ಧಾರವಾಡದಲ್ಲಿ ಅರ್ಥಪೂರ್ಣ ಬಸವ ಜಯಂತಿ ಆಚರಣೆ

KannadaprabhaNewsNetwork |  
Published : May 11, 2024, 12:35 AM IST
10ಡಿಡಬ್ಲೂಡಿ1ಜಿಲ್ಲಾಡಳಿತ ಹಾಗೂಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಆಯೋಜಿಸಿದ್ದ ಬಸವೇಶ್ವರ ಹಾಗೂ ಹೇಮರಡ್ಡಿ ಮಲ್ಲಮ್ಮ ಜಯಂತಿಯಲ್ಲಿ ಜಿಲ್ಲಾಧಿಕಾರಿ ದಿವ್ಯಪ್ರಭು ಇಬ್ಬರೂ ಮಹಾನ್‌ ವ್ಯಕ್ತಿಗಳಿಗೆ ನಮಿಸಿದರು.  | Kannada Prabha

ಸಾರಾಂಶ

ಜಿಲ್ಲಾಧಿಕಾರಿ ದಿವ್ಯಪ್ರಭು ಇಬ್ಬರೂ ಮಹಾನ್‌ ವ್ಯಕ್ತಿಗಳ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪಾರ್ಚಣೆ ಸಲ್ಲಿಸಿ, ನಮಿಸಿದರು. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು.

ಕನ್ನಡಪ್ರಭ ವಾರ್ತೆ ಧಾರವಾಡ

ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಜಗಜ್ಯೋತಿ ಶ್ರೀ ಬಸವೇಶ್ವರ ಜಯಂತಿ ಹಾಗೂ ಶಿವಶರಣೆ ಶ್ರೀ ಹೇಮರಡ್ಡಿ ಮಲ್ಲಮ್ಮ ಜಯಂತಿ ಆಚರಿಸಲಾಯಿತು.

ಜಿಲ್ಲಾಧಿಕಾರಿ ದಿವ್ಯಪ್ರಭು ಇಬ್ಬರೂ ಮಹಾನ್‌ ವ್ಯಕ್ತಿಗಳ ಭಾವಚಿತ್ರಕ್ಕೆ ಪೂಜೆಯೊಂದಿಗೆ ಪುಷ್ಪಾರ್ಚಣೆ ಸಲ್ಲಿಸಿ, ನಮಿಸಿದರು. ಚುನಾವಣೆ ನೀತಿ ಸಂಹಿತೆ ಹಿನ್ನಲೆಯಲ್ಲಿ ಸರಳವಾಗಿ ಆಚರಿಸಲಾಯಿತು. ಪೊಲೀಸ್ ಆಯುಕ್ತರಾದ ರೇಣುಕಾ ಸುಕುಮಾರ್, ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಗೋಪಾಲ್ ಬ್ಯಾಕೋಡ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಕುಮಾರ ಬೆಕ್ಕೇರಿ, ಸಮಾಜದ ಮುಖಂಡರು ಇದ್ದರು.

ಕೃಷಿ ವಿವಿ

ವಿಶ್ವಗುರು ಜಗಜ್ಯೋತಿ ಬಸವಣ್ಣನವರು 12ನೇ ಶತಮಾನದ ಮಹಾನ್ ಮಾನವೀಯ ನಾಯಕ ಎಂದು ನಿವೃತ್ತ ಪ್ರಾಧ್ಯಾಪಕರಾದ ಡಾ. ವಿಜಯಲಕ್ಷ್ಮೀ ಅಮಿನಭಾವಿ ಹೇಳಿದರು. ಮನೋವಿಜ್ಞಾನಕ್ಕೆ ಬಸವಣ್ಣನವರ ವಚನಗಳ ಕೊಡುಗೆ ಕುರಿತು ಕೃಷಿ ವಿವಿಯಲ್ಲಿ ನಡೆದ ಜಯಂತಿಯಲ್ಲಿ ಅವರು, ಮಾತನಾಡಿ, ಮನೋವಿಜ್ಞಾನದ ಪ್ರಕಾರ ವಚನಗಳಲ್ಲಿ ಕಂಡು ಬರುವ ಐದು ವಿಭಾಗಗಳಾದ ಭಕ್ತಿ-ಭಾವ, ಆತ್ಮ ನಿವೇದನೆ, ಅನುಭವ-ಅನುಭಾವ್ಯ, ಅಂತರಂಗ ಶುದ್ಧಿಗಳ ಕುರಿತು ಮಾತನಾಡಿ, ಇಡೀ ಜೀವನವನ್ನೇ ಒಂದು ಪ್ರಯೋಗಾಲಯವನ್ನು ಮಾಡಿದ ಬಸವಣ್ಣನವರು ಜ್ಞಾನದ ಮಹತ್ವವನ್ನು ಜಗತ್ತಿಗೆ ಸಾರಿದರು ಎಂದರು.

