ರಟ್ಟೀಹಳ್ಳಿ: ಅಧಿಕಾರ ಇರಲಿ, ಇರದಿರಲಿ. ಪ್ರತಿವರ್ಷದಂತೆ ಈ ವರ್ಷವೂ ಸೆ. 19ರಂದು ಬೆಳಗ್ಗೆ 11 ಗಂಟೆಗೆ ತುಂಗಾ ಮೇಲ್ದಂಡೆ ಕಾಲುವೆಗೆ ಪಕ್ಷದ ಕಾರ್ಯಕರ್ತರು, ಹಿತೈಷಿಗಳು ಹಾಗೂ ನೂರಾರು ಬೆಂಗಲಿಗರೊಂದಿಗೆ ಬಾಗಿನ ಅರ್ಪಿಸಲಾಗುವುದು ಎಂದು ಶಾಸಕ ಯು.ಬಿ. ಬಣಕಾರ ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಳೆದ ವರ್ಷ ರಟ್ಟೀಹಳ್ಳಿ ಕಬ್ಬಿಣಕಂತಿ ಮಠದ ಶ್ರೀಗಳ ನೇತೃತ್ವದಲ್ಲಿ ಬಾಗಿನ ಅರ್ಪಿಸುವ ಸಂದರ್ಭದಲ್ಲಿ ನೀಡಿದ ವಾಗ್ದಾನದಂತೆ ₹39 ಕೋಟಿ ವೆಚ್ಚದಲ್ಲಿ ಕಾಲುವೆ ಅಭಿವೃದ್ಧಿ ಹಾಗೂ ಸಿಸಿ ರಸ್ತೆ ನಿರ್ಮಾಣ ಮಾಡಲಾಗಿದೆ. ಮದಗ- ಮಾಸೂರ ಕೆರೆ ಅಭಿವೃದ್ಧಿಗೆ ₹52 ಕೋಟಿ ಹಣದಲ್ಲಿ ಅಭಿವೃದ್ಧಿ ಕಾರ್ಯ ಪ್ರಾರಂಭವಾಗಿದೆ ಎಂದರು.ಸಿದ್ದರಾಮಯ್ಯನವರು ತಾಲೂಕಿನ ಅಭಿವೃದ್ದಿಗಾಗಿ ₹25 ಕೋಟಿ ನೀಡಿದ್ದು, ಅದರಲ್ಲಿ ಪಟ್ಟಣದ ಆರಾಧ್ಯ ದೈವ ವೀರಭದ್ರೇಶ್ವರ ದೇವಸ್ಥಾನಕ್ಕೆ ₹25 ಲಕ್ಷ ನೀಡಿದ್ದು, ಅದರ ಪೂಜಾ ಕಾರ್ಯಕ್ರಮದ ಜತೆ ಮಹಾಲಕ್ಷ್ಮೀ ದೇವಸ್ಥಾನಕ್ಕೆ ₹10 ಲಕ್ಷ ಹಣ ನೀಡಿದ್ದು, ಅದರಲ್ಲಿ ವಿವಿಧ ಕಾಮಗಾರಿಗೆ ಪೂಜೆ ಮತ್ತು ಸಿಸಿ ರಸ್ತೆ ಉದ್ಘಾಟನೆ ಹಾಗೂ ಶುಕ್ರವಾರ ಬೆಳಗ್ಗೆ 10 ಗಂಟೆಗೆ ಮಕರಿ ಗ್ರಾಮದಲ್ಲಿ ₹20 ಲಕ್ಷ ವೆಚ್ಚದ ವಾಲ್ಮೀಕಿ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಪಿ.ಡಿ. ಬಸನಗೌಡ್ರ, ವಸಂತ ದ್ಯಾವಕ್ಕಳವರ, ಹನುಮಂತಗೌಡ ಭರಮಣ್ಣನವರ, ರವಿ ಮುದಿಯಪ್ಪನವರ, ಮಹೇಶ ಗುಬ್ಬಿ, ವೀರನಗೌಡ ಪ್ಯಾಟಿಗೌಡ್ರ, ನಿಂಗಪ್ಪ ಚಳಗೇರಿ, ನಾಗನಗೌಡ ಕೋಣ್ತಿ, ವಿಜಯ ಅಂಗಡಿ, ಕಿರಣ ವಾಲ್ಮೀಕಿ, ಸರ್ಫರಾಜ ಮಾಸೂರ, ಜಾಕೀರ ಮುಲ್ಲಾ, ಮಂಜು ಮಾಸೂರ, ಅಮೃತಾ ಯತ್ನಳ್ಳಿ, ಮಂಜುಳಾ, ಸುನೀತಾ ದ್ಯಾವಕ್ಕಳವರ, ಬೀರೇಶ ಕರಡೆಣ್ಣನವರ, ರಮೇಶ ಭೀಮಪ್ಪನವರ, ನಾರಾಯಣಪ್ಪ ಗೌರಕ್ಕನವರ ಮುಂತಾದವರು ಇದ್ದರು.