ಚನ್ನಗಿರಿ: ತಾಲೂಕಿನ ನಲ್ಲೂರು ಗ್ರಾಮದಲ್ಲಿರುವ ಕೃಷಿ ಪತ್ತಿನ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯು ಈಗಾಗಲೇ ನಿಗದಿ ಪಡಿಸಿದ್ದ ದಿನಾಂಕವಾದ ಜ.12ರಂದು ನಡೆಯಲಿದೆ ಎಂದು ಚುನಾವಣಾಧಿಕಾರಿ ಸತೀಶ್ ನಾಯ್ಕ್ ತಿಳಿಸಿದ್ದಾರೆ.
ಸಾಲಗಾರರಲ್ಲದ ಕ್ಷೇತ್ರದಿಂದ ಒಂದು ಸ್ಥಾನ ಆಯ್ಕೆಯಾಗಬೇಕಾಗಿದ್ದು, ಕಣದಲ್ಲಿ 3 ಜನ ಸ್ಪರ್ಧಾಳುಗಳಿದ್ದು, ಈ ಕ್ಷೇತ್ರದಲ್ಲಿ 99 ಜನ ಮತದಾರರಿದ್ದಾರೆ. ಚುನಾವಣೆಯು ಜ.12ರ ಭಾನುವಾರ ಬೆಳ್ಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆಯ ವರೆಗೆ ಜರುಗಲಿದ್ದು, ಚುನಾವಣೆಯ ಬಳಿಕ ಮತಗಳ ಏಣಿಕೆಯ ಕಾರ್ಯ ನಡೆಯಲಿದೆ. ನ್ಯಾಯಾಲಯದ ಆದೇಶದಂತೆ ಚುನಾವಣಾ ಫಲಿತಾಂಶವನ್ನು ಘೋಷಣೆ ಮಾಡುವುದಿಲ್ಲ ಎಂದು ತಿಳಿಸಿದ್ದಾರೆ.
ನಿಗದಿತ ದಿನಾಂಕದಂತೆ ಚುನಾವಣೆ: ಸತ್ಯಕ್ಕೆ ಸಂದ ಜಯಚನ್ನಗಿರಿ: ನಲ್ಲೂರಿನ ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಯಾವುದೇ ಅವ್ಯವಹಾರಗಳು ನಡೆಯದೆ ಇದ್ದರೂ ಇಲ್ಲ-ಸಲ್ಲದ ಗೊಂದಲಗಳನ್ನು ಶಾಸಕ ಬಸವರಾಜ ವಿ.ಶಿವಗಂಗಾ ಸೃಷ್ಟಿಸುತ್ತಿದ್ದು, ಚುನಾವಣೆಯನ್ನು ಮುಂದೂಡುವಂತೆ ತಹಸೀಲ್ದಾರರ ಮೇಲೆ ಒತ್ತಡ ಹೇರಿ ಮಾಡಿಸಿದ್ದು, ಇದು ಜವಾಬ್ದಾರಿಯುತ ರಾಜಕಾರಿಣಿಯ ಲಕ್ಷಣವಲ್ಲ ಎಂದು ಅಪೆಕ್ಸ್ ಬ್ಯಾಂಕಿನ ನಿರ್ದೇಶಕ ಲಿಂಗದಹಳ್ಳಿ ಬೂರ್ವೆಲ್ ಸ್ವಾಮಿ ತಿಳಿಸಿದ್ದಾರೆ.
ಈ ಸಹಕಾರ ಸಂಘದಲ್ಲಿ ಯಾವುದೇ ರೀತಿಯ ಲೋಪಗಳು ನಡೆಯದಿದ್ದರೂ, ಶಾಸಕರ ಬೆಂಬಲಿಗರು ನಕಲಿ ಮತದಾರರು ಇದ್ದಾರೆ. ಹೆಚ್ಚುವರಿ ಸಾಲ ಕೊಡಿಸಿದ್ದಾರೆ. ಇಂತಹ ಸತ್ವವಲ್ಲದ ಒಣ ಆರೋಪಗಳನ್ನು ಮಾಡುತ್ತಾ ಚುನಾವಣೆಯನ್ನು ಮುಂದೂಡಬೇಕು ಎಂದು ದಾವಣಗೆರೆ ಜಿಲ್ಲಾಧಿಕಾರಿಗಳ ಕಚೇರಿಯ ಎದುರು ಕಾನೂನಿನ ಪರಿಜ್ಞಾನಗಳಿಲ್ಲದಂತೆ ಧರಣಿ ನಡೆಸಿದುವುದು ಹಾಸ್ಯಾಸ್ಪದವಾಗಿದೆ ಎಂದು ವ್ಯಂಗ್ಯವಾಡಿದರು.2024-25ನೇ ಸಾಲಿನಲ್ಲಿ ಈ ಸಂಘವು 60.35 ಲಕ್ಷ ಲಾಭಗಳಿಸಿದೆ ಎಂದು ತಿಳಿಸಿರುವ ಅವರು, ಚುನಾವಣೆಗೆ ಸಂಬಂಧ ಪಟ್ಟಂತೆ ಹೈಕೋರ್ಟ್ ನಿಗದಿತ ದಿನಾಂಕದಂತೆ ಚುನಾವಣೆ ನಡೆಸಲು ಆದೇಶ ನೀಡಿರುವುದು ಸತ್ಯಕ್ಕೆ ಸಂದ ಜಯವಾಗಿದೆ ಎಂದು ತಿಳಿಸಿದ್ದಾರೆ.