ಆಣೆ, ಪ್ರಮಾಣಕ್ಕೆ ಸಿದ್ಧ, ವಿಧಾನಸಭೆ ಬಗ್ಗೆ ನೀವೂ ಬನ್ನಿ!

KannadaprabhaNewsNetwork |  
Published : Jul 22, 2024, 01:20 AM IST
21ಕೆಡಿವಿಜಿ2-ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಹೊನ್ನಾಳಿ, ಚನ್ನಗಿರಿ ತಾಲೂಕು ಮುಖಂಡರಾದ ಜೆ.ಕೆ.ಸುರೇಶ, ಕುಬೇರಪ್ಪ, ಬಿ.ಉಮೇಶಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು. | Kannada Prabha

ಸಾರಾಂಶ

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಕೆಲಸ ಮಾಡಿದ್ದಾಗಿ ಧರ್ಮಸ್ಥಳವಷ್ಟೇ ಅಲ್ಲ, ಎಲ್ಲ ಹಿಂದು ದೇವಾಲಯಗಳಿಗೂ ಬಂದು ಪ್ರಮಾಣ ಮಾಡಲು ನಾವು ಸಿದ್ಧ. ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಪರ ಕೆಲಸ ಮಾಡಿದ್ದಾಗಿ ನೀವೂ ಬಂದು ಪ್ರಮಾಣ ಮಾಡಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಜಿಎಂಐಟಿ ಬಾಯ್ಸ್‌ಗೆ ಹೊನ್ನಾಳಿ, ಚನ್ನಗಿರಿ ಕ್ಷೇತ್ರಗಳ ಬಿಜೆಪಿ ಮುಖಂಡರು ಪಂಥಾಹ್ವಾನ ನೀಡಿದ್ದಾರೆ.

- ಉತ್ತರ, ದಕ್ಷಿಣ ವಿಧಾಸಭೆ ಚುನಾವಣೆ ಬಗ್ಗೆ ಬಂದು ಆಣೆ ಮಾಡಿ । ಸಿದ್ದೇಶ್ವರ, ಜಿಎಂಐಟಿ ಬಾಯ್ಸ್‌ಗೆ ಪಂಥಾಹ್ವಾನ

- - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಲೋಕಸಭೆ ಚುನಾವಣೆಗೆ ಬಿಜೆಪಿ ಅಭ್ಯರ್ಥಿ ಗಾಯತ್ರಿ ಸಿದ್ದೇಶ್ವರ ಪರ ಕೆಲಸ ಮಾಡಿದ್ದಾಗಿ ಧರ್ಮಸ್ಥಳವಷ್ಟೇ ಅಲ್ಲ, ಎಲ್ಲ ಹಿಂದು ದೇವಾಲಯಗಳಿಗೂ ಬಂದು ಪ್ರಮಾಣ ಮಾಡಲು ನಾವು ಸಿದ್ಧ. ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ, ದಕ್ಷಿಣ ಕ್ಷೇತ್ರಗಳಲ್ಲಿ ಲೋಕಿಕೆರೆ ನಾಗರಾಜ, ಬಿ.ಜಿ.ಅಜಯಕುಮಾರ ಪರ ಕೆಲಸ ಮಾಡಿದ್ದಾಗಿ ನೀವೂ ಬಂದು ಪ್ರಮಾಣ ಮಾಡಿ ಎಂದು ಮಾಜಿ ಸಂಸದ ಜಿ.ಎಂ.ಸಿದ್ದೇಶ್ವರ ಮತ್ತು ಜಿಎಂಐಟಿ ಬಾಯ್ಸ್‌ಗೆ ಹೊನ್ನಾಳಿ, ಚನ್ನಗಿರಿ ಕ್ಷೇತ್ರಗಳ ಬಿಜೆಪಿ ಮುಖಂಡರು ಪಂಥಾಹ್ವಾನ ನೀಡಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಲೋಕಸಭೆ ಚುನಾವಣೆಯಲ್ಲಿ ಗಾಯತ್ರಿ ಸಿದ್ದೇಶ್ವರರ ಗೆಲುವಿಗಾಗಿ ಪ್ರಾಮಾಣಿಕವಾಗಿ ದುಡಿದಿರುವ ಬಗ್ಗೆ ನಾವು ಪ್ರಮಾಣ ಮಾಡಲು ಸಿದ್ಧ. ಅದೇ ರೀತಿ ವಿಧಾನಸಭೆ ಚುನಾವಣೆಯಲ್ಲಿ ದಾವಣಗೆರೆ ಉತ್ತರ ಕ್ಷೇತ್ರದ ಲೋಕಿಕೆರೆ ನಾಗರಾಜ, ದಾವಣಗೆರೆ ದಕ್ಷಿಣ ಕ್ಷೇತ್ರದ ಬಿ.ಜಿ.ಅಜಯಕುಮಾರ ಪರವಾಗಿ ಕೆಲಸ ಮಾಡಿದ್ದರೆ ಬಂದು ಆಣೆ ಮಾಡಿ, ಸಾಬೀತುಪಡಿಸಿ ಎಂದು ಸವಾಲೆಸೆದರು.

