ಹಗರಿಬೊಮ್ಮನಹಳ್ಳಿ: ತಾಲೂಕಿನ ತಂಬ್ರಹಳ್ಳಿ ಹೋಬಳಿಯಲ್ಲಿ ಸೋಮವಾರ ರಾತ್ರಿ ಭಾರಿ ಮಳೆಯಾಗಿದ್ದು, ಒಕ್ಕಣೆಗೆ ಬಂದ ರೈತರ ಮೆಕ್ಕೆಜೋಳ, ಈರುಳ್ಳಿ, ಭತ್ತದ ಬೆಳೆಗಳು ನಷ್ಟಕ್ಕೆ ತುತ್ತಾಗಿದ್ದು, ರೈತರು ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎಂದು ಬೇಸರ ವ್ಯಕ್ತಪಡಿಸುತ್ತಿದ್ದಾರೆ.
ತಾಲೂಕಿನ ಬನ್ನಿಗೋಳ, ಕಿತ್ನೂರು, ಮುತ್ಕೂರು ಗ್ರಾಮಗಳ ರೈತರ ಈರುಳ್ಳಿ ಹೊಲಗಳಿಗೆ ತೋಟಗಾರಿಕಾ ಸಹಾಯಕ ನಿರ್ದೇಶಕ ರಾಜೇಂದ್ರ, ಕಂದಾಯ ಇಲಾಖೆಯ ಯಂಕಾರೆಡ್ಡಿ, ಮಂಜುಳಾ ಜಂಟಿ ಸಮೀಕ್ಷೆ ನಡೆಸಿ ಈರುಳ್ಳಿ ಬೆಳೆ ನಷ್ಟವನ್ನು ವೀಕ್ಷಿಸಿದರು. ತಾಲೂಕಿನ ಈರುಳ್ಳಿ ಬೆಳೆನಷ್ಟದ ಮಾಹಿತಿಯನ್ನು ಸಂಗ್ರಹಿಸಿ, ಪರಿಹಾರಕ್ಕೆ ಆಗ್ರಹಿಸಿ ಸರಕಾರಕ್ಕೆ ಪತ್ರ ಬರೆಯಲಾಗುವುದು ಎಂದು ರಾಜೇಂದ್ರ ತಿಳಿಸಿದರು.
ಬಾರಿ ಮಳೆಯಿಂದಾಗಿ ಮಾಲವಿ ಜಲಾಶಯಕ್ಕೆ ಬಾರಿ ನೀರು ಹರಿದು ಬಂದಿದ್ದು, ೧೯ ಅಡಿಯಷ್ಟು ನೀರು ಸಂಗ್ರಹವಾಗಿದೆ. ತಂಬ್ರಹಳ್ಳಿ ಹೋಬಳಿಯಲ್ಲಿ ಸೋಮವಾರ ರಾತ್ರಿ ೬೩.೪ ಮಿಮೀ ಮಳೆ ದಾಖಲಾಗಿದೆ.ಅತಿವೃಷ್ಟಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಪರಿಹಾರ ಸಿಗಬಹುದೇ ಎಂಬುದನ್ನು ಕಾದುನೋಡಬೇಕಿದೆ.