ಕನ್ನಡಪ್ರ ವಾರ್ತೆ ಚಿತ್ರದುರ್ಗ
ಪರಿಶಿಷ್ಟರ ಮೀಸಲು ವರ್ಗೀಕರಣಕ್ಕೆ ವಿರೋಧ ವ್ಯಕ್ತಪಡಿಸಿ ಅಖಿಲ ಕರ್ನಾಟಕ ಮೀಸಲಾತಿ ಸಂರಕ್ಷಣಾ ಜಿಲ್ಲಾ ಒಕ್ಕೂಟದ ಕಾರ್ಯಕರ್ತರು ಸೋಮವಾರಚ ಚಿತ್ರದುರ್ಗದಲ್ಲಿ ಬೃಹತ್ ಪ್ರತಿಭಟನೆ ನಡೆಸಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದರು.ಚಿತ್ರದುರ್ಗ ಹೊರವಲಯ ಮದಕರಿಪುರ ಲಂಬಾಣಿ ಹಟ್ಟಿಯಿಂದ ಪಾದಯಾತ್ರೆ ಮೂಲಕ ಮೆರವಣಿಗೆಯಲ್ಲಿ ಬಂದ ಪ್ರತಿಭಟನಾಕಾರರು ಒನಕೆ ಓಬವ್ವ ವೃತ್ತದಲ್ಲಿ ಸಭೆ ನಡೆಸಿ ಸಿಎಂ ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿದರು. ಕೊರಚ, ಕೊರಮ, ಭೋವಿ, ಲಂಬಾಣಿ ಸಮಾಜಗಳಿಗೆ ಒಳ ಮೀಸಲಾತಿ ವರ್ಗೀಕರಣದಲ್ಲಿ ವಂಚನೆಯಾಗಿದೆ ದೂರಿದರು.
ಜನ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ನ್ಯಾ.ನಾಗಮೋಹನ್ ದಾಸ್ ಆಯೋಗ ಆತುರಾತುರವಾಗಿ ಸರ್ಕಾರಕ್ಕೆ ವರದಿ ಸಲ್ಲಿಸಿ ಮೋಸ ಮಾಡಿದೆ. ಸರ್ಕಾರದ ಕೆಲ ಇಲಾಖೆಗಳು ಎಸ್ಸಿ ಸಮುದಾಯಗಳ ಅಂಕಿ-ಅಂಶ ನೀಡಿಲ್ಲ. ಕೆಲ ಕುಟುಂಬಗಳು ನಗರ ಹಾಗೂ ಗ್ರಾಮೀಣ ಭಾಗಗಳಲ್ಲಿ ಅಲಭ್ಯತೆಯ ಕಾರಣಕ್ಕೆ ಸಮೀಕ್ಷೆ ಅಪೂರ್ಣವಾಗಿದೆ. ಯಾವ ದೃಷ್ಠಿಕೋನದಿಂದಲೂ ಹೊಂದಾಣಿಕೆ ಆಗದ ಬಂಜಾರ, ಭೋವಿ, ಕೊರಚ, ಕೊರಮ ಸಮುದಾಯದ ‘ಸಿ’ ವರ್ಗದವರೊಂದಿಗೆ ಅಲೆಮಾರಿಗಳ ಸೇರಿಸಿ ಅವರಿಗೆ ವ್ಯಾಯಾಮ ಮಾಡಲಗಿದೆ. ಅಲೆಮಾರಿಗಳಿಗೆ ಶೇ.1ರಷ್ಟು ಮೀಸಲಾತಿ ನೀಡಬೇಕು ಎಂದು ಆಗ್ರಹಿಸಿದರು.ಸ್ಪಶ್ಯ, ಅಸ್ಪಶ್ಯ ಎಂಬ ಅಸಂವಿಧಾನಿಕ ಪದ ಬಳಕೆಯನ್ನು ಕಡತದಿಂದ ತೆಗೆದುಹಾಕಿ, ದಮನಿತ ಅಥವಾ ವಿಮುಕ್ತ ಜಾತಿಗಳೆಂದು ಹೆಸರಿಸಬೇಕು. ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿ ಹೆಚ್ಚಿಸಿ ‘ಸಿ’ ವರ್ಗದ ನಮ್ಮ ಸಮುದಾಯಗಳಿಗೂ ಶೇ.6ರಷ್ಟು ಮೀಸಲಾತಿ ನಿಗದಿಗೊಳಿಸಲು ಮುಂದಾಗಬೇಕು. ಖಾಸಗಿ ವಲಯದಲ್ಲೂ ಮೀಸಲಾತಿ ಕಲ್ಪಿಸಲು ಕ್ರಮ ಕೈಗೊಳ್ಳಬೇಕು. ಅಪೂರ್ಣ ಮಾಹಿತಿ ಹೊಂದಿರುವ ನಾಗಮೋಹನ್ ದಾಸ್ ವರದಿ ತಿರಸ್ಕರಿಸಿ, ಕೇಂದ್ರ ಸರ್ಕಾರ ನಡೆಸುವ ಜಾತಿ ಗಣತಿವರೆಗೂ ಒಳ ಮೀಸಲಾತಿ ವರ್ಗೀಕರಣ ಆದೇಶವನ್ನು ರಾಜ್ಯ ಸರ್ಕಾರ ತಡೆಹಿಡಿಯಬೇಕು ಎಂದರು.
ಈ ವೇಳೆ ಬಂಜಾರ ಗುರುಪೀಠದ ಸರ್ದಾರ್ ಸೇವಾಲಾಲ್ ಸ್ವಾಮೀಜಿ, ನಂದಾ ಮಸಂದ್ ಸೇವಾಲಾಲ್ ಸ್ವಾಮೀಜಿ, ಶಿವಪ್ರಕಾಶ್ ಸ್ವಾಮೀಜಿ, ಶಿರಹಟ್ಟಿ ಶಾಸಕ ಡಾ.ಚಂದ್ರು ಲಂಬಾಣಿ, ಮಾಜಿ ಶಾಸಕರಾದ ಪಿ.ರಾಜು, ಕೆ.ಬಿ.ಅಶೋಕ್ನಾಯ್ಕ, ಬಸವರಾಜ್ ನಾಯ್ಕ, ಒಕ್ಕೂಟದ ಸಂಚಾಲಕ ನಿಂಗಾನಾಯ್ಕ, ನರೇನಹಳ್ಳಿ ಅರುಣ್ಕುಮಾರ್, ಚಂದ್ರನಾಯ್ಕ, ರಮೇಶ್ನಾಯ್ಕ, ಗಿರೀಶ್ನಾಯ್ಕ, ಬಾಲ್ಯನಾಯ್ಕ, ಗೌತಮ್ನಾಯ್ಕ, ಸೂರ್ಯನಾಯ್ಕ, ಶಿವಕುಮಾರ್ನಾಯ್ಕ, ಗಂಗಾನಾಯ್ಕ, ರವಿ ಮದಕರಿಪುರ, ತಿಪ್ಪೇಸ್ವಾಮಿ, ಅನಿಲ್ನಾಯ್ಕ, ಶ್ರೀನಿವಾಸ್ನಾಯ್ಕ, ಪುಟ್ಟನಾಯ್ಕ, ಮೂರ್ತಿನಾಯ್ಕ, ಮಹಂತೇಶ್, ರಘುನಾಯ್ಕ, ಶ್ರೀಧರ್ನಾಯ್ಕ ಇದ್ದರು.