ಸವಣೂರು: ನಿತ್ಯದ ವಿದ್ಯಾರ್ಥಿ ಜೀವನದಲ್ಲಿ ಪುಸ್ತಕದ ಜ್ಞಾನದೊಂದಿಗೆ ವಾಸ್ತವ ಜಗತ್ತಿಗೆ ಹತ್ತಿರವಾಗಿ ಮುಂದಿನ ಉತ್ತಮ ಜೀವನ ರೂಪಿಸುವ ಹಂತವಾಗಿ ಎಲ್ಲ ಇಲಾಖೆಗಳ ಜ್ಞಾನವನ್ನು ಹೊಂದುವುದು ಬಹಳ ಮುಖ್ಯವಾಗಿದೆ. ಅದರೊಂದಿಗೆ ಪೊಲೀಸ್ ಇಲಾಖೆಯ ಕೆಲಸ ಕಾರ್ಯಗಳ ಜ್ಞಾನ ಇಂದು ಅತಿ ಮುಖ್ಯವಾಗಿದೆ ಎಂದು ಸವಣೂರು ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಪ್ರಮೀಳಮ್ಮ ಹೇಳಿದರು.
ಕಾನೂನನ್ನು ಗೌರವಿಸುವ ಎಲ್ಲರನ್ನೂ ಪೊಲೀಸರು ಗೌರವಿಸುತ್ತಾರೆ. ಆದ್ದರಿಂದ ಎಲ್ಲರೂ ಕಾಯಿದೆ, ಕಾನೂನುಗಳನ್ನು ಪಾಲಿಸಿ ಗೌರವಿಸಬೇಕು. ಇದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡಲು ಪೊಲೀಸ್ ಇಲಾಖೆಗೆ ಸಹಕಾರಿಯಾಗಲಿದೆ ಎಂದರು.ರೋವರ್ಸ್ ರೆಂಜರ್ಸ್ ಘಟಕದ ವಿದ್ಯಾರ್ಥಿಗಳಿಗೆ ಪೊಲೀಸ್ ಠಾಣೆಯ ಸಿಬ್ಬಂದಿಯು ನಿರ್ವಹಿಸುವ ಕೆಲಸ, ಠಾಣೆಯ ಫೈಲ್, ರಿಜಿಸ್ಟರ್, FIR, LPT, ಸುಮೊಟೋ ಕೇಸ್, ಕಸ್ಟಡಿ, ಅರೆಸ್ಟ್, ಅರೆಸ್ಟ್ ವಾರಂಟ್, ಆಯ್ಕೆ, ಉದ್ಯೋಗಾವಕಾಶ, ಸೇವೆಗಳು, ಮಹಿಳಾ ಸುರಕ್ಷತೆ, ಪೊಲೀಸ್ ರ್ಯಾಕಿಂಗ್ ವ್ಯವಸ್ಥೆ ಮುಂತಾದ ವಿಷಯಗಳನ್ನು ತಿಳಿಸುವ ಮೂಲಕ ವಿದ್ಯಾರ್ಥಿಗಳ ಜ್ಞಾನವನ್ನು ಹೆಚ್ಚಿಸಿದರು.ತಮ್ಮ ಜೀವನದಲ್ಲಿ ಪ್ರಥಮ ಬಾರಿಗೆ ಪೊಲೀಸ್ ಠಾಣೆಯ ಮೆಟ್ಟಿಲು ಹತ್ತಿ ಅತಿ ಸಮೀಪದಲ್ಲಿ ಪೊಲೀಸರನ್ನು ಆತ್ಮಿಯತೆಯಿಂದ ಮಾತನಾಡಿಸಿದಾಗ ವಿದ್ಯಾರ್ಥಿಗಳು ಪುಳಕಿತಗೋಂಡು ಸೆಲ್ಫಿ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು.ಪದವಿ ಮಹಾವಿದ್ಯಾಲಯದ ಪ್ರಾಚಾರ್ಯ ಮಾಲತೇಶ ದಾನಪ್ಪನವರ ಮಾತನಾಡಿ, ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳಿಗೆ ಎಲ್ಲ ರೀತಿಯ ಜ್ಞಾನ ಬಹಳ ಮುಖ್ಯವಾಗಿದೆ. ಬಿಡುವಿಲ್ಲದ ಕೆಲಸದ ಮಧ್ಯೆ ರೂವರ್ಸ್ ರೆಂಜರ್ಸ್ ಘಟಕದ ವಿದ್ಯಾರ್ಥಿಗಳನ್ನು ಆಹ್ವಾನಿಸಿ ಅವರಿಗೆ ಪೊಲೀಸ್ ಇಲಾಖೆಯ ಕಾರ್ಯವೈಖರಿಯ ಕುರಿತು ಅಗತ್ಯ ಮಾಹಿತಿ ನೀಡುತ್ತಿರುವುದು ಶ್ಲಾಘನೀಯ ಕಾರ್ಯ ಎಂದು ಧನ್ಯವಾದ ಅರ್ಪಿಸಿದರು.ರೋವರ್ಸ್ ಲೀಡರ್ ಆಯ್. ಕೆ. ಕಲ್ಮನಿ, ರೇಂಜರ್ಸ್ ಲೀಡರ್ ಭಾವನಾ ಮಡ್ಲಿಕರ್, ವಿದ್ಯಾರ್ಥಿಗಳಾದ ಶ್ವೇತಾ, ಐಶ್ವರ್ಯ, ಚೇತನ, ವಿನಾಯಕ, ಕರಬಸಪ್ಪ ಸೇರಿದಂತೆ ರೋವರ್ಸ್ ರೇಂಜರ್ಸ್ ಘಟಕದ ಎಲ್ಲ ವಿದ್ಯಾರ್ಥಿಗಳು ಹಾಜರಿದ್ದರು. ಅಮಿತ ಸರ್ವದೆ ಸ್ವಾಗತಿಸಿ, ವಂದಿಸಿದರು.