ನವಲಗುಂದ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ. ಅವುಗಳು ಸರ್ವರೂ ಸಮಾನರು ಎಂಬುದನ್ನು ತೋರಿಸುತ್ತವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ರಾಜಕಾರಣಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಂಪತಿ ಮುಂದೆ ತಮ್ಮ ಮಕ್ಕಳಿಗೆ ಲೇಖನಿ ನೀಡಿ ಅಂಬೇಡ್ಕರ್ ಅವರ ಜ್ಞಾನ, ಬಸವಣ್ಣನವರ ವಚನ ಬೋಧಿಸಬೇಕು. ಬುದ್ಧನ ಆದರ್ಶಗಳ ಕುರಿತು ತಿಳಿಸಬೇಕು. ಕಲ್ಯಾಣ ಕ್ರಾಂತಿಯ ಮೂಲಕ ನವ ಸಮಾಜ ನಿರ್ಮಾಣಕ್ಕೆ ಬಸವೇಶ್ವರರು ಅಡಿಪಾಯ ಹಾಕಿದರು. ಎಲ್ಲರನ್ನೂ ಒಳಗೊಂಡ ಬಸವತತ್ವ ಹಾಗೂ ಶರಣ ತತ್ವ ಅನುಸರಿಸಲು ಪ್ರೇರೇಪಿಸಬೇಕು ಎಂದರು.ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಿರಿವಂತರು, ಬಡವರ ನೆರವಿಗೆ ಧಾವಿಸಿದಾಗ ಜೀವನ ಸಾರ್ಥಕವಾಗುತ್ತದೆ. ತಂದೆ- ತಾಯಿ, ಗುರು ಹಾಗೂ ಸಮಾಜದ ಋಣ ತೀರಿಸಿದಾಗ ಬದುಕಿಗೆ ಅರ್ಥ ಬರುತ್ತದೆ. ದುಡಿದು ಗಳಿಸಿದ ಸಂಪತ್ತಿನಲ್ಲಿ ಇಲ್ಲದವರಿಗೆ ದಾನ ಮಾಡಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಮಾತನಾಡಿದರು. 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಾಮೂಹಿಕ ವಿವಾಹ ಆಯೋಜಕರಾದ ಮಂಜುನಾಥ್ ವೀರಪ್ಪನವರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ತಮಟಗಾರ, ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೇವಾಡಿ, ಮಹಾದೇವ ಚುಂಚನೂರ, ಶಾಂತಮ್ಮ ಗುಜ್ಜಳ, ಸುಭಾಸ್ ದುಬ್ಬದಮಟ್ಟಿ, ಮೋಹನ ಗುಡಿಸಲಮನಿ, ಮಂಜುನಾಥ್ ಮಹಾಂಕಾಳಿ, ಸಧುಗೌಡ ಪಾಟೀಲ್, ಚಂದ್ರಶೇಖರ ಜುಟ್ಟಲ್, ಇಜಾಜ್ ದಂಡಿನ, ಗ್ರಾಮಸ್ಥರು ವಿವಿಧ ಮುಖಂಡರು ಭಾಗವಹಿಸಿದ್ದರು.