- ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಡಾ.ಅಮರೇಶ ನುಗಡೋಣಿ ಆಶಯ । ಲೋಗೋ ಉದ್ಘಾಟನೆ
ಕನ್ನಡಪ್ರಭ ವಾರ್ತೆ ದಾವಣಗೆರೆ
ನೂತನವಾಗಿ ಆರಂಭವಾಗಿರುವ ಬೆಣ್ಣೆನಗರಿ ಸಾಹಿತ್ಯ ಸಂಘವು ದಾವಣಗೆರೆ ಜಿಲ್ಲೆಯಾದ್ಯಂತ ದೀರ್ಘಕಾಲ ಸಾಹಿತ್ಯಿಕ ಪರಿಸರವನ್ನು ಸೃಷ್ಠಿ ಮಾಡಲಿ ಎಂದು ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ, ಹಂಪಿ ಕನ್ನಡ ವಿ.ವಿ. ನಿವೃತ್ತ ಪ್ರಾಧ್ಯಾಪಕ ಡಾ.ಅಮರೇಶ ನುಗಡೋಣಿ ಆಶಿಸಿದರು.ನಗರದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಸಹಕಾರದೊಂದಿಗೆ ನೂತನವಾಗಿ ಆರಂಭಗೊಂಡ ಬೆಣ್ಣೆನಗರಿ ಸಾಹಿತ್ಯ ಸಂಘದ ಲೋಗೋ ಉದ್ಘಾಟನೆ ಮಾಡಿ ಅವರು ಮಾತನಾಡಿದರು. ದಾವಣಗೆರೆ ಬೇರೆ ಬೇರೆ ಕಾರಣಗಳಿಂದ ವಾಣಿಜ್ಯ, ಶಿಕ್ಷಣ ಕ್ಷೇತ್ರ, ರಾಜಕಾರಣದಲ್ಲಿ ಹೆಸರುಗಳಿಸಿದೆ. ಆದರೆ, ಸಾಹಿತ್ಯಿಕ ಪರಂಪರೆ ಅನ್ನುವುದು ದಾವಣಗೆರೆಯಲ್ಲಿ ಸಣ್ಣ ಝರಿಯಾಗಿ ನಮಗೆ ಕಾಣಿಸುತ್ತಿದೆ. ಅದು ದೊಡ್ಡಮಟ್ಟದಲ್ಲಿ ಹೆಸರು ಗಳಿಸುವಂತೆ ಆಗಬೇಕಾಗಿದೆ ಎಂದರು.
ಸಾಹಿತ್ಯ ಎನ್ನುವುದು ಎಲ್ಲ ವಿಷಯಗಳ ತಾಯಿಬೇರು. ಅದು ಸಮಾಜ ವಿಜ್ಞಾನ, ಕಲೆಗೂ, ವಿವಿಧ ಕಲೆಗಳಿಗೂ, ಸಾಹಿತ್ಯ ಸಂಸ್ಕೃತಿ ಎನ್ನುವುದು ತಾಯಿಬೇರಾಗಿದೆ. 21ನೇ ಶತಮಾನದಲ್ಲಿ ಕನ್ನಡ ಪರಿಸರ ಉಳಿಸುವುದೇ ದೊಡ್ಡ ಸವಾಲಾಗಿದೆ. ಇತ್ತೀಚೆಗೆ ಇಂಗ್ಲಿಷ್ ಶಾಲೆಗಳು ಬಂದು ನಮ್ಮ ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿಯೇ ಓದಬೇಕು ಎಂಬ ದೊಡ್ಡ ಕನಸು ಪೋಷಕರದ್ದಾಗಿದೆ. ಅದನ್ನು ನಾವು ಕಡಿಮೆ ಮಾಡಲು ಸಾಧ್ಯವಿಲ್ಲ. ಅದು ದಿನನಿತ್ಯ ಯಾರೂ ಅದಕ್ಕೆ ಪ್ರೋತ್ಸಾಹ ಕೊಡದಿದ್ದರೂ ಅದು ಬೆಳೆಯುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಬೆಣ್ಣೆ ನಗರಿ ಸಾಹಿತ್ಯ ಸಂಘದ ಸಂಚಾಲಕರಾದ ಕೆ.ಪಿ. ಅಣಬೇರು ತಾರೇಶ, ಫಕೀರೇಶ ಆದಾಪುರ, ಬಿ.ಎಂ.ಜಿ.ವೀರೇಶ, ಸುನಿತಾ ಪ್ರಕಾಶ, ಸ್ಪೂರ್ತಿ ಪ್ರಕಾಶನದ ಎಂ.ಬಸವರಾಜ, ಕೆ.ಮೋಹನ, ಜೆ.ಬಿ.ನೂರ್ ಜಹಾನ್, ಶೋಭಾ ಮಂಜುನಾಥ, ಉಮೇಶ ತಾಳಿಕಟ್ಟೆ, ಮಾಲತೇಶ ಬಬ್ಬಜ್ಜಿ, ಎಚ್.ಟಿ.ರಾಧಾ ಇತರರು ಇದ್ದರು. ಶಿಕ್ಷಕ ಕಡೂರಿನ ಹಿರೇನಲ್ಲೂರು ಶ್ರೀನಿವಾಸ ಪ್ರಾರ್ಥಿಸಿದರು. ಕಾರ್ಯಕ್ರಮದಲ್ಲಿ ಸಂಘದ ನೂತನ ಪದಾಧಿಕಾರಿಗಳಿಗೆ ಪದಗ್ರಹಣ ಮಾಡಲಾಯಿತು.
(ಬಾಕ್ಸ್) * ಗಡಿನಾಡುಗಳಲ್ಲಿ ಕನ್ನಡ ಕಲಿಕೆಗೆ ಪ್ರೋತ್ಸಾಹ ಸಿಗುತ್ತಿಲ್ಲ ಕನ್ನಡ ಮಾಧ್ಯಮದ ಶಾಲೆಗಳನ್ನು ಉದ್ದಾರ ಮಾಡುವ, ಬೆಳೆಸುವ ಅಗತ್ಯ ಈ ಕಾಲದಲ್ಲಿ ಹೆಚ್ಚಿದ್ದರೂ ಕೂಡಾ ಯಾರು ಬೆಳೆಸಬೇಕು ಎನ್ನುವುದು ಒಂದು ಚರ್ಚೆಯಾಗಿದೆ. ಗಡಿನಾಡುಗಳಲ್ಲಿ ಕನ್ನಡ ಪರಿಸರ ಬೇಕಾದಷ್ಟಿದೆ, ಅವರಿಗೆ ಕನ್ನಡ ಕಲಿಯಬೇಕೆನ್ನುವ ಅಗತ್ಯವಿದೆ. ಆದರೆ, ಪ್ರೋತ್ಸಾಹ ಇಲ್ಲ. ಬೆಣ್ಣೆನಗರಿ ಸಾಹಿತ್ಯ ಸಂಘ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಾಹಿತ್ಯ ಬೆಳೆಯುತ್ತೆ ಎಂದು ಹೇಳಲಾಗುವುದಿಲ್ಲ. ಕಲೆ, ಸಾಹಿತ್ಯ, ಸಂಸ್ಕೃತಿ ಗೆ ಸಂಬಂಧಿಸಿದಂತಹ ಸುಪ್ತ ಪ್ರತಿಭೆಗಳನ್ನು ಗುರುತಿಸುವಂತಹ ಕೆಲಸಗಳನ್ನು, ದಾವಣಗೆರೆಯ ಬೆಣ್ಣೆನಗರಿಯನ್ನು ಸಾಹಿತ್ಯ ನಗರಿಯನ್ನಾಗಿ ರೂಪಿಸಲು ನೂತನವಾಗಿ ಆರಂಭವಾಗಿರುವ ಈ ಬೆಣ್ಣೆನಗರಿ ಸಾಹಿತ್ಯ ಸಂಘ ಮಾಡಲಿ ಎಂದು ಡಾ.ಅಮರೇಶ ನುಗಡೋಣಿ ಹೇಳಿದರು.
-14ಕೆಡಿವಿಜಿ36: ದಾವಣಗೆರೆಯಲ್ಲಿ ಬೆಣ್ಣೆನಗರಿ ಸಾಹಿತ್ಯ ಸಂಘದ ಲೋಗೋವನ್ನು ಸಾಹಿತಿ ಡಾ.ಅಮರೇಶ ನುಗಡೋಣಿ ಉದ್ಘಾಟನೆ ಮಾಡಿದರು.-14ಕೆಡಿವಿಜಿ37: ದಾವಣಗೆರೆಯಲ್ಲಿ ಬೆಣ್ಣೆನಗರಿ ಸಾಹಿತ್ಯ ಸಂಘದ ಉದ್ಘಾಟನಾ ಕಾರ್ಯಕ್ರಮವನ್ನು ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ ಉದ್ಘಾಟಿಸಿದರು.