ಬೇಲೂರು: ಶ್ರೀ ಯೋಗಿ ನಾರಾಯಣ ಯತೀಂದ್ರರ 3ನೇ ವರ್ಷದ ಜಯಂತ್ಯುತ್ಸವದ ಅಂಗವಾಗಿ ವಿಶ್ವ ವಿಖ್ಯಾತ ಶ್ರೀ ಚನ್ನಕೇಶವ ಸ್ವಾಮಿ ರಥೋತ್ಸವಕ್ಕೆ ಆಗಮಿಸಿದ ಭಕ್ತರಿಗೆ ತಾಲೂಕು ಬಲಿಜ ಸಂಘದ ವತಿಯಿಂದ ಪ್ರಸಾದ ವಿನಿಯೋಗ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ತಾಲೂಕು ಬಲಿಜ ಸಂಘದ ಅಧ್ಯಕ್ಷ ಹೊನ್ನಪ್ಪ ಶೆಟ್ಟಿ ಮಾತನಾಡಿ, ಪ್ರತಿ ವರ್ಷ ಜಾತ್ರೆ ಸಂದರ್ಭದಲ್ಲಿ ತಂಪು ಪಾನೀಯ ನೀಡುತ್ತಿದ್ದೆವು. ಆದರೆ ಈ ಬಾರಿ ಪ್ರಸಾದ ವ್ಯವಸ್ಥೆ ಮಾಡಲಾಗಿದ್ದು, ರುಚಿ ಶುಚಿಯಾದ ವಾಂಗಿಬಾತ್ ತಯಾರಿಸಿ ಭಕ್ತರಿಗೆ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಸಮಾಜ ಸೇವಾ ಕಾರ್ಯಕ್ರಮಗಳನ್ನು ಸಂಘದ ವತಿಯಿಂದ ನಡೆಸಲು ರೂಪುರೇಷೆ ಸಿದ್ಧಗೊಳಿಸಲಾಗುತ್ತಿದೆ ಎಂದರು. ಶ್ರೀ ಯೋಗಿ ನಾರಾಯಣ ಯತೀಂದ್ರರು ದೇಶದಾದ್ಯಂತ ಕೈವಾರ ತಾತಯ್ಯ ಎಂದೇ ಪ್ರಸಿದ್ಧರಾಗಿದ್ದಾರೆ. ದೇಶ ಹಾಗೂ ಪ್ರಪಂಚದಲ್ಲಿ ಮುಂದೆ ಏನೆಲ್ಲ ಆಗುತ್ತದೆ ಎಂಬ ಕಾಲಜ್ಞಾನವನ್ನು ಹೇಳುವ ಮೂಲಕ ಎಲ್ಲರನ್ನೂ ಅಚ್ಚರಿಪಡಿಸಿದ್ದವರು ಕೈವಾರ ತಾತಯ್ಯನವರು. ಬೆಂಗಳೂರಿನಿಂದ ಸುಮಾರು 60 ಕಿಲೋಮೀಟರ್ ದೂರದಲ್ಲಿರುವ ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿ ತಾಲೂಕಿನ ಕೈವಾರ ತಾತಯ್ಯನ ಕ್ಷೇತ್ರ, ಅವರು ಶತಮಾನಗಳ ಹಿಂದೆ ನುಡಿದಿದ್ದ ಕಾಲಜ್ಞಾನ ಮುನ್ನೆಲೆಗೆ ಬಂದ ನಂತರ ಇನ್ನಷ್ಟು ಜನಪ್ರಿಯತೆ ಪಡೆಯಿತು. ಅವರು ನೂರಾರು ವರ್ಷಗಳ ಹಿಂದೆ ತಮ್ಮ ಕಾಲಜ್ಞಾನ ಪುಸ್ತಕದಲ್ಲಿ ಬರೆದಿದ್ದ ಮುಂದಾಗುವ ಭವಿಷ್ಯತ್ತುಗಳು ಈಗ ನಿಜವಾಗುತ್ತಿರುವುದು ಜಗತ್ತಿನ ಅಚ್ಚರಿಗಳಲ್ಲಿ ಒಂದಾಗಿದೆ ಎಂದರು.