ಕೊಟ್ಟೂರು: ಕ್ರೀಡಾಕೂಟದಲ್ಲಿ ಗೆಲ್ಲುವುದಕ್ಕಿಂತ ಭಾಗವಹಿಸಿ ಪ್ರತಿಭೆ ಪ್ರದರ್ಶಿಸುವುದು ಅತಿ ಮುಖ್ಯ ಎಂದು ತಹಸೀಲ್ದಾರ್ ಜಿ.ಕೆ. ಅಮರೇಶ ಹೇಳಿದರು.
ಕ್ರೀಡಾಕೂಟಗಳಿದ್ದಾಗ ಮಾತ್ರ ವಿದ್ಯಾರ್ಥಿಗಳು ತಯಾರಿ ನಡೆಸದೇ ಸದಾ ವಿವಿಧ ಆಟಗಳಲ್ಲಿ ತರಬೇತಿ ಹೊಂದಬೇಕು. ಕ್ರೀಡೆಗಳಲ್ಲಿ ತೊಡಗಿಕೊಳ್ಳುವುದರಿಂದ ಓದಿನಲ್ಲಿ ಆಸಕ್ತಿ ಹೆಚ್ಚುವುದಲ್ಲದೇ ಸದಾ ಕ್ರಿಯಾಶೀಲರಾಗಿರಬಹುದು. ತಾಲೂಕು ಮಟ್ಟದ ಕ್ರೀಡಾಕೂಟದಲ್ಲಿ ವಿಜೇತರಾದವರು ಮುಂದಿನ ಹಂತದಲ್ಲಿಯೂ ಉತ್ತಮ ಪ್ರದರ್ಶನ ತೋರಿ ತಾಲೂಕಿಗೆ ಕೀರ್ತಿ ತರಬೇಕು ಎಂದರು.
ಕ್ರೀಡಾ ಧ್ವಜಾರೋಹಣ ನೆರವೇರಿಸಿದ ಪೊಲೀಸ್ ಇನ್ಸ್ಪೆಕ್ಟರ್ ಡಿ. ದುರುಗಪ್ಪ ಮಾತನಾಡಿ, ಕ್ರೀಡೆಗಳಿಂದ ಮನಸ್ಸು ಹುಮ್ಮಸ್ಸುಗೊಳ್ಳುತ್ತದೆ. ಪ್ರತಿ ಶಾಲೆ ಕಾಲೇಜುಗಳಲ್ಲಿ ಕ್ರೀಡೆಗಳಲ್ಲಿ ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗೆ ಉತ್ತಮ ತರಬೇತಿ ನೀಡುವುದು ಅವಶ್ಯವಿದೆ ಎಂದರು.ಕ್ರೀಡಾ ಜ್ಯೋತಿ ಬೆಳಗಿಸಿದ ಜಿಲ್ಲಾ ಪಿಯು ಕಾಲೇಜುಗಳ ಪ್ರಾಚಾರ್ಯರ ಸಂಘದ ಅಧ್ಯಕ್ಷ ನಾಗರಾಜ್ ಹವಾಲ್ದಾರ್ ಮಾತನಾಡಿ, ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಕ್ರೀಡಾಕೂಟ ಆರಂಭವಾಗಿದ್ದು, ವಿದ್ಯಾರ್ಥಿಗಳು ತಮ್ಮಲ್ಲಿನ ಕ್ರೀಡಾ ಪ್ರತಿಭೆ ಸೂಕ್ತವಾಗಿ ಪ್ರದರ್ಶಿಸಬೇಕು. ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕೇವಲ ತಾಲೂಕು ಮಟ್ಟದಲ್ಲಿ ಗೆಲುವು ಸಾಧಿಸಲು ಸೀಮಿತವಾಗದೇ ರಾಜ್ಯ ಮಟ್ಟದಲ್ಲೂ ಗೆಲುವಿಗೆ ಪ್ರಯತ್ನಿಸಬೇಕು ಎಂದರು.
ಕ್ರೀಡಾಕೂಟದಲ್ಲಿ ಭಾಗವಹಿಸಿದ್ದ ತಾಲೂಕಿನ ೮ ಕಾಲೇಜು ವಿದ್ಯಾರ್ಥಿಗಳು ಧ್ವಜ ವಂದನೆ ಸಲ್ಲಿಸಿದರು. ಟಿ.ಮಂಜುನಾಥ, ಬಿ.ಎಸ್. ವೀರೇಶ್, ಪ್ರಶಾಂತ, ತಿಪ್ಪೇಸ್ವಾಮಿ, ಅನುಪಮ ಸೇರಿ ಇತರರು ಇದ್ದರು. ಉಪನ್ಯಾಸಕ ಶ್ಯಾಮರಾಜ ನಿರ್ವಹಿಸಿದರು.