ಕನ್ನಡಪ್ರಭ ವಾರ್ತೆ, ಶಿವಮೊಗ್ಗ ದಾರ್ಶನಿಕ ಸಂತ, ಗುರು ಬಸವಣ್ಣ ಅವರ ವಿಶ್ವಮಾನ್ಯ ಸಂದೇಶಗಳನ್ನು ಶ್ರೇಷ್ಠ ಸನ್ಯಾಸಿನಿ, ಶ್ರೀ ಮಾತೆ ಮಹಾದೇವಿ ಅವರು ವಿಶ್ವಾದ್ಯಂತ ಪ್ರಸರಿಸಿದರು ಎಂದು ಕೂಡಲ ಸಂಗಮ ಬಸವಧರ್ಮ ಪೀಠದ ಹಿರಿಯ ಧರ್ಮ ಪ್ರಚಾರಕಿ ಶರಣೆ ಶಾಂತಮ್ಮ ಹೇಳಿದರು.
ಸ್ತ್ರೀಯರಿಗೆ ಧಾರ್ಮಿಕ, ಸಾಮಾಜಿಕ ಸ್ವಾತಂತ್ರ್ಯ ನೀಡುವಲ್ಲಿ ಎದುರಾದ ಸಂದಿಗ್ಧತೆಯ ದಿನಗಳಲ್ಲಿ ಸ್ತ್ರೀ ಸಮಾನತೆ ಧ್ವನಿಯಾಗಿ ಅವರು ನಿರ್ವಹಿಸಿದ ರಚನಾತ್ಮಕ ಕಾರ್ಯಗಳು ಜಗತ್ತಿಗೆ ಆದರ್ಶನೀಯ ಎಂದರು.
ಜಗತ್ತಿನ ಮೊಟ್ಟಮೊದಲ ಮಹಿಳಾ ಜಗದ್ಗುರು ಪೀಠಾಧ್ಯಕ್ಷರಾಗಿ ಜಗತ್ತಿನ ಗಮನ ಸೆಳೆಯುವುದರ ಮೂಲಕ ಅವರು ಸ್ತ್ರೀ ಸ್ವಾತಂತ್ರ್ಯದ ಅಭಿವ್ಯಕ್ತತೆಯ ಸಾಕಾರ ರೂಪವಾಗಿದ್ದು ಒಂದು ಇತಿಹಾಸ. ಮಾತೆಯವರ ಸಮಾಜಮುಖಿ ಕಾರ್ಯಗಳು ಅನುಪಮವಾಗಿವೆ ಎಂದರು.ಕೈಗಾರಿಕೋದ್ಯಮಿ ಹಾಲಪ್ಪ ಮಾತನಾಡಿ, ಮಾತೆಯವರು ಅಸಂಖ್ಯಾತ ಸಮಸ್ಯೆಗಳನ್ನು ತಮ್ಮ ಬದುಕಿನಲ್ಲಿ ಎದುರಿಸಿದರು. ಆ ಮೂಲಕ ಸಮಾಜದಲ್ಲಿ ಪರಮ ಸತ್ಯತತ್ವಗಳನ್ನು ಪ್ರತಿಪಾದಿಸಿದವರು ಎಂದರು.
ಕಾರ್ಯಕ್ರಮದಲ್ಲಿ ಬಾಳಾನಂದ ಪ್ರಾರ್ಥಿಸಿ, ಯೋಗೀಶ್ ನಿರ್ವಿಕಲ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ರಾಂತ ಸಹಾಯಕ ಅಭಿಯಂತರರಾದ ಎ.ಸಿ.ಮೂಲಿಮನಿ, ಶಿವರುದ್ರಪ್ಪ, ಲತಾ, ರತ್ನಮ್ಮ ವಿರೂಪಾಕ್ಷಪ್ಪ ಮುಂತಾದವರಿದ್ದರು.- - - -ಫೋಟೋ:
ಶಿವಮೊಗ್ಗದಲ್ಲಿ ರಾಷ್ಟ್ರೀಯ ಬಸವದಳ ಟ್ರಸ್ಟ್ ಬಸವ ಮಂಟಪದಲ್ಲಿ ಆಯೋಜಿಸಿದ್ದ ಕೂಡಲ ಸಂಗಮ ಬಸವ ಧರ್ಮ ಪೀಠದ ದ್ವಿತೀಯ ಪೀಠಾಧ್ಯಕ್ಷರಾಗಿದ್ದ ಶ್ರೀ ಮಾತೆ ಮಹಾದೇವಿಯವರ 78ನೇ ಜಯಂತ್ಯುತ್ಸವ ಉದ್ಘಾಟನೆ ನಡೆಯಿತು.