ಕನ್ನಡಪ್ರಭ ವಾರ್ತೆ ಶಿವಮೊಗ್ಗ
ಕೇಂದ್ರ ಸರ್ಕಾರದ ಪರಿಣಾಮಕಾರಿ ಆಡಳಿತ ಹಾಗೂ ಮೋದಿ ಅವರ ವಿಕಸಿತ ಭಾರತದ ಪರಿಕಲ್ಪನೆಯಿಂದಾಗಿ ರಾಜ್ಯದ ಲಕ್ಷಾಂತರ ಸಾಂಪ್ರದಾಯಿಕ ವೃತ್ತಿಪರ ಕುಟುಂಬಗಳು ಸ್ವಾವಲಂಬಿ ಜೀವನ ರೂಪಿಸಿಕೊಳ್ಳುತ್ತಿದ್ದು, ಪಿಎಂ ವಿಶ್ವಕರ್ಮ ಯೋಜನೆಯ ಗರಿಷ್ಠ ಲಾಭ ಕನ್ನಡಿಗ ಸಾಂಪ್ರದಾಯಿಕ ಕಸುಬುದಾರರು ಮತ್ತು ಕುಶಲಕರ್ಮಿಗಳಿಗೆ ಸಿಗುತ್ತಿದೆ ಎಂದು ಸಂಸದ ಬಿ.ವೈ. ರಾಘವೇಂದ್ರ ಹರ್ಷ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯಲ್ಲಿ 16,000ಕ್ಕೂ ಹೆಚ್ಚು ಕುಶಲಕರ್ಮಿಗಳ ನೋಂದಣಿಯಾಗಿದ್ದು, ಸುಮಾರು 38.63 ಕೋಟಿ ರು. ಮೊತ್ತದ ಸಾಲದ ನೆರವಿನ ಮೂಲಕ ನಮ್ಮ ಮಲೆನಾಡಿನ ಸಾಂಪ್ರದಾಯಿಕ ಕಸುಬುದಾರರ ಮತ್ತು ಕುಶಲಕರ್ಮಿಗಳ ಆರ್ಥಿಕ ಸಬಲೀಕರಣದ ನಿಟ್ಟಿನಲ್ಲಿ ಪರಿಣಾಮಕಾರಿ ಮೈಲಿಗಲ್ಲನ್ನು ಸಾಧಿಸಲಾಗಿದೆ ಎಂದು ರಾಘವೇಂದ್ರ ಹೇಳಿದ್ದಾರೆ.ಲೋಕಸಭೆಯಲ್ಲಿ ಸಂಸದ ರಾಘವೇಂದ್ರ ಅವರಿಗೆ ನೀಡಲಾಗಿರುವ ಅಧಿಕೃತ ಅಂಕಿ-ಅಂಶಗಳ ಪ್ರಕಾರ, ದೇಶದ ಎಲ್ಲಾ ರಾಜ್ಯಗಳನ್ನು ಹಿಂದಿಕ್ಕಿ ಪಿಎಂ ವಿಶ್ವಕರ್ಮ ಯೋಜನೆಯಲ್ಲಿ ಕರ್ನಾಟಕ 5,72,108 ಯಶಸ್ವಿ ನೋಂದಣಿಗಳೊಂದಿಗೆ ದೇಶದಲ್ಲೇ ಪ್ರಥಮ ಸ್ಥಾನದಲ್ಲಿದೆ. ರಾಜ್ಯದಲ್ಲಿ 4,89,114 ಕುಶಲಕರ್ಮಿಗಳು ತರಬೇತಿ ಪೂರ್ಣಗೊಳಿಸಿದ್ದು, 3,84,997 ಜನರಿಗೆ ಆಧುನಿಕ ಟೂಲ್ಕಿಟ್ಗಳನ್ನು ವಿತರಿಸಲಾಗಿದೆ. ಯೋಜನೆಯ ಪ್ರತಿಯೊಂದು ವಿಭಾಗದಲ್ಲೂ ಕರ್ನಾಟಕ ಮೊದಲ ಸ್ಥಾನದಲ್ಲಿದ್ದು, ಈ ಯಶಸ್ವಿ ಯೋಜನೆಯ ಗರಿಷ್ಟ ಲಾಭ ರಾಜ್ಯದ ಕುಶಲಕರ್ಮಿಗಳಿಗೆ ಸಿಗುತ್ತಿದೆ. ಇಷ್ಟೇ ಅಲ್ಲದೆ, ಗ್ಯಾರಂಟಿ ರಹಿತ ಸಾಲ ಸೌಲಭ್ಯ ಒದಗಿಸುವಲ್ಲಿಯೂ ರಾಜ್ಯವೇ ಅಗ್ರಸ್ಥಾನದಲ್ಲಿದ್ದು, ಒಟ್ಟು 1,30,750 ಫಲಾನುಭವಿಗಳಿಗೆ 1,034.29 ಕೋಟಿ ರು. ಸಾಲ ಮಂಜೂರು ಮಾಡಲಾಗಿದೆ. ಇದರಲ್ಲಿ ಈಗಾಗಲೇ 794.15 ಕೋಟಿ ರು. ಮೊತ್ತವನ್ನು ನಮ್ಮ ರಾಜ್ಯದ ಕುಶಲಕರ್ಮಿಗಳ ಖಾತೆಗೆ ನೇರವಾಗಿ ವರ್ಗಾಯಿಸಲಾಗಿದೆ.
--------------------