ಬಿಜೆಪಿ ನಿಷ್ಠರು ನಾವು:

ಬಿಜೆಪಿ ರಾಜ್ಯ ಒಬಿಸಿ ಮೋರ್ಚಾ ಉಪಾಧ್ಯಕ್ಷ ಕುಬೇರಪ್ಪ ಮಾತನಾಡಿ, ಬಿಜೆಪಿಗಾಗಿ ದುಡಿಯುತ್ತಿರುವ ನಿಷ್ಠಾವಂತ ಕಾರ್ಯಕರ್ತರು ನಾವು. ಹೀಗಿದ್ದರೂ ಬಿಜೆಪಿ ನಿಕಟ ಪೂರ್ವ ಜಿಲ್ಲಾಧ್ಯಕ್ಷರಾದ ಎಸ್.ಎಂ. ವೀರೇಶ ಹನಗವಾಡಿ, ಯಶವಂತ ರಾವ್ ಜಾಧವ್‌, ಎ.ಬಿ. ಹನುಮಂತಪ್ಪ ಅರಕೆರೆ ಸೇರಿದಂತೆ ಜಿಎಂಐಟಿ ಬಾಯ್ಸ್‌ ಮಾಜಿ ಸಚಿವ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಇಡೀ ತಂಡವನ್ನು ಅವಮಾನಿಸುತ್ತಿದ್ದಾರೆ. ರೇಣುಕಾಚಾರ್ಯ ಸೇರಿದಂತೆ ನಾವು ಕಾಂಗ್ರೆಸ್ಸಿಗೆ ಹೋಗುವುದಾಗಿ ಎ.ಬಿ.ಹನುಮಂತಪ್ಪ ಮಾಡಿರುವ ಆಪಾದನೆ ಸತ್ಯಕ್ಕೆ ದೂರವಾದ ಸಂಗತಿ ಎಂದರು.

ವೀರೇಶ ಹನಗವಾಡಿ ಶ್ರಮವೇನು?:

ಹೊನ್ನಾಳಿ ತಾಲೂಕು ಅಧ್ಯಕ್ಷ ಜಿ.ಕೆ.ಸುರೇಶ ಮಾತನಾಡಿ, ಜಿಲ್ಲೆಯ ಎಂಟೂ ಕ್ಷೇತ್ರಗಳಲ್ಲಿ ಯಾವ್ಯಾವ ಕ್ಷೇತ್ರದಲ್ಲಿ ಪಕ್ಷಕ್ಕೆ ಎಷ್ಟು ಮತ ಬಂದಿವೆ, ಎಲ್ಲಿ ಕಡಿಮೆ ಆಗಿವೆ ಎಂಬುದನ್ನು ಪರಾಮರ್ಶೆ ಮಾಡಿಕೊಳ್ಳಲಿ. ಎಸ್.ಎಂ. ವೀರೇಶ ಹನಗವಾಡಿ ಅಧ್ಯಕ್ಷರಾಗಿದ್ದಾಗ ತಮ್ಮ ಅವಧಿಯಲ್ಲಿ ಎಷ್ಟು ಶಾಸಕರನ್ನು ಆಯ್ಕೆ ಮಾಡಲು ಶ್ರಮಿಸಿದ್ದರು ಎಂದು ಪ್ರಶ್ನಿಸಿದರು.