ಕುಲಸಚಿವರಾದ ಜಯಲಕ್ಷ್ಮೀ ರಾಯಕೊಡ್ ಸ್ವಾಗತಿಸಿದರು. ಡಾ. ಐ.ಕೆ. ಕಾಳಪ್ಪನವರ ವಂದಿಸಿದರು. ಪ್ರಾಧ್ಯಾಪಕ ಡಾ. ಬಸವರಾಜ ಏಣಗಿ ನಿರೂಪಿಸಿದರು. ಅಧಿಕಾರಿಗಳು, ಪ್ರಾಧ್ಯಾಪಕರು ಇದ್ದರು.

ಕರ್ನಾಟಕ ವಿದ್ಯಾವರ್ಧಕ ಸಂಘ

ಕರ್ನಾಟಕ ವಿದ್ಯಾವರ್ಧಕ ಸಂಘ ಬಸವ ಜಯಂತಿ ಅಂಗವಾಗಿ ಪ್ರಸ್ತುತ ಸಂದರ್ಭದಲ್ಲಿ ಬಸವಣ್ಣನವರ ಕಾಯಕದ ಮಹತ್ವ ವಿಷಯ ಕುರಿತು ಉಪನ್ಯಾಸ ಆಯೋಜಿಸಿತ್ತು. ಕಾಯಕ ಪರಿಕಲ್ಪನೆ ಬಸವಣ್ಣನವರು ವಿಶ್ವಕ್ಕೆ ನೀಡಿದ ಅಮೂಲ್ಯ ಕೊಡುಗೆ. ಕಾಯಕ ಸಮಾಜದ ಹಿತವನ್ನು ಬಯಸುವಂತಿರಬೇಕು. ಅದು ಸತ್ವಯುತ ಹಾಗೂ ಶುದ್ಧವಾಗಿರಬೇಕು ಎಂದು ವಿಶ್ರಾಂತ ಪೊಲೀಸ್ ಅಧಿಕಾರಿ ಗಿರೀಶ ಕಾಂಬಳೆ ಹೇಳಿದರು.

ಬಸವಣ್ಣನವರು ದೇಶ ಮತ್ತು ಕಾಲಾತೀತ ವ್ಯಕ್ತಿ. ಬುದ್ಧನ ನಂತರ ಬಸವಣ್ಣನವರು ಸಮಾನತೆ ಹಾಗೂ ಮಹಿಳಾ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ಮಹಾನ್ ಚೇತನ. ಕಾಯಕ ನಮ್ಮನ್ನು ಬಲಿಷ್ಠರನ್ನಾಗಿ ಮಾಡುತ್ತದೆ. ಜೊತೆಗೆ ಉತ್ತಮ ವ್ಯಕ್ತಿತ್ವ ರೂಪಿಸುವ ಪ್ರಬಲ ಮಾಧ್ಯಮವಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಸಂಘದ ಉಪಾಧ್ಯಕ್ಷರಾದ ಪ್ರೊ. ಮಾಲತಿ ಪಟ್ಟಣಶೆಟ್ಟಿ, ಶರಣರು ಸ್ತ್ರೀ-ಪುರುಷ ಹಾಗೂ ಜಾತಿ, ಮಥ, ಪಂಥ ಎಂಬ ಬೇಧಭಾವ ಖಂಡಿಸಿ ಸಮಾನತೆಯ ಸಂದೇಶ ಸಾರಿದರು. ಜಗತ್ತಿನ ಎಲ್ಲ ಧರ್ಮದ ತಿರುಳು ದಯೇ, ಮಾನವೀಯತೆ ಹಾಗೂ ಪರೋಪಕಾರದಂತಹ ನೈತಿಕ ನೆಲೆಗಟ್ಟಿನ ಮೇಲೆ ರೂಪಗೊಂಡಿವೆ. ನಾವು ಮಾಡುವ ಕಾಯಕದಲ್ಲಿ ದೇವರನ್ನು ಕಾಣಬೇಕು ಎಂದರು. ವೀರಣ್ಣ ಒಡ್ಡೀನ, ಶಂಕರ ಹಲಗತ್ತಿ, ಡಾ. ಧನವಂತ ಹಾಜವಗೋಳ, ಗುರು ಹಿರೇಮಠ ಇದ್ದರು.

