ಕನಕಗಿರಿ: ಮಾತೃಪೂರ್ಣ ಯೋಜನೆಯಡಿ ಬಾಣಂತಿಯರಿಗೆ ನೀಡಿದ ಮೊಟ್ಟೆಗಳು ಕಳಪೆ ಗುಣಮಟ್ಟದಿಂದ ಕೂಡಿವೆ ಎಂದು ಆರೋಪಿಸಿದ ಕುಟುಂಬಸ್ಥರು ಅಂಗನವಾಡಿ ಕೇಂದ್ರದ ಎದುರು ಮೊಟ್ಟೆ ಎಸೆದು ಆಕ್ರೋಶ ವ್ಯಕ್ತಪಡಿಸಿದ ಘಟನೆ ತಾಲೂಕಿನ ಅಡವಿಬಾವಿ ಚಿಕ್ಕತಾಂಡಾದಲ್ಲಿ ಮಂಗಳವಾರ ನಡೆದಿದೆ.
ಇದರಿಂದ ಆಕ್ರೋಶಗೊಂಡ ಓರ್ವ ಬಾಣಂತಿಯ ಕುಟುಂಬದ ಹರೀಶ ಮಂಗಳವಾರ ಉಳಿದ ಮೊಟ್ಟೆಗಳನ್ನು ಅಂಗನವಾಡಿಗೆ ಮರಳಿಸಿದ್ದಾರೆ. ಅಲ್ಲದೇ ಗ್ರಾಮಸ್ಥರು ಅಂಗನವಾಡಿ ಕೇಂದ್ರಕ್ಕೆ ತೆರಳಿದ್ದಾಗ ತಾನು ಮರಳಿಸಿದ ಮೊಟ್ಟೆ ಜನತೆಗೆ ತೋರಿಸಲು ಕೇಳಿದಾಗ ಅಂಗನವಾಡಿಯವರು ಬದಲಿ ಮೊಟ್ಟೆ ನೀಡಿದ್ದಕ್ಕೆ ಆಕ್ರೋಶಗೊಂಡು ಮೊಟ್ಟೆಗಳನ್ನು ಸಾರ್ವಜನಿಕವಾಗಿಯೇ ಎಸೆದು ಆಕ್ರೋಶ ವ್ಯಕ್ತಪಡಿಸಿದರು.
ಗರ್ಭಿಣಿ, ಬಾಣಂತಿಯರು, ಮಕ್ಕಳು ಇಂಥ ಕಳಪೆ ಗುಣಮಟ್ಟದ ಮೊಟ್ಟೆ ತಿಂದು ತೊಂದರೆಗೊಳಗಾದರೆ ಯಾರು ಹೊಣೆ? ಎಂದು ಪ್ರಶ್ನಿಸಿದರು.ಅಂಗನವಾಡಿಗೆ ಸರಬರಾಜಾಗುವ ಮೊಟ್ಟೆ ಮೇಲ್ವಿಚಾರಕರು ಪರಿಶೀಲನೆ ಮಾಡದಿರುವುದೇ ಇದಕ್ಕೆಲ್ಲ ಕಾರಣವಾಗಿದೆ ಎಂದು ಮಂಜುನಾಥ ಬೇಸರ ವ್ಯಕ್ತಪಡಿಸಿದರು. ಈ ರೀತಿಯ ವ್ಯವಸ್ಥೆ ಕೇವಲ ಇದೊಂದೇ ಅಂಗನವಾಡಿಗೆ ಸೀಮಿತವಾಗಿಲ್ಲ. ಪ್ರಶ್ನಿಸದ ಎಲ್ಲ ಕೇಂದ್ರಗಳಲ್ಲಿಯೂ ಇದೇ ಗತಿಯಾಗಿದೆ ಎಂದು ಗ್ರಾಮಸ್ಥರು ದೂರಿದರು.
ಕಳಪೆ ಗುಣಮಟ್ಟದ ಮೊಟ್ಟೆ ವಿತರಿಸಿದ್ದಕ್ಕೆ ತಾಂಡಾ ಜನರು ಸರ್ಕಾರ ಹಾಗೂ ಇಲಾಖೆಯ ಅಧಿಕಾರಿಗಳ ವಿರುದ್ಧ ಹರಿಹಾಯ್ದರು. ಕಳಪೆಯಾಗಿರುವ ಮೊಟ್ಟೆ ಮೊಬೈಲ್ನಲ್ಲಿ ವೀಕ್ಷಿಸಿದ ಸಿಡಿಪಿಒ ಇಂಥ ಮೊಟ್ಟೆ ವಿತರಣೆ ಮಾಡಬಾರದು ಎಂದು ತಿಳಿಸಿದರಲ್ಲದೇ ಕೇಂದ್ರದಲ್ಲಿನ ಎಲ್ಲ ಮೊಟ್ಟೆ ಪರಿಶೀಲಿಸಿ ನೋಡಿದಾಗ ಗಾತ್ರದಲ್ಲಿಯೂ ಚಿಕ್ಕದಾಗಿರುವುದಕ್ಕೆ ಬೇಸರ ವ್ಯಕ್ತಪಡಿಸಿದರು. ಅಂಗನವಾಡಿ ಕೇಂದ್ರ ೨ ರಲ್ಲಿನ ಮೊಟ್ಟೆ ತರಿಸಿ ಪರಿಶೀಲಿಸಿದಾಗ ಅವು ಸಹ ಅದೇ ಗಾತ್ರವಾಗಿರುವುದಕ್ಕೆ ಜನತೆ ಬೇಸರ ವ್ಯಕ್ತಪಡಿಸಿದರು. ಭೀಮಣ್ಣ, ರಾಘವೇಂದ್ರ, ಚಿನ್ನಯ್ಯ ಇತರರಿದ್ದರು.