ಅಬ್ಬೆತುಮಕೂರಿನ ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಮಾ.4 ರಂದು ಮಂಗಳವಾರ ಸಂಜೆ 6.30ಕ್ಕೆ ಶ್ರದ್ಧಾ, ಭಕ್ತಿಯಿಂದ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಜಾತ್ರಾ ಸಂಭ್ರಮ । ಅಬ್ಬೆತುಮಕೂರಿನ ಮಠದ ಡಾ.ಸುಭಾಶ್ಚಂದ್ರ ಕೌಲಗಿ ಮಾಹಿತಿ । ಉತ್ಸವ ಮೂರ್ತಿ ಜತೆ ರಥ ಏರುವ ಶ್ರೀ । ಸಚಿವ ಶರಣಬಸಪ್ಪ ಉದ್ಘಾಟನೆ
ಕನ್ನಡಪ್ರಭ ವಾರ್ತೆ ಯಾದಗಿರಿ
ಅಬ್ಬೆತುಮಕೂರಿನ ಸಿದ್ಧಿಪುರುಷ ಶ್ರೀ ವಿಶ್ವಾರಾಧ್ಯರ ರಥೋತ್ಸವ ಮಾ.4 ರಂದು ಮಂಗಳವಾರ ಸಂಜೆ 6.30ಕ್ಕೆ ಶ್ರದ್ಧಾ, ಭಕ್ತಿಯಿಂದ ಸಂಭ್ರಮ ಸಡಗರದಿಂದ ನಡೆಯಲಿದೆ ಎಂದು ಶ್ರೀಮಠದ ವಕ್ತಾರ ಡಾ.ಸುಭಾಶ್ಚಂದ್ರ ಕೌಲಗಿ ತಿಳಿಸಿದ್ದಾರೆ.
ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳು ತೇರಿಗೆ ವಿಶೇಷ ಪೂಜೆಯನ್ನು ನೆರವೇರಿಸಿ, ಉತ್ಸವ ಮೂರ್ತಿಯೊಂದಿಗೆ ಶ್ರೀಗಳು ರಥವನ್ನೇರಿದ ಕೂಡಲೇ ಭಕ್ತಾದಿಗಳು ಸಡಗರದಿಂದ ರಥವನ್ನು ಎಳೆದು ಸಂಭ್ರಮ ಪಡುವರು. ರಾತ್ರಿ 8 ಗಂಟೆಗೆ ಮಾನವ ಧರ್ಮ ಸಮಾವೇಶ ನಡೆಯುವುದು. ಶ್ರೀಶೈಲ ಪೀಠದ ಜಗದ್ಗುರು ಡಾ.ಚನ್ನಸಿದ್ಧರಾಮ ಶಿವಾಚಾರ್ಯರು ಸಾನಿಧ್ಯ ವಹಿಸುವರು.
ಜಿಲ್ಲಾ ಉಸ್ತುವಾರಿ ಸಚಿವ ಶರಣಬಸಪ್ಪ ದರ್ಶನಾಪೂರ ಜ್ಯೋತಿ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸುವರು. ಜಿಲ್ಲಾಧಿಕಾರಿ ಡಾ.ಸುಶೀಲಾ ಬಿ. ಅವರನ್ನು ಮಾನವ ಧರ್ಮ ಸಮಾವೇಶದಲ್ಲಿ ವಿಶೇಷವಾಗಿ ಸತ್ಕರಿಸಲಾಗುವುದು.
ಶಹಾಬಾದನ ವಿಶ್ವರಾಧ್ಯ ಬಿರಾಳ, ದೇವಿಂದ್ರಪ್ಪ ಸಣ್ಣದ, ಕಾಡಂಗೇರಾದ ಮಲ್ಲಪ್ಪ ಅಯ್ಯಪ್ಪ, ರಾಜಪ್ಪ ಸಾಧು ಅವರಿಗೆ ಅನುಭಾವ ಶ್ರೀ ಪುರಸ್ಕಾರ ನೀಡಿ ಗೌರವಿಸಲಾಗುವುದು.
