- ರೈಲು ಮಜಾ ಟಾಕೀಸ್ ಸಾಂಸ್ಕೃತಿಕ ವೇದಿಕೆ ನುಡಿಸೇವೆ - - -
ಪ್ರತಿದಿನ ಬೆಳಗ್ಗೆ ಹುಬ್ಬಳ್ಳಿಯಿಂದ ಬೆಂಗಳೂರಿಗೆ ತೆರಳುವ ಶ್ರೀ ಸಿದ್ದಗಂಗಾ ರೈಲಿನಲ್ಲಿ ನಿತ್ಯ ಪ್ರಯಾಣಿಸುವ ರಾಣೆಬೆನ್ನೂರು, ಹರಿಹರ, ದಾವಣಗೆರೆ ಹಾಗೂ ಇನ್ನಿತರೆ ಊರುಗಳ ಶಿಕ್ಷಕರು, ಉಪನ್ಯಾಸಕರು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿ ರೈಲಿನಲ್ಲಿ ಕನ್ನಡೋತ್ಸವ ಆಚರಿಸಿ, ಪ್ರಯಾಣ ಸಮಯವನ್ನು ವಿಶೇಷವಾಗಿ ಸದುಪಯೋಗ ಮಾಡಿದರು.
ಹರಿಹರದ ರಾಜಶೇಖರ ಮೂರ್ತಿ ನೇತೃತ್ವದಲ್ಲಿ ಪ್ರಾರಂಭವಾದ ಗೆಳೆಯರ ಬಳಗದಿಂದ ತಾವು ದಿನ ನಿತ್ಯ ಪ್ರಯಾಣಿಸುವ ರೈಲು ಭೋಗಿಯನ್ನು ಕನ್ನಡ ಬಾವುಟಗಳಿಂದ ಅಲಂಕರಿಸಿ, ಕನ್ನಡ ಮಾತೆ ಭುವನೇಶ್ವರಿ ದೇವಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, 98ನೇ ರಾಜ್ಯೋತ್ಸವ ಆಚರಿಸಿದರು.ಇದೇ ವೇಳೆ ಸ್ನೇಹ ಬಳಗದಲ್ಲಿ ನಿರಂತರ ಒಡನಾಟದಲ್ಲಿದ್ದು, ಇತ್ತೀಚೆಗೆ ವರ್ಗಾವಣೆಯಾದ ಕನ್ನಡ ಅಧ್ಯಾಪಕ ಡಾ. ಜಯರಾಜ, ನಿವೃತ್ತ ಕನ್ನಡ ಅಧ್ಯಾಪಕ, ಪ್ರಾಂಶುಪಾಲ ಆನಂದಪ್ಪ, ಸೇನಾಪಡೆಯಲ್ಲಿ ಸೇವೆ ಸಲ್ಲಿಸಿ ಪ್ರಸ್ತುತ ಶಿವನಿ ಗ್ರಾಮ ಲೆಕ್ಕಾಧಿಕಾರಿ ಆಗಿರುವ ರಾಜೇಂದ್ರ ತಿಮಾರಾಹುತರ ಮತ್ತು ಅಜ್ಜಂಪುರದ ಹಿರಿಯ ಕೃಷಿಕ ಕುಮಾರಪ್ಪ ಅವರನ್ನು ಬಳಗದಿಂದ ಸನ್ಮಾನಿಸಲಾಯಿತು.
ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಹಾಗೂ ದೇಶಾಭಿಮಾನ ಮೂಡಿಸುವ ಕಾರ್ಯಗಳ ಮೂಲಕ ಬಳಗ ಜನರ ಮೆಚ್ಚುಗೆ ಗಳಿಸುತ್ತಿದೆ. ಹೊಸ ಹೊಸ ಸ್ನೇಹಿತರನ್ನು ಆಕರ್ಷಿಸಿ, ಬರುವವರಿಗೆ ಆಹ್ವಾನ, ನಿವೃತ್ತರಾಗುವವರಿಗೆ ಸನ್ಮಾನ ಮಾಡುತ್ತಾ ಸಮಾಜ ಸೇವೆ ಕೈಗೊಂಡಿದೆ. ಎಲ್ಲರಿಗೂ ಸಂತಸ ನೀಡುವ ರೈಲು ಮಜಾ ಟಾಕೀಸ್ ಸಾಂಸ್ಕೃತಿಕ ವೇದಿಕೆ ಸೇವೆಗಳು ಇದೇ ರೀತಿ ನಿರಂತರ ಸಾಗುತ್ತಿರಲಿ ಎಂಬುದು ಪ್ರಯಾಣಿಕರ ಹಾರೈಕೆಯಾಗಿದೆ.
- - -ಬಾಕ್ಸ್ * ಪ್ರಯಾಣಿಕರಿಗಾಗಿ ಸೂಚನಾ ಫಲಕಗಳು:
ಇದಿಷ್ಟೇ ಅಲ್ಲದೇ, ರೈಲಿನಲ್ಲಿ ಟಿಕೆಟ್ ಇಲ್ಲದೇ ಪ್ರಯಾಣ ಮಾಡಬೇಡಿ, ರೈಲು ಚಲಿಸುವಾಗ ಹತ್ತುವುದು ಇಳಿಯುವುದು ಮಾಡಬೇಡಿ, ಅವಸರದ ಪ್ರಯಾಣ ಮೃತ್ಯುವಿಗೆ ಆಹ್ವಾನ, ರೈಲಿನ ಬಾಗಿಲಿನ ಬಳಿ ಕುಳಿತು ಪ್ರಯಾಣ ಮಾಡಬೇಡಿ, ಕಸವನ್ನು ಕಿಟಕಿ ಮೂಲಕ ಎಸೆಯಬೇಡಿ, ಗಾಡಿಯಲ್ಲಿ ಎಲ್ಲೆಂದರಲ್ಲಿ ಕಸ ಹಾಕಬೇಡಿ, ಕಸದ ಡಬ್ಬಿಯಲ್ಲಿ ತ್ಯಾಜ್ಯಗಳನ್ನು ಹಾಕಿ, ರೈಲಿನ ಶೌಚಾಲಯ ಸ್ವಚ್ಛವಾಗಿರಿಸಿ, ರೋಗಿಗಳು- ಅಂಗವಿಕಲರು ಹಾಗೂ ವೃದ್ಧರಿಗೆ ಆಸನಗಳನ್ನು ಬಿಟ್ಟುಕೊಟ್ಟು ಸಹಕರಿಸಿ ಎಂಬ ಜನಪರ ಫಲಕಗಳನ್ನು ರೈಲಿನಲ್ಲಿ ಅಳವಡಿಸಿ, ನೂತನ ಪ್ರಯಾಣಿಕರಿಗೆ ಸಂದೇಶ ನೀಡುವ ಕಾರ್ಯ ಬಳಗ ನಡೆಸುತ್ತಿದೆ.- - - -29ಎಚ್ಆರ್ಆರ್01:
ಹರಿಹರದ ಮೂಲಕ ಹುಬ್ಬಳ್ಳಿಯಿಂದ ಬೆಂಗಳೂರಿಗೆ ಸಂಚರಿಸುವ ಸಿದ್ದಗಂಗಾ ರೈಲಿನಲ್ಲಿ ರೈಲು ಮಜಾ ಟಾಕೀಸ್ ಸಾಂಸ್ಕೃತಿಕ ವೇದಿಕೆ ಗೆಳೆಯರ ಬಳಗದ ಸದಸ್ಯರು ಇತ್ತೀಚೆಗೆ ರೈಲಿನಲ್ಲಿ ವಿಭಿನ್ನವಾಗಿ ಕನ್ನಡ ರಾಜ್ಯೋತ್ಸವ ಆಚರಿಸಿ, ಪ್ರಯಾಣಿಕರ ಗಮನ ಸೆಳೆದರು.