ಕನ್ನಡಪ್ರಭ ವಾರ್ತೆ ನಿಡಗುಂದಿ ದೇಶದ ನಾಗರಿಕರು ಸಂವಿಧಾನ ನೀಡಿರುವ ಹಕ್ಕುಗಳನ್ನು ಪಡೆಯುವ ರೀತಿಯಲ್ಲಿಯೇ ಸಂವಿಧಾನದ ಕರ್ತವ್ಯಗಳನ್ನು ಸಹ ಪ್ರತಿಯೊಬ್ಬರು ಪಾಲಿಸುವ ಬದ್ಧತೆ ತೋರಿಸಬೇಕು ಎಂದು ತಹಸೀಲ್ದಾರ್ ಎಸ್.ಎಸ್ ನಾಯಕಲ್ಮಟ ಹೇಳಿದರು. ಪಟ್ಟಣದಲ್ಲಿ ಎಂಪಿಎಸ್ ಶಾಲೆ ಆವರಣದಲ್ಲಿ ತಾಲೂಕು ಆಡಳಿತ, ಪಟ್ಟಣ ಪಂಚಾಯತಿ ಹಾಗೂ ಸಮಾಜ ಕಲ್ಯಾಣ ಇಲಾಖೆಯಿಂದ ನಡೆದ ಸಂವಿಧಾನ ಜಾಗೃತಿ ಜಾಥಾ ಉದ್ಘಾಟಿಸಿ ಮಾತನಾಡಿದರು. ಜಿಲ್ಲಾದ್ಯಂತ ಸಂಚರಿಸಿದ ಸಂವಿಧಾನ ಜಾಗೃತಿ ಜಾಥಾದಿಂದ ಸಂವಿಧಾನದ ಕುರಿತು ಸಾಕಷ್ಟು ಅರ್ಥ ಕಂಡುಕೊಂಡಿದ್ದೇವೆ. ಜಾಥಾದಲ್ಲಿ ಪ್ರತಿಯೊಬ್ಬರು ಪಾಲ್ಗೊಳ್ಳುವ ಮೂಲಕ ತಮಗಿರುವ ಹಕ್ಕುಗಳನ್ನು ಪಡೆದುಕೊಳ್ಳಬೇಕ ಎಂದರು.
ಡಾ.ಜಿ.ಬಿ.ನಂದನ್ ಮಾತನಾಡಿ, ಜಗತ್ತಿನಲ್ಲಿಯೇ ನಮ್ಮ ರಾಷ್ಟ್ರದಲ್ಲಿ ಸಂವಿಧಾನ ಪವಿತ್ರ ಗ್ರಂಥವಾಗಿದೆ. ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು. ನಮ್ಮ ನಡೆನುಡಿಗಳಲ್ಲಿ ದೇಶದ ಬಗ್ಗೆ ಗೌರವವಿರಬೇಕು. ಯುವಶಕ್ತಿ ದೇಶದ ಶಕ್ತಿಯಾಗಿದ್ದು, ಅವರನ್ನು ಜಾಗೃತಿಗೊಳಿಸಬೇಕು ಎಂದರು.ತಾಪ ಇಒ ಹಿರೇಮಠ, ಭವಾನಿ ಪಾಟೀಲ, ಸಿಪಿಐ ಶರಣಗೌಡ ಪಾಟೀಲ, ವಸಂತ ರಾಠೋಡ, ಪಪಂ ಮುಖ್ಯಾಧಿಕಾರಿ ಸುರೇಶ ಪಾಟೀಲ, ಗೋವಿಂದ ರಾಠೋಡ, ಎನ್.ಡಿ ಗೌಡರ ಸೇರಿ ಹಲವರು ಇದ್ದರು. ಗಣ್ಯರು ಸಂವಿಧಾನ ಪೀಠಿಕೆ ಬೋಧಿಸಿದರು. ದಲಿತ ಮುಖಂಡರಾದ ಶೇಖರ ದೊಡಮನಿ, ಬಸವರಾಜ ಆಲಕೊಪ್ಪರ, ಪ್ರಶಾಂತ ಚಲವಾದಿ, ತಿಪ್ಪಣ್ಣ ಮಾದರ, ರಾಜು ಚಳ್ಳಮರದ, ವಸಂತ ಹೊಳೆಯಣ್ಣವರ, ರಾಘು ವಡವಡಗಿ, ಸಿಂಧೂರ ಬೈರವಾಡಗಿ, ಲಕ್ಷ್ಮಣ ಚಲವಾದಿ, ಶ್ರೀನಾಥ ಬೈರವಾಡಗಿ, ಬಸವರಾಜ ಕರಿಯಣ್ಣವರ ಇದ್ದರು.
ಸಂಂಧಾನ ಜಾಥಾ ಸ್ತಬ್ಧ ಚಿತ್ರಕ್ಕೆ ಮಾಲಾರ್ಪಾಣೆ ಮಾಡಿ ಪೂರ್ಣಕುಂಭದೊಂದಿಗೆ ಸ್ವಾಗತ ಕೋರಲಾಯಿತು. ಬಳಿಕ ವೇಷಭೂಷಣ ಹಾಗೂ ಗೊಂಬೆ ಕುಣಿತ, ಡೊಳ್ಳು ಮೆರವಣಿಗೆ ಗಮನ ಸೆಳೆದವು. ಗ್ರಾಮದೇವತೆ ದೇವಸ್ಥಾನದಿಂದ ಆರಂಭವಾದ ಮೆರವಣಿಗೆ ಕಾಲೇಜು ರಸ್ತೆ, ಹೊಸಬಸ್ ನಿಲ್ದಾಣದ ಮೂಲಕ ಎಂಪಿಎಸ್ ಶಾಲೆವರೆಗು ಆಗಮಿಸಿತು.