ಮಲ್ಲಿಕಾರ್ಜುನ ಪಟ್ಟಣಶೆಟ್ಟಿ
ಶಿಕ್ಷಕರು ಶಾಲೆಗೆ ಚಕ್ಕರ್ ಹಾಕುವುದನ್ನು ತಪ್ಪಿಸಲು ಶಿಕ್ಷಣ ಇಲಾಖೆ ಸರ್ಕಾರಿ ಶಾಲಾ ಶಿಕ್ಷಕರಿಗಾಗಿ ಕರ್ನಾಟಕ ಹಾಜರಾತಿ ನಿರ್ವಹಣೆ ವ್ಯವಸ್ಥೆ ಎಂಬ ವಿನೂತನ ಹಾಜರಾತಿ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷಾರಂಭದಿಂದ ಜಾರಿಗೆ ತಂದಿದೆ.
ಶಿಕ್ಷಕರು ಅನಧಿಕೃತವಾಗಿ ಗೈರಾಗುವುದನ್ನು ತಪ್ಪಿಸಲು ಇದು ಪರಿಣಾಮಕಾರಿ ಆನ್ಲೈನ್ ವ್ಯವಸ್ಥೆಯಾಗಿದೆ. ಜೊತೆಗೆ ಶೈಕ್ಷಣಿಕ ಸುಧಾರಣೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ. ಆದರೆ ಪ್ರಕೃತಿ ವಿಕೋಪ, ಮಳೆ, ಟ್ರಾಫಿಕ್ ಜಾಮ್, ಸರಿಯಾದ ಬಸ್ ವ್ಯವಸ್ಥೆ, ಉತ್ತಮ ರಸ್ತೆ ಇಲ್ಲದಿರುವುದು, ಹಳ್ಳ-ಕೊಳ್ಳಗಳನ್ನು ದಾಟಿ ಹೋಗುವುದು, ನೆಟ್ವರ್ಕ್ ಬಾರದಿರುವ ಪ್ರದೇಶಗಳು, ರಾತ್ರಿ ವಿದ್ಯುತ್ ಇಲ್ಲದಿರುವ ಸಂದರ್ಭ ಸೇರಿ ಶಿಕ್ಷಕರು ಸ್ವಲ್ಪ ತಡಮಾಡಿ ಶಾಲೆಗೆ ಹೋದರೆ ಗೈರುಹಾಜರಿ ಭೀತಿ ಎದುರಿಸುವಂತಾಗಿದೆ.ಇದಕ್ಕೆ ಉದಾಹರಣೆಯಾಗಿ ಸೋಮವಾರ ರಾತ್ರಿ ಸುರಿದ ಮಳೆಗೆ ತಾಲೂಕಿನ ಇಬ್ರಾಹಿಂಪುರ ಗ್ರಾಮಕ್ಕೆ ಕೊಕಟನೂರ ಮಾರ್ಗವಾಗಿ ಬೈಕ್ ಮೇಲೆ ಹೋಗುವ ಸಂದರ್ಭದಲ್ಲಿ ಮಾರ್ಗ ಮಧ್ಯೆ ತುಂಬಿ ಹರಿಯುತ್ತಿದ್ದ ಹಳ್ಳ ಎದುರಾಗಿ ಪರದಾಡಿದ ಪ್ರಸಂಗ ನಡೆಯಿತು. ಈ ವೇಳೆ ಸುತ್ತಲಿನ ಗ್ರಾಮಸ್ಥರು ಬಂದು ತುಂಬಿ ಹರಿಯುವ ಹಳ್ಳದಲ್ಲಿ ಆ ಶಿಕ್ಷಕರ ಬೈಕ್ ದಾಟಿಸಿಕೊಡಲು ಸಹಾಯ ಮಾಡಿದ್ದಾರೆ. ಬೇಗ ಶಾಲೆಗೆ ಹೋಗಬೇಕು ಎಂಬ ಒತ್ತಡ ಒಂದೆಡೆಯಾದರೆ ತುಂಬಿ ಹರಿಯುವ ಹಳ್ಳದಲ್ಲಿ ಹೇಗೆ ದಾಟುವುದು ಎಂಬ ಚಿಂತೆ ಇನ್ನೊಂದೆಡೆ ಶಿಕ್ಷಕರದ್ದು. ತಡವಾದರೆ ಗೈರುಹಾಜರಾಗುವ ಚಿಂತೆ. ಹಳ್ಳ ದಾಟಲು ಹೋದರೆ ಏನಾಗುವುದೋ ಎಂಬ ಆತಂಕ. ಇದು ಒಂದು ಉದಾಹರಣೆ ಮಾತ್ರ. ಇಂತಹ ಅನೇಕ ಸಮಸ್ಯೆಗಳು ಶಿಕ್ಷಕರಿಗೆ ಎದುರಾಗುತ್ತವೆ.