ಡಾ.ಕರಿವೃಷಭ ರಾಜದೇಶಿಕೇಂದ್ರ ಮಹಾ ಸ್ವಾಮಿಗಳು ನೊಣವಿನಕೆರೆ, ಹಾರಕೂಡದ ಡಾ.ಚನ್ನವೀರ ಶೀವಾಚಾರ್ಯ, ಡಾ.ಶಿವಾನಂದ ಮಹಾಸ್ವಾಮಿಗಳು ಸೊನ್ನ, ಶಹಾಪೂರ ಕುಂಬಾರಗೇರಿ ಹಿರೇಮಠದ ಸೂಗುರೇಶ್ವರ ಶಿವಾಚಾರ್ಯ, ಸಿದ್ಧರಾಮಪುರದ ಗೋಲಪಲ್ಲಿಯ ವರದಾನೇಶ್ವರ ಸ್ವಾಮಿಗಳು, ಬಸವಕಲ್ಯಾಣದ ಡಾ.ಅಭಿನವ ಘನಲಿಂಗ ರುದ್ರಮುನಿ ಶಿವಾಚಾರ್ಯ, ನಿಲೋಗಲ್ ಅಭಿನವ ರೇಣುಕಾ ಶಾಂತಮಲ್ಲ ಶಿವಾಚಾರ್ಯ, ನೇರಡಗಂನ ಶ್ರೀಪಂಚಮ ಸಿದ್ಧಲಿಂಗ ಮಹಾಸ್ವಾಮಿ, ನಾಗಣಸೂರನ ಶ್ರೀಕಂಠ ಶಿವಾಚಾರ್ಯ, ಶ್ರೀಕಾರ್ತಿಕೇಶ್ವರ ಶಿವಾಚಾರ್ಯ, ಗುಂಡಗುರ್ತಿಯ ರುದ್ರಮುನಿ ಶಿವಾಚಾರ್ಯ, ಮುನಿಂದ್ರ ಸ್ವಾಮೀಜಿ ಹಲಕರ್ಟಿ, ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೆಡಗಿಮದ್ರಾ, ಶಿವಮೂರ್ತಿ ಸ್ವಾಮೀಜಿ ದೇವಾಪೂರ, ಕೊಟ್ಟೂರೇಶ್ವರ ಶಿವಾಚಾರ್ಯ, ತೊನಸನ ಹಳ್ಳಿಯ ಮಲ್ಲಣ್ಣಪ್ಪ ಶರಣರು ಮಾನವ ಧರ್ಮ ಸಮಾವೇಶದಲ್ಲಿ ಅನುಭಾವ ನೀಡಲಿದ್ದಾರೆ. ಸರಿಗಮ ಖ್ಯಾತಿಯ ಅಶ್ವಿನ್ ಶರ್ಮ ಹಾಗೂ ಕಲಾವಿದರ ತಂಡದವರಿಂದ ರಸಮಂಜರಿ ಕಾರ್ಯಕ್ರಮ ನಡೆಯಲಿದೆಯೆಂದು ತಿಳಿಸಿದ್ದಾರೆ.
ಪುರಾಣ ಮಂಗಲ:
ಸೋಮವಾರ ಬೆಳಿಗ್ಗೆ ಸೂರ್ಯೋದಯವಾಗುತ್ತಲೇ ವಿಶ್ವರಾಧ್ಯರ ಕರ್ತೃ ಗದ್ದುಗೆಗೆ ಗೋರಟಾ ಸಂಗೀತ ಬಳಗದವರಿಂದ ವಿಶೇಷ ರುದ್ರಾಭಿಷೇಕ ನೆರವೇರಿಸಲಾಯಿತು. ನಂತರ ಹನ್ನೊಂದು ದಿವಸಗಳಿಂದ ಸಾಗಿಬಂದ ವಿಶ್ವಾರಾಧ್ಯ ಪುರಾಣ. ಪಲ್ಲಕ್ಕಿ ಉತ್ಸವದ ಮೆರವಣಿಗೆ ಮಂಗಲ ವಾದ್ಯಗಳೊಂದಿಗೆ ಪುರವಂತರ ಸೇವೆ ಸಮೇತ ಗ್ರಾಮದಲ್ಲಿ ನಡೆಯಿತು. ಪ್ರವಚನಕಾರರಾದ ರುದ್ರಯ್ಯ ಶಾಸ್ತ್ರಿಗಳು ಮದ್ಲಾಪೂರ ಅವರು ಪೀಠಾಧಿಪತಿ ಡಾ. ಗಂಗಾಧರ ಮಹಾಸ್ವಾಮಿಗಳ ನೇತೃತ್ವದಲ್ಲಿ ವಿಶ್ವಾರಾಧ್ಯರ ಪುರಾಣವನ್ನು ಮಂಗಲಗೊಳಿಸಿದರು.
Get the latest news from across Karnataka (ಕರ್ನಾಟಕ ನ್ಯೂಸ್)— breaking headlines, politics, local developments, crime reports, district updates, civic issues and more. Stay informed with Kannada Prabha’s real‑time Karnataka news coverage.