ವೀರೇಶ ಬಿಜೆಪಿ ಜಿಲ್ಲಾಧ್ಯಕ್ಷರಾಗಿದ್ದ ವೇಳೆ ಒಂದು ದಿನವೂ ಕಾಂಗ್ರೆಸ್ ವಿರುದ್ಧವಾಗಲೀ, ಶಾಮನೂರು ಕುಟುಂಬದ ವಿರುದ್ಧವಾಗಲೀ ಮಾತನಾಡಿದ್ದಾರಾ? ಮಾಜಿ ಸಂಸದ ಸಿದ್ದೇಶ್ವರ್‌ ಅವರಿಗೆ ಇದೇ ಜಿಎಂಐಟಿ ಬಾಯ್ಸ್‌ಗಳು ಸದಾ ಹಾದಿ ತಪ್ಪಿಸುತ್ತಾ ಬಂದಿದ್ದರಿಂದಲೇ ಬಿಜೆಪಿಗೆ ಕ್ಷೇತ್ರದಲ್ಲಿ ಸೋಲಾಗಿದ್ದನ್ನುಎಲ್ಲರೂ ಬಲ್ಲರು. ಮೂರು ಸಲ ಶಾಸಕರಿದ್ದ ರೇಣುಕಾಚಾರ್ಯ ಸಚಿವರಿದ್ದಾಗ ಸಾಕಷ್ಟು ಅಭಿವೃದ್ಧಿ ಕಾರ್ಯ ಕೈಗೊಂಡಿದ್ದಾರೆ ಎಂದು ತಿರುಗೇಟು ನೀಡಿದರು.

ಹಿರಿಯ ಮುಖಂಡ ಉಮೇಶ ಕುಮಾರ ಮಾತನಾಡಿ, ಶಿಸ್ತಿನ ಪಕ್ಷ ಬಿಜೆಪಿಯಲ್ಲಿ ಕೆಲವರು ಪದೇಪದೇ ಪತ್ರಿಕಾಗೋಷ್ಠಿ ಮಾಡಿ, ಇಲ್ಲಸಲ್ಲದ್ದನ್ನು ಹೇಳಿ ಪಕ್ಷದ ಗೌರವಕ್ಕೆ ಚ್ಯುತಿ ತರುವ ಕೆಲಸ ಮಾಡುತ್ತಿದ್ದಾರೆ. ನಾವೆಲ್ಲರೂ ಪಕ್ಷದ ನಿಷ್ಠಾವಂತರಾಗಿದ್ದರೂ, ಯಾರನ್ನೋ ಓಲೈಸಲು ರೇಣುಕಾಚಾರ್ಯ ಇತರರ ಮೇಲೆ ಅಪಪ್ರಚಾರ ಮಾಡುತ್ತಿದ್ದಾರೆ ಎಂದರು.

ಪಕ್ಷದ ಮುಖಂಡರಾದ ಹೊದಿಗೆರೆ ಉಮೇಶ, ಮಂಜಣ್ಣ, ಸಂಗಮ್, ರಾಜು ವೀರಣ್ಣ, ಪ್ರವೀಣ ಜಾಧವ್, ಸುರೇಂದ್ರ ನಾಯಕ್, ಮಾರುತಿ ನಾಯಕ್‌, ಶಿವು ಹುಡೇದ್‌, ಮಂಜಣ್ಣ ನೆಲಹೊನ್ನೆ, ನಾಗರಾಜ, ಜಯಣ್ಣ, ಅಪ್ಪು, ಜಗದೀಶ, ಮಲ್ಲಿಕಾರ್ಜುನ, ನಾಗರಾಜ, ಕುಮಾರ, ಸಚಿನ್ ಇತರರು ಇದ್ದರು.