ಎಸ್‌ಜೆಎಂವಿ ಕಾಲೇಜು

ರಾಯಾಪುರದ ಎಸ್.ಜೆ.ಎಂ.ವಿ. ಮಹಾಂತ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಕಾಲೇಜಿನಲ್ಲಿ ಶುಕ್ರವಾರ ವಿಶ್ವ ಗುರು ಜಗಜ್ಯೋತಿ ಬಸವೇಶ್ವರ ಜಯಂತಿಯನ್ನು ವಿದ್ಯಾರ್ಥಿ ಒಕ್ಕೂಟದ ಸಾಂಸ್ಕೃತಿಕ ಸಂಘ ಹಾಗೂ ಎನ್‌ಎಸ್ಸೆಸ್‌ ಘಟಕದ ಸಹಯೋಗದಲ್ಲಿ ಆಚರಿಸಲಾಯಿತು. ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಶಾಂತಯ್ಯ ಕೆ. ಎಸ್., ಹಾಗೂ ಕಾಲೇಜು ಕಚೇರಿ ಅಧಿಕ್ಷಕ ಪಿ.ಎಸ್. ಹಿರೇಮಠ ಮಾತನಾಡಿದರು. ಕೆ.ಎಸ್. ಮೇಲಮಾಳಗಿ, ಸಿ.ಕೆ. ಹುಬ್ಬಳ್ಳಿ, ಎಂ.ಬಿ. ಅಳಗವಾಡಿ ಇದ್ದರು.

ಎಂಜಿನೀಯರ್‌ ಸಂಘ

ಉತ್ತರ ಕರ್ನಾಟಕ ಸಿವಿಲ್‌ ಎಂಜಿನಿಯರ್ಸ್‌ ಸಂಘದಿಂದ ಶುಕ್ರವಾರ ಬಸವ ಜಯಂತಿ ಆಚರಿಸಲಾಯಿತು. ಜಯಂತಿಯ ನಿಮಿತ್ತ ಮೆರವಣಿಗೆ ನಡೆಯಿತು. ಸಂಘದ ಅಧ್ಯಕ್ಷ ಸುಭಾಸ ಪಾಟೀಲ ಬಸವ ಮೂರ್ತಿಗೆ ಮಾಲಾರ್ಪಣೆ ಮಾಡಿದರು. ಪ್ರಶಾಂತ ಬೆಲ್ಲದ, ಸಿದ್ದನಗೌಡ ಪಾಟೀಲ ಇದ್ದರು.

ಚನ್ನಬಸವೇಶ್ವರ ನಗರ

ಇಲ್ಲಿಯ ಲಿಂಗಾಯತ ಭವನದಲ್ಲಿ ವಿಶ್ವಗುರು ಬಸವಣ್ಣನವರ 891 ನೇ ಜಯಂತಿಯನ್ನು ಶುಕ್ರವಾರ ಆಚರಿಸಲಾಯಿತು. ಗುರು ಬಸವೇಶ್ವರರ ಭಾವಚಿತ್ರಕ್ಕೆ ಬಸವಂತಪ್ಪ‌ ತೋಟದ ನೇತೃತ್ವದಲ್ಲಿ ಪೂಜೆ, ವಚನ ಗಾಯನ ನಡೆಯಿತು. ಬಸವೇಶ್ವರರು ಬೋಧಿಸಿದ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಪ್ರಸಕ್ತ ಸನ್ನಿವೇಶದಲ್ಲಿ ಅತ್ಯವಶ್ಯವಾಗಿದೆ ಎಂದು ಗಣ್ಯರು ಸ್ಮರಿಸಿದರು.

ಅಖಿಲ ಭಾರತ ಲಿಂಗಾಯತ- ವೀರಶೈವ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಶಿವಶರಣ ಕಲಬಶೆಟ್ಟರ್, ಕೋಶಾಧ್ಯಕ್ಷ ಎಸ್.ಬಿ. ಗೋಲಪ್ಪನವರ, ಬಸವ ಕೇಂದ್ರದ ಶಿವಣ್ಣ ಶರಣ್ಣವರ ಮತ್ತಿತರರು ಇದ್ದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಮಾನಸಿಕ ಖಿನ್ನತೆ ಸ್ವಯಂ ಮೌಲ್ಯಮಾಪನಕ್ಕೆ ನಿಮ್ಹಾನ್ಸ್‌ ಆ್ಯಪ್‌
ಒಂದೇ ದಿನ ಜಡ್ಜ್‌ ಮುಂದೆ 60 ಪರೋಲ್‌ ಅರ್ಜಿ!