ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಬಂಟ್ವಾಳ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಸಜಿಪಮೂಡ ಸಹಭಾಗಿತ್ವದಲ್ಲಿ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಸೋಮವಾರ ರಾಷ್ಟ್ರೀಯ ಪೋಷಣ್ ಅಭಿಯಾನ ‘ಪೋಷಣ್ ಮಾಸಾಚರಣೆ-2024’ರ ಸಮಾರೋಪ ಸಮಾರಂಭ ನಡೆಯಿತು.
ಕನ್ನಡಪ್ರಭ ವಾರ್ತೆ ಬಂಟ್ವಾಳ
ಎಲ್ಲಾ ಹೆತ್ತವರು ಮಕ್ಕಳ ಸರ್ವತೋಮುಖ ಅಭಿವೃದ್ಧಿಗೆ ಹೆಚ್ಚು ಆದ್ಯತೆ ನೀಡುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದ್ದು, ಈ ಜಾಗೃತಿ ಕಾರ್ಯದಲ್ಲಿ ಅಂಗನವಾಡಿ ಕೇಂದ್ರಗಳ ಪಾತ್ರ ಮಹತ್ತರವಾದದ್ದು ಎಂದು ಬಂಟ್ವಾಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಸಚಿನ್ ಕುಮಾರ್ ಹೇಳಿದ್ದಾರೆ.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ರೋಟರಿ ಕ್ಲಬ್ ಬಿ.ಸಿ.ರೋಡು ಸಿಟಿ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ, ಬಂಟ್ವಾಳ ಆಯುಷ್ ಆರೋಗ್ಯ ಮತ್ತು ಕ್ಷೇಮ ಕೇಂದ್ರ, ಸಜಿಪಮೂಡ ಸಹಭಾಗಿತ್ವದಲ್ಲಿ ಬಿ.ಸಿ.ರೋಡಿನ ರೋಟರಿ ಸಭಾಂಗಣದಲ್ಲಿ ಸೋಮವಾರ ನಡೆದ ರಾಷ್ಟ್ರೀಯ ಪೋಷಣ್ ಅಭಿಯಾನ ‘ಪೋಷಣ್ ಮಾಸಾಚರಣೆ-2024’ರ ಸಮಾರೋಪ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
ಆರೋಗ್ಯ ಜಾಗೃತಿ ಕೆಲಸ ನಿರಂತರವಾಗಿ ಮುನ್ನಡೆಯಬೇಕು ಎಂದ ಅವರು, ಬಂಟ್ವಾಳ ತಾಲೂಕು ಅಪೌಷ್ಟಿಕತೆ ಮುಕ್ತ ತಾಲೂಕು ಆಗುವಲ್ಲಿ ಪ್ರತಿಯೊಬ್ಬರೂ ಶ್ರಮಿಸುವಂತೆ ಕರೆ ನೀಡಿದರು.
ಜಿಲ್ಲಾ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಅಧಿಕಾರಿ ರಶ್ಮಿ ಅಧ್ಯಕ್ಷತೆ ವಹಿಸಿದ್ದರು. ಹೆರಿಗೆ ಸಂದರ್ಭದಲ್ಲಿ ತಾಯಿ ಮರಣ ಹಾಗೂ ಶಿಶುಮರಣಗಳನ್ನು ತಡೆಯುವ ಉದ್ದೇಶದಿಂದ ಪೋಷಣ್ ಅಭಿಯಾನ ಸಮುದಾಯ ಜಾಗೃತಿಯ ಕಾರ್ಯ ನಡೆಸುತ್ತಿದೆ ಎಂದರು.
ಜಿಲ್ಲಾ ನಿರೂಪಣಾಧಿಕಾರಿ ಕುಮಾರ್, ತಾಲೂಕು ಆರೋಗ್ಯಾಧಿಕಾರಿ ಡಾ.ಅಶೋಕ್ ಕುಮಾರ್ ರೈ, ಸಜಿಪಮೂಡ ಆರೋಗ್ಯ ಕೇಂದ್ರದ ಡಾ. ಮಣಿಕರ್ಣಿಕ, ಬಿ.ಸಿ.ರೋಡು ಸಿಟಿ ರೋಟರಿ ಕ್ಲಬ್ ಅಧ್ಯಕ್ಷ ಸೇಸಪ್ಪ ಮಾಸ್ಟರ್, ಕಾರ್ಯದರ್ಶಿ ಮಧುಸೂದನ್ ಶೆಣೈ, ತಾಲೂಕು ಸ್ತ್ರೀಶಕ್ತಿ ಬ್ಲಾಕ್ ಸೊಸೈಟಿ ಅಧ್ಯಕ್ಷೆ ಶೋಭಾ ಸಾಸ್ತಾನ ಇದ್ದರು.
ಪೌಷ್ಟಿಕ ಆಹಾರದ ಮಹತ್ವ ಹಾಗೂ ಸ್ಥಳೀಯ ಆಹಾರ ಸಂಪನ್ಮೂಲ ಸಂಗ್ರಹಣೆ ಕುರಿತಾಗಿ ಜಯರಾಮ ಪೂಜಾರಿ ಹಾಗೂ ಆರೋಗ್ಯಕರ ಜೀವನ ಶೈಲಿ ಕುರಿತಾಗಿ ನಗರ ಆರೋಗ್ಯ ವೈದ್ಯಾಧಿಕಾರಿ ಡಾ. ಅಶ್ವಿನಿ ಮಾಹಿತಿ ನೀಡಿದರು.
ತಾಲೂಕು ಶಿಶುಅಭಿವೃದ್ಧಿ ಯೋಜನಾಧಿಕಾರಿ ಮಮ್ತಾಜ್ ಸ್ವಾಗತಿಸಿದರು. ಹಿರಿಯ ಮೇಲ್ಚಿಚಾರಕಿ ಶಾಲಿನಿ ಕಾರ್ಯಕ್ರಮ ನಿರ್ವಹಿಸಿದರು. ಗುಣವತಿ ವಂದಿಸಿದರು. ಪೋಷಣ್ ಅಭಿಯಾನದ ತಾಲೂಕು ಸಂಯೋಜಕಿ ನವ್ಯ, ಮೇಲ್ವಿಚಾರಕಿಯರಾದ ನೀತಾ ಕುಮಾರಿ, ಶೋಭಾ ಎಂ., ಸುಜಾತ, ಲೀಲಾವತಿ, ಮುಬೀನಾ ಬಾನು, ಯಶೋಧ, ಕಚೇರಿ
ಸಿಬ್ಬಂದಿ ಯಶವಂತ್, ಗೌತಮ್, ಸುಂದರಿ ಸಹಕರಿಸಿದರು.
ವಿವಿಧ ಅಂಗನವಾಡಿ ಕೇಂದ್ರಗಳ ಮೂಲಕ ನಡೆಸಲಾಗಿದ್ದ 52 ಪೌಷ್ಟಿಕ ಆಹಾರಗಳ ಪ್ರದರ್ಶನ ಹಾಗೂ ಸ್ಪರ್ಧೆ ನಡೆಸಲಾಗಿದ್ದು, ವಿಜೇತರಿಗೆ ಬಹುಮಾನ ವಿತರಿಸಲಾಯಿತು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.