ಕನ್ನಡಪ್ರಭ ವಾರ್ತೆ ಬೀದರ್ಜಿಲ್ಲೆಯ ಎರೆಡೆರೆಡು ಕಡೆಗಳಲ್ಲಿ ಕಳ್ಳರು ಕೆಲ ಗಂಟೆಗಳ ಅಂತರದಲ್ಲಿಯೇ ಜಿಲ್ಲೆಯ ಎರಡು ರಾಷ್ಟ್ರೀಕೃತ ಬ್ಯಾಂಕ್ನ ಲಕ್ಷಾಂತರ ರುಪಾಯಿ ದೋಚಿ ಪರಾರಿಯಾಗಿರುವ ಘಟನೆ ವರದಿಯಾಗಿದ್ದು, ತೋರಣಾದಲ್ಲಿ ಬ್ಯಾಂಕಿನ ಹಿಂಬದಿ ಕಿಟಕಿ ಮುರಿದು ಒಳನುಗ್ಗಿ 18.63ಲಕ್ಷ ರು. ನಗದು ದೋಚಿದ್ದರೆ ಚಿಟಗುಪ್ಪದಲ್ಲಿನ ಎಸ್ಬಿಐ ಬ್ಯಾಂಕಿನ ಎಟಿಎಂ ಕೊರೆದು ಅದರಲ್ಲಿದ್ದ 7.61ಲಕ್ಷ ರು.ಗಳನ್ನು ಕಳ್ಳತನ ಮಾಡಿರುವ ಘಟನೆ ನಡೆದಿದೆ.
ತೋರಣಾದಲ್ಲಿನ ಎಸ್ಬಿಐ ಬ್ಯಾಂಕಿನ ಕಿಟಕಿ ಕತ್ತರಿಸಿ ಒಳಗೆ ಪ್ರವೇಶಿಸಿ ಸಿಸಿ ಕ್ಯಾಮರಾ ಮತ್ತು ವಿದ್ಯುತ್ ದೀಪಗಳನ್ನು ಆರಿಸಿ ಬ್ಯಾಂಕಿನ ತಿಜೋರಿಯನ್ನು ಗ್ಯಾಸ್ ಕಟರ್ ಹಾಗೂ ಹಾರಿಯಿಂದ ಕತ್ತರಿಸಿ, ಅದರಲ್ಲಿದ್ದ 18,36,793ರು.ಗಳನ್ನು ಹಾಗೂ ಬ್ಯಾಂಕಿನ ಒಂದು ಲಾಕರ್ ಒಡೆದು ಅದರಲ್ಲಿದ್ದ ಚಿನ್ನದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ. ಈ ಕುರಿತಂತೆ ಕಮಲನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
ಇನ್ನು ಚಿಟಗುಪ್ಪ ಪಟ್ಟಣದ ಗೌಂಧಿಚೌಕ್ ಭವಾನಿ ಮಂದಿರದ ಮಾರ್ಗದಲ್ಲಿರುವ ಎಸ್ಬಿಐನ ಡಿಪಾಸಿಟ್ ಮತ್ತು ವಿತ್ಡ್ರಾ ಎಟಿಎಂ ಯಂತ್ರವನ್ನು ಗುರುವಾರ ನಸುಕಿನ ಜಾವ 4ರಿಂದ 6ರ ಹೊತ್ತಿನಲ್ಲಿ ಎಟಿಎಂ ಕೇಂದ್ರದ ಶಟರ್ ಹಾಗೂ ಯಂತ್ರವನ್ನು ಗ್ಯಾಸ್ ಕಟರ್ ಯಂತ್ರದಿಂದ ಕತ್ತರಿಸಿ ಅದರಲ್ಲಿದ್ದ 7,61,500ರು.ಗಳನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.ಸದರಿ ಘಟನಾ ಸ್ಥಳಗಳಿಗೆ ಜಿಲ್ಲಾ ಶ್ವಾನ ದಳ, ಬೆರಳಚ್ಚು ತಜ್ಞರ ತಂಡ ಮತ್ತು ಸುಕೋ ಅಧಿಕಾರಿಗಳು ಭೇಟಿ ನೀಡಿ ಮಾಹಿತಿ ಕಲೆ ಹಾಕಿರುತ್ತಾರೆ. ಈ ಕುರಿತಂತೆ ಚಿಟಗಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಚನ್ನಬಸವಣ್ಣ ಎಸ್.ಎಲ್ ತಿಳಿಸಿದ್ದಾರೆ.
ತೋರಣಾ ಬ್ಯಾಂಕ್ ಕಳ್ಳತನಕ್ಕೆ ಗ್ಯಾಸ್ ಸಿಲೆಂಡರ್ ಬಳಸಿ ಹಾಗೂ ಕಿಟಕಿಯ ಸಲಾಕೆ ಕತ್ತರಿಸಿ ಒಳ ನುಗ್ಗಿ ಸಿಸಿ ಕ್ಯಾಮರಾವನ್ನು ರಾತ್ರಿ 12.55 ನಿಮಿಷಕ್ಕೆ ನಿಲ್ಲಿಸಿದ್ದಾರೆ ಎಂದು ಬ್ಯಾಂಕಿನ ವ್ಯವಸ್ಥಾಪಕ ಭರತಕುಮಾರ್ ಬಿ ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಕಮಲನಗರ ಪೊಲೀಸ್ ಠಾಣೆ ಪಿಎಸ್ಐ ಚಂದ್ರಶೇಖರ ನಿರ್ಣೆ ಭೇಟಿ ನೀಡಿದರು. ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ, ಭಾಲ್ಕಿ ಗ್ರಾಮೀಣ ಸಿಪಿಐ ಜಿಎಸ್ ಬಿರಾದಾರ, ಔರಾದ್ ಸಿಪಿಐ ರಘುವೀರಸಿಂಗ್ ಠಾಕೂರ, ಪಿಎಸ್ಐಗಳಾದ ಪ್ರಭಾಕರ ಪಾಟೀಲ್ ಬೀದರ್ ನಗರ, ಉಪೇಂದ್ರ ಔರಾದ್, ಬೆರಳಚ್ಚು ಪಿಎಸ್ಐ ಸಂತೋಷ ಹಾಗೂ ಜಿಲ್ಲೆಯ ಅಪರಾಧ ತಂಡದ ಸಿಬ್ಬಂದಿ ವರ್ಗದವರು ಹಾಜರಿದ್ದರು.