- - - ಕೋಟ್ಸ್

ಮಾಜಿ ಸಚಿವರಾದ ಎಸ್.ಎ.ರವೀಂದ್ರನಾಥ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ನಮ್ಮ ನಾಯಕರಿಗೆ ಪದೇಪದೇ ಅವಮಾನಿಸುವ ಕೆಲಸವಾಗುತ್ತಿದೆ. ಹೀಗೆಯೇ ಮಾಡುತ್ತಿದ್ದರೆ ತಕ್ಕ ಪಾಠ ಕಲಿಸಬೇಕಾಗುತ್ತದೆ. ನಾವೂ ವರಿಷ್ಠರಿಗೆ ದೂರು ನೀಡುತ್ತೇವೆ. ತಾಕತ್ತಿದ್ದರೆ ರೇಣುಕಾಚಾರ್ಯ ಇತರರನ್ನು ಪಕ್ಷದಿಂದ ಉಚ್ಚಾಟಿಸಿ, ತೋರಿಸಲಿ ನೋಡೋಣ - ಜೆ.ಕೆ.ಸುರೇಶ, ಅಧ್ಯಕ್ಷ, ಹೊನ್ನಾಳಿ ಮಂಡಲ

- - - ಟಾಪ್‌ ಕೋಟ್‌ ಹರಿ, ಹರ, ಬ್ರಹ್ಮನೇ ಬಂದರೂ ಬಿಜೆಪಿಯಿಂದ ಎಂ.ಪಿ. ರೇಣುಕಾಚಾರ್ಯ ಸೇರಿದಂತೆ ಯಾರನ್ನೂ ಉಚ್ಚಾಟಿಸಲು ಸಾಧ್ಯವಿಲ್ಲ. ಚುನಾವಣೆ ಸೋಲಿಗೆ ನೂರೆಂಟು ಕಾರಣಗಳಿರುತ್ತವೆ. ತಾಯಿ ಮೇಲೆ ಆಣೆ ಮಾಡಿ ಹೇಳುತ್ತೇನೆ, ರೇಣುಕಾಚಾರ್ಯ ಕಾಂಗ್ರೆಸ್ಸಿಗೆ ಹೋಗುತ್ತೇನೆಂದು ಎಲ್ಲಿಯೂ ಹೇಳಿಲ್ಲ. ಜನರಿಗೆ ನಿರಂತರ ಸ್ಪಂದಿಸಿ, ಸಾಮಾನ್ಯರಲ್ಲಿ ಸಾಮಾನ್ಯವಾಗಿ ಬೆರೆಯುವ ರೇಣುಕಾಚಾರ್ಯ ಮತ್ತಿತರರ ಬಗ್ಗೆ ಅಪಪ್ರಚಾರ ಮೊದಲು ನಿಲ್ಲಿಸಲಿ

- ಕುಬೇರಪ್ಪ, ರಾಜ್ಯ ಉಪಾಧ್ಯಕ್ಷ, ಬಿಜೆಪಿ ಒಬಿಸಿ ಮೋರ್ಚಾ

- - - -21ಕೆಡಿವಿಜಿ2:

ದಾವಣಗೆರೆಯಲ್ಲಿ ಭಾನುವಾರ ಬಿಜೆಪಿ ಹೊನ್ನಾಳಿ, ಚನ್ನಗಿರಿ ತಾಲೂಕು ಮುಖಂಡರಾದ ಜೆ.ಕೆ.ಸುರೇಶ, ಕುಬೇರಪ್ಪ, ಬಿ.ಉಮೇಶಕುಮಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದರು.

PREV
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.

Recommended Stories

ಬಿಸಿಲಿನ ಹೊಡೆತಕ್ಕೆ ಸಾವಿರಾರು ಮೀನುಗಳ ಮಾರಣಹೋಮ
ನಿರಾಶ್ರಿತರ ಕಣ್ಣೀರು ಒರೆಸುವ ಕೆಲಸ