ಮುಂಡರಗಿ: ತಂದೆ- ತಾಯಿ, ಸಮಾಜ ಹಾಗೂ ದೇಶದ ಋಣವನ್ನು ಪ್ರತಿಯೊಬ್ಬರೂ ತೀರಿಸಬೇಕು. ಸಂತರು, ಮಹಾತ್ಮರು, ಶರಣರು ಹಾಗೂ ಹೋರಾಟಗಾರರ ಕುರಿತು ಚಿಂತನೆ ಮಾಡುವುದು ಅವಶ್ಯವಾಗಿದೆ ಎಂದು ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಪ್ರೊ. ಆರ್.ಎಲ್. ಪೊಲೀಸಪಾಟೀಲ ತಿಳಿಸಿದರು.
ನಮ್ಮ ಹಿರಿಯರು ಬಹಳಷ್ಟು ಕಷ್ಟಪಟ್ಟು 3 ಎಕರೆ 26 ಗುಂಟೆ ಜಮೀನನ್ನು ಖರೀದಿಸಿದ್ದಾರೆ. ಅದು ಕೋಟ್ಯಂತರ ಬೆಲೆ ಬಾಳುವಂತಾಗಿದೆ. ಅಲ್ಲಿಯೇ ಸಮುದಾಯ ಭವನ ನಿರ್ಮಾಣ ಮಾಡಲಾಗುತ್ತಿದೆ ಎಂದರು.
ಪ್ರೊ. ಪ್ರಭು ಸೊಪ್ಪಿನ ಮಾತನಾಡಿ, 1824ರಲ್ಲಿ ಬ್ರಿಟಿಷರಿಗೆ ನಡುಕ ಹುಟ್ಟಿಸಿದ ಮಹಿಳೆ ಕಿತ್ತೂರಿನ ರಾಣಿ ಚೆನ್ನಮ್ಮ ಮಾತ್ರ. ಅವರು ಬ್ರಿಟಿಷರೊಂದಿಗಿನ ಮೊದಲ ಯುದ್ದದಲ್ಲಿ ವಿಜಯಿಯಾಗಿದ್ದರು. ಚೆನ್ನಮ್ಮನ ಧೈರ್ಯ, ರಾಷ್ಟ್ರಪ್ರೇಮ. ನಾಡಭಕ್ತಿಯನ್ನು ನಾವೆಲ್ಲರೂ ಜೀವನದಲ್ಲಿ ರೂಢಿಸಿಕೊಳ್ಳಬೇಕಿದೆ ಎಂದರು.ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ಕ್ಷೇತ್ರ ಯೋಜನಾಧಿಕಾರಿ ವಿಶಾಲಾ ಮಲ್ಲಾಪೂರ ಮಾತನಾಡಿದರು. ತಾಲೂಕು ಪಂಚಮಸಾಲಿ ಸಮಾಜದ ಅಧ್ಯಕ್ಷ ಎಸ್.ವಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ನಮ್ಮ ಸಮಾಜದ ಹಾಗೂ ಇತರೆ ಸಮಾಜಗಳ ಅನುಕೂಲಕ್ಕಾಗಿ ಪಟ್ಟಣದಲ್ಲಿ ಕಿತ್ತೂರು ಚೆನ್ನಮ್ಮಾಜಿ ಸಮುದಾಯ ಭವನ ನಿರ್ಮಾಣ ಕಾಮಗಾರಿ ನಡೆಯುತ್ತಿದ್ದು, ಒಂದು ವರ್ಷದೊಳಗೆ ಪೂರ್ಣಗೊಳಿಸುವ ಸಂಕಲ್ಪ ಹೊಂದಲಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಸಿ.ಕೆ. ಗಣಪ್ಪನವರ, ಸಂತೋಷ ಮುರುಡಿ ಸೇರಿದಂತೆ ಪ್ರತಿಭಾವಂತ ವಿದ್ಯಾರ್ಥಿಗಳು, ವಿವಿಧ ಕ್ಷೇತ್ರಗಳ ಸಾಧಕರು, ನಿವೃತ್ತ ನೌಕರರನ್ನು ಸನ್ಮಾನಿಸಲಾಯಿತು. ಕೊಂಬಳಿಯ ಶಿವಗಂಗಮ್ಮ ಬಾಳಪ್ಪ ಸೊಪ್ಪಿನ, ಸಿ.ಎಸ್. ಅರಸನಾಳ ಸೇರಿ ಅನೇಕರು ಸಮುದಾಯ ಭವನಕ್ಕೆ ಧನಸಹಾಯ ಮಾಡಿದರು. ತಾಲೂಕು ಪಂಚಮಸಾಲಿ ಮಹಿಳಾ ಘಟಕದ ಅಧ್ಯಕ್ಷ ಶೋಭಾ ಹೊಟ್ಟಿನ, ಶಹರ ಪಂಚಮಸಾಲಿ ಘಟಕ ಅಧ್ಯಕ್ಷರು ಆರ್.ವೈ. ಪಾಟೀಲ, ತಾಲೂಕು ಪಂಚಮಸಾಲಿ ನೌಕರ ಘಟಕದ ಅಧ್ಯಕ್ಷ ಎನ್.ಎಂ. ಕುಕನೂರ, ಯುವ ಘಟಕದ ಅಧ್ಯಕ್ಷ ರಾಜೇಶ ಅರಕಲ್, ಶಹರ ಪಂಚಮಸಾಲಿ ಯುವ ಘಟಕದ ಅಧ್ಯಕ್ಷ ಪ್ರಮೋದ ಇನಾಮತಿ, ಪಂಚಮಸಾಲಿ ಸಂಘದ ಪ್ರ. ಕಾರ್ಯದರ್ಶಿ ಅಶೋಕ ಹಂದ್ರಾಳ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಪ್ರೊ. ಸಿ.ಎಸ್. ಅರಸನಾಳ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಜುನಾಥ ಮುಧೋಳ ನಿರೂಪಿಸಿದರು.