ನವಲಗುಂದ: ಸಾಮೂಹಿಕ ವಿವಾಹಗಳು ಬಡವರಿಗೆ ವರದಾನ. ಅವುಗಳು ಸರ್ವರೂ ಸಮಾನರು ಎಂಬುದನ್ನು ತೋರಿಸುತ್ತವೆ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದರು.
ತಾಲೂಕಿನ ಶಾನವಾಡ ಗ್ರಾಮದಲ್ಲಿ ಬುದ್ಧ, ಬಸವ, ಅಂಬೇಡ್ಕರ್ ಜನಜಾಗೃತಿ ವೇದಿಕೆ ಸತೀಶ್ ಜಾರಕಿಹೊಳಿ ಹಾಗೂ ವಿನೋದ ಅಸೂಟಿ ಅಭಿಮಾನಿಗಳಿಂದ ಆಯೋಜಿಸಲಾದ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ನೂತನ ಜೋಡಿಗಳಿಗೆ ಶುಭಕೋರಿ ಮಾತನಾಡಿದರು.ರಾಜಕಾರಣಿಗಳು ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಬಡ ಕುಟುಂಬಗಳಿಗೆ ನೆರವಾಗಬೇಕು ಎಂದು ಸಲಹೆ ನೀಡಿದರು.
ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದಪುರಿ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿ, ಸಿರಿವಂತರು, ಬಡವರ ನೆರವಿಗೆ ಧಾವಿಸಿದಾಗ ಜೀವನ ಸಾರ್ಥಕವಾಗುತ್ತದೆ. ತಂದೆ- ತಾಯಿ, ಗುರು ಹಾಗೂ ಸಮಾಜದ ಋಣ ತೀರಿಸಿದಾಗ ಬದುಕಿಗೆ ಅರ್ಥ ಬರುತ್ತದೆ. ದುಡಿದು ಗಳಿಸಿದ ಸಂಪತ್ತಿನಲ್ಲಿ ಇಲ್ಲದವರಿಗೆ ದಾನ ಮಾಡಬೇಕು ಎಂದರು.
ಶಾಸಕ ಎನ್.ಎಚ್. ಕೋನರಡ್ಡಿ, ಕೆಪಿಸಿಸಿ ಸದಸ್ಯ ವಿನೋದ ಅಸೂಟಿ ಮಾತನಾಡಿದರು. 11 ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿಟ್ಟವು. ಸಾಮೂಹಿಕ ವಿವಾಹ ಆಯೋಜಕರಾದ ಮಂಜುನಾಥ್ ವೀರಪ್ಪನವರ, ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ತಮಟಗಾರ, ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ವಿಕಾಸ ತದ್ದೇವಾಡಿ, ಮಹಾದೇವ ಚುಂಚನೂರ, ಶಾಂತಮ್ಮ ಗುಜ್ಜಳ, ಸುಭಾಸ್ ದುಬ್ಬದಮಟ್ಟಿ, ಮೋಹನ ಗುಡಿಸಲಮನಿ, ಮಂಜುನಾಥ್ ಮಹಾಂಕಾಳಿ, ಸಧುಗೌಡ ಪಾಟೀಲ್, ಚಂದ್ರಶೇಖರ ಜುಟ್ಟಲ್, ಇಜಾಜ್ ದಂಡಿನ, ಗ್ರಾಮಸ್ಥರು ವಿವಿಧ ಮುಖಂಡರು ಭಾಗವಹಿಸಿದ್ದರು.