ್ಬಗಳ ಅಳವಡಿಕೆಯಾಗಿಲ್ಲ. ಅದಕ್ಕಾಗಿ ಟೆಂಡರ್ ಕರೆದಿಲ್ಲ, ಇರುವ ಹಳೆಯ ಟ್ಯೂಬ್ ಲೈಟ್ ಗಳನ್ನು ಕೂಡಾ ಸರಿಯಾಗಿ ನಿರ್ವಹಣೆ ಮಾಡುತ್ತಿಲ್ಲ. ಹೊಸ ಟ್ಯೂಬ್ ಲೈಟ್ ಗಳನ್ನು ಹಾಕುತ್ತಿಲ್ಲ. ಒಟ್ಟಿನಲ್ಲಿ ನಗರಸಭೆ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಅವಳಿ ನಗರದ ಜನರು ಬಲಿಯಾಗುತ್ತಿದ್ದಾರೆ ಎಂದು ಜೆಡಿಎಸ್ ಮುಖಂಡ ವಿ.ಆರ್. ಗೋವಿಂದಗೌಡ್ರ ತಿಳಿಸಿದರು.