ಹಿಂದುಳಿದ ವರ್ಗಗಳ ಸಮಾಜಕ್ಕೆ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮೇದಾರ ಸಮಾಜವನ್ನು ಸದೃಢವಾಗಿ ಮಾಡಿದಾಗ ಮಾತ್ರ ಇಂತಹ ಕಾರ್ಯಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಚಿತ್ರದುರ್ಗದ ಮೇದಾರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಹೇಳಿದರು.
ಹಿರೇಕೆರೂರು: ಹಿಂದುಳಿದ ವರ್ಗಗಳ ಸಮಾಜಕ್ಕೆ ಸರ್ಕಾರ ಅನೇಕ ಸೌಲಭ್ಯಗಳನ್ನು ಕಲ್ಪಿಸಿದ್ದು, ಅವುಗಳನ್ನು ಸಮರ್ಪಕವಾಗಿ ಸದ್ಬಳಕೆ ಮಾಡಿಕೊಂಡು ಆರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಿಕವಾಗಿ ಹಿಂದುಳಿದ ಮೇದಾರ ಸಮಾಜವನ್ನು ಸದೃಢವಾಗಿ ಮಾಡಿದಾಗ ಮಾತ್ರ ಇಂತಹ ಕಾರ್ಯಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಚಿತ್ರದುರ್ಗದ ಮೇದಾರ ಗುರುಪೀಠದ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಹೇಳಿದರು.ಪಟ್ಟಣದ ವಿಜಯನಗರದ ಮೇದಾರ ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡ ಮಲಿಯಮ್ಮದೇವಿಯ ದೇವಸ್ಥಾನದ ಉದ್ಘಾಟನೆಯನ್ನು ನೆರವೇರಿಸಿ, ನಂತರ ನಡೆದ ಧರ್ಮಸಭೆಯಲ್ಲಿ ಅವರು ಆಶೀರ್ವಚನ ನೀಡಿದರು.
ದೇವನೊಬ್ಬ ನಾಮ ಹಲವು, ಸಮಾಜದಲ್ಲಿ ಅತಿ ಹಿಂದುಳಿದ ಮೇದಾರ ಸಮಾಜ ಬಹಳಷ್ಟು ಅಭಿವೃದ್ಧಿಯಾಗಬೇಕಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಶಿಕ್ಷಣ ಪಡೆಯುವ ಮೂಲಕ ಉನ್ನತ ಹುದ್ದೆಗಳನ್ನು ಅಲಂಕರಿಸಬೇಕು. ಇಂದು ಟಿ.ವಿ. ಮೊಬೈಲ್ ಮತ್ತು ಜೀವಕ್ಕೆಕುತ್ತು ತರುವ ಹವ್ಯಾಸಗಳ ದಾಸರಾಗಿ ಇಳಿ ವಯಸ್ಸಿನಲ್ಲಿ ಆರೋಗ್ಯ ಹಾಳು ಮಾಡಿಕೊಳ್ಳುವುದನ್ನು ಬಿಟ್ಟು, ಆರೋಗ್ಯವಂತ ಸಮಾಜದ ಜತೆಗೆ, ಶಿಕ್ಷಣ ಪಡೆಯುವ ಮೂಲಕ ಪ್ರತಿಯೊಂದು ಮನೆಯಲ್ಲಿ ಒಬ್ಬರಾದರು ನೌಕರಿಯನ್ನು ಹೊಂದಬೇಕು. ಅಂದಾಗ ಮಾತ್ರ ಈ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಮುಂದೆ ಬರುತ್ತದೆ ಎಂದರು.ದಿವ್ಯಸಾನಿಧ್ಯ ವಹಿಸಿದ್ದ ರಟ್ಟೀಹಳ್ಳಿ ಕಬ್ಬಿಣಕಂತಿಮಠದ ಶಿವಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ಮೇದಾರ ಸಮಾಜದ ಎಲ್ಲರೂ ಧರ್ಮದ ತಳಹದಿಯ ಬದುಕನ್ನು ರೂಪಿಸಿಕೊಳ್ಳುವ ಮೂಲಕ ಇತರೆ ಸಮಾಜದ ಜನರಿಗೆ ಮಾದರಿಯಾಗಬೇಕಿದೆ. ಅಲ್ಪಸಂಖ್ಯಾತರಾದ ಈ ಸಮಾಜ ಎಲ್ಲ ಕ್ಷೇತ್ರಗಳಲ್ಲಿ ಭಾಗಿಯಾಗುವ ಮೂಲಕ, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮುನ್ನುಡಿಯಾಗಬೇಕಿದೆ. ಎಲ್ಲರಿಗೂ ಶಿಕ್ಷಣ ಅವಶ್ಯವಿದ್ದು, ಇದರಿಂದ ವಂಚಿತರಾಗದೇ, ಸಿಕ್ಕ ಅವಕಾಶವನ್ನು ಸದ್ಬಳಕೆ ಮಾಡಿಕೊಂಡು ಉನ್ನತ ಹುದ್ದೆಅಲಂಕರಿಸಬೇಕು ಎಂದರು.ಇದಕ್ಕೂ ಮುನ್ನ ದೇವಸ್ಥಾನದ ವಾಸ್ತು ಶಾಂತಿ, ಪ್ರವೇಶ ಮಹೋತ್ಸವ, ನಂತರ ಮಲಿಯಮ್ಮದೇವಿಗೆ ಅಭಿಷೇಕ, ಹೋಮ ಮತ್ತು ವಿವಿಧ ಧಾರ್ಮಿಕ ಕೈಂಕರ್ಯಗಳು ನೆರವೇರಿಸಲಾಯಿತು.ಮೇದಾರ ಕೇತೇಶ್ವರ ಸಮಾಜದ ಅಧ್ಯಕ್ಷ ಪ್ರಕಾಶ ನೆಗಳೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಬೆಂಗಳೂರು ಅಪೆಕ್ಸ್ ಬ್ಯಾಂಕ್ ನಿರ್ದೇಶಕ ಲಿಂಗರಾಜ ಚಪ್ಪರದಳ್ಳಿ, ಉದ್ಯಮಿ ಬಾಲು ಜನ್ನು, ಸಮಾಜ ಸೇವಕ ಪ್ರಕಾಶಗೌಡ ಗೌಡರ, ಶಂಭುಲಿಂಗ ತಂಬಾಕದ, ಮಂಜುನಾಥ ತಂಬಾಕದ, ಶೈಲೇಶ ಹೆಬ್ಬಳ್ಳಿ, ಮೈಲಾರಿ ಮೇದಾರ, ಶಿವಪ್ಪ ಮೇದಾರ, ಗುರುಮೂರ್ತಿ ಮೇದಾರ, ಹನುಮಂತಪ್ಪ ಮೇದಾರ, ಉಷಾ ಮೇದಾರ, ಪ್ರಸನ್ನ ಮೇದಾರ, ಫಕ್ಕೀರಪ್ಪ ಮೇದಾರ ಹಾಗೂ ಸಮಾಜದವರುಇದ್